ಶಂಕರ್ ಐ ಚಿತ್ರದ ವಿರುದ್ಧ ಸಿಡಿದೆದ್ದ ಮಂಗಳಮುಖಿಯರು
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳಿರುವ 'ಐ' ಚಿತ್ರಕ್ಕೆ ವಿವಾದವೊಂದು ಎದುರಾಗಿದೆ. 'ಐ' ಚಿತ್ರದಲ್ಲಿನ ಕೆಲವು ಸನ್ನಿವೇಶಗಳು ತಮ್ಮ ಮನೋಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಮಂಗಳಮುಖಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಐ ಚಿತ್ರದಲ್ಲಿ ಸೆಲೆಬ್ರಿಟಿ ಕೇಶ ವಿನ್ಯಾಸಕನ ಪಾತ್ರದ ಚಿತ್ರೀಕರಣ ತಮ್ಮ ಮನೋಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿರುವ ಅವರು ಚಿತ್ರದ ವಿರುದ್ಧ ಸಿಡಿದಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ಅವರ ಮನೆಯ ಮುಂದೆ ಹಾಗೂ ಸೆನ್ಸಾರ್ ಮಂಡಳಿ ಕಚೇರಿ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಚೆನ್ನೈ ನಗರದ ಟ್ರಾನ್ಸ್ ಜೆಂಡರ್ಸ್ ಸಂಘಟನೆ ಹೇಳಿಕೊಂಡಿದೆ. [ಐ ಚಿತ್ರ ವಿಮರ್ಶೆ]
ಈ ಹಿನ್ನೆಲೆಯಲ್ಲಿ ಶಂಕರ್ ಅವರ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಚಿತ್ರದಲ್ಲಿ ಓಜಾಸ್ ರಜನಿ ಪೋಷಿಸಿರುವ ಕೇಶ ವಿನ್ಯಾಸಕನ ಪಾತ್ರ ಈಗ ವಿವಾದಕ್ಕೆ ಕಾರಣವಾಗಿರುವುದು.

ರಜನಿಕಾಂತ್, ಐಶ್ವರ್ಯಾ ರೈ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳ ಕೇಶ ವಿನ್ಯಾಸಕರಾಗಿ ಆಸ್ಮ ಜಾಸ್ಮಿನ್ ಎಂಬ ಪಾತ್ರ ಬರುತ್ತದೆ. ಆದರೆ ಆ ಪಾತ್ರವನ್ನು ವಿಲನ್ ನಂತೆ ಚಿತ್ರೀಕರಿಸಿ ತಮ್ಮ ಮನೋಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ ಮಂಗಳಮುಖಿಯರು.
ಚಿಯಾನ್ ವಿಕ್ರಮ್, ಅಮಿ ಜಾಕ್ಸನ್ ಅಭಿನಯದ ಭಾರಿ ಬಜೆಟ್ ನ ಈ ಚಿತ್ರವನ್ನು ಆಸ್ಕರ್ ರವಿಚಂದ್ರನ್ ನಿರ್ಮಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗಿರುವ ಈ ಚಿತ್ರ ಬಾಕ್ಸ್ ಆಫೀಸಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ.


Click it and Unblock the Notifications











