CCL 2026 Final : 2 ವರ್ಷದ ಹಳೆ ಲೆಕ್ಕ ಚುಕ್ತಾ ಮಾಡಿದ ಕಿಚ್ಚನ ಪಡೆ- ಫೈನಲ್ನಲ್ಲಿ ಬೆಂಗಾಲ್ನ ಮಣಿಸಿದ ಬುಲ್ದೋಜರ್ಸ್
ಅದು 2024.. ಅದಾಗಲೇ ಎರಡು ಬಾರಿ ಸಿಸಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಕರ್ನಾಟಕ ಬುಲ್ದೋಜರ್ಸ್ ತಂಡ ಐದನೇ ಬಾರಿ ಫೈನಲ್ ಪ್ರವೇಶ ಮಾಡಿತ್ತು. ಎದುರಾಳಿಯಾಗಿ ಇದ್ದಿದ್ದು ಬೆಂಗಾಲ್ ಟೈಗರ್ಸ್. ಅಲ್ಲಿಯವರೆಗಿನ ಹತ್ತು ಸೀಸನ್ನಲ್ಲಿ ಒಂದು ಬಾರಿ ಕೂಡ ಬೆಂಗಾಲ್ ಫೈನಲ್ ತಲುಪಿರಲಿಲ್ಲ. ಫೈನಲ್ ಬಿಡಿ ಸೆಮಿಫೈನಲ್ನ್ನೂ ಕೂಡ ಪ್ರವೇಶ ಮಾಡಿರಲಿಲ್ಲ. ಈ ಹಿನ್ನೆಲೆ ಕರ್ನಾಟಕ ಬುಲ್ದೋಜರ್ಸ್ ತಂಡಕ್ಕೆ ಬೆಂಗಾಲ್ ಟೈಗರ್ಸ್ ಸುಲಭ ತುತ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ.. ಆ ಫೈನಲ್ನಲ್ಲಿ ಬೆಂಗಾಲ್ ಎಲ್ಲರ ಲೆಕ್ಕಾಚಾರವನ್ನು ಬುಡಮೇಲಾಗಿಸಿತ್ತು. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಹನ್ನೆರಡು ರನ್ಗಳಿಂದ ಮಣಿಸಿತ್ತು. ಅಸಂಖ್ಯಾತ ಕನ್ನಡ ಚಿತ್ರರಂಗದ ಕ್ರೀಡಾಭಿಮಾನಿಗಳ ಆಸೆಗೆ ತಣ್ಣೀರೆರಚಿತ್ತು. ಎರಡು ವರ್ಷಗಳ ಹಿಂದಿನ ಈ ಸೋಲಿನ ಪ್ರತೀಕಾರವನ್ನು ಕರ್ನಾಟಕ ಬುಲ್ಡೋಜರ್ಸ್ ಇಂದು (ಫೆಬ್ರವರಿ 1) ತೀರಿಸಿಕೊಂಡಿದೆ. ಸಿಸಿಎಲ್ ಹನ್ನೆರಡನೇ ಆವೃತ್ತಿಯ ಫೈನಲ್ನಲ್ಲಿ ಗೆಲುವಿನ ಪತಾಕೆ ಹಾರಿಸಿದೆ.

ಹೌದು, ಕೋಯಂಬತ್ತೂರ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಾಲ್ ಟೈಗರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜಾಯ್ ಮುಖರ್ಜಿ ಮತ್ತು ಉದಯ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಪಂದ್ಯದ ಎರಡನೇ ಓವರ್ನಲ್ಲಿಯೇ ಸುನೀಲ್ ಬೆಂಗಾಲ್ಗೆ ಆಘಾತ ನೀಡಿದರು. ಉದಯ್ ಸಿಂಗ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಆ ನಂತರ ಕಳೆದ ಬಾರಿ ತಲೆ ನೋವಾಗಿದ್ದ ಮತ್ತು ಫೈನಲ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದ ಜ್ಯಾಮಿ ಕ್ರೀಸ್ಗೆ ಬಂದರು. ಈ ಬಾರಿಯೂ ಅತ್ಯುತ್ತಮವಾದ ಫಾರ್ಮ್ನಲ್ಲಿರುವ ಜ್ಯಾಮಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಮತ್ತೆಲ್ಲಿ ಮುಳುವಾಗುತ್ತಾರೆ ಎನ್ನುವ ಭಯ ಇದ್ದೇ ಇತ್ತು. ಆದರೆ ಜೆಕೆ ಈ ಬಾರಿ ಜ್ಯಾಮಿಗೆ ಅಬ್ಬರಿಸುವ ಅವಕಾಶ ನೀಡಲಿಲ್ಲ. ನಾಲ್ಕು ರನ್ ಗಳಿಸಿದ್ದ ಜ್ಯಾಮಿಯನ್ನು ಕ್ಲೀನ್ ಬೋಲ್ಡ್ ಮಾಡಿದರು.
ಜ್ಯಾಮಿ ವಿಕೆಟ್ ಕಳೆದುಕೊಂಡ ನಂತರ ರನ್ ಗಳಿಸಲು ಪರದಾಡಿದ ಬೆಂಗಾಲ್ ಟೈಗರ್ಸ್ 8 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. 9ನೇ ಓವರ್ನಲ್ಲಿ ಪ್ರತಾಪ್ ನಾರಾಯಣ್ 14 ರನ್ಗಳನ್ನು ಬಿಟ್ಟುಕೊಟ್ಟರಾದರೂ ಆ ನಂತರ ಒಟ್ಟಾರೆಯಾಗಿ 28ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು.
ಇನ್ನೇನು ಬೆಂಗಾಲ್ ಟೈಗರ್ಸ್ ಲಯ ಕಂಡುಕೊಂಡಿದೆ ಎಂದುಕೊಳ್ಳುವಾಗಲೇ ಬೆಂಗಾಲ್ ನಾಯಕ ಜೀಶು ಸೇನ್ಗುಪ್ತಾ 17 ರನ್ಗಳಿಸಿ ರನ್ ಔಟ್ ಆದರು. ಕ್ಯಾಪ್ಟನ್ ಬೆನ್ನ ಹಿಂದೆಯೇ ಪೆವಿಲಿಯನ್ ಪರೇಡ್ ಮಾಡಿದ ಬೆಂಗಾಲ್ ಟೈಗರ್ಸ್ ಒಂದಾದ ಮೇಲೊಂದರಂತೆ ವಿಕೆಟ್ಗಳನ್ನು ಕಳೆದುಕೊಂಡಿತು. 13ನೇ ಓವರ್ನಲ್ಲಿ 93 ರನ್ ಗಳಿಸಿದ್ದ ಬೆಂಗಾಲ್ ಆ ನಂತರ 99ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

9ನೇ ವಿಕೆಟ್ಗೆ ಜೊತೆಯಾದ ಇಂದ್ರಶೀಶ್ ಮತ್ತು ಆನಂದ, ಬೆಂಗಾಲ್ ತಂಡವನ್ನು ಗೌರವಯುತ ಸ್ಕೋರ್ನತ್ತ ಕರೆದೊಯ್ಯುವ ಪ್ರಯತ್ನ ಮಾಡಿದರು. 30 ರನ್ಗಳ ಜೊತೆಯಾಟವಾಡಿದರು.ಬೆಂಗಾಲ್ ಪರವಾಗಿ ಜಾಯ್ ಮುಖರ್ಜಿ ಅತ್ಯಧಿಕ 50 ರನ್ ಬಾರಿಸಿದರು. ಬೆಂಗಾಲ್ ಫೈನಲ್ ತಲುಪುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಹುಲ್ ಮಜುಮ್ದಾರ್ ಅವರ ಬ್ಯಾಟ್ ಕೂಡ ಇಂದು ಸದ್ದು ಮಾಡಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ ಬೆಂಗಾಲ್ ತಂಡ 129 ರನ್ಗಳಿಗೆ ಆಲ್ಔಟ್ ಆಯ್ತು.
130ರನ್ಗಳ ಗುರಿ ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ರಾಹುಲ್ ಮಜುಮ್ದಾರ್ ಆರಂಭಿಕ ಆಘಾತ ನೀಡಿದರು. ಮೊದಲನೇ ಓವರ್ನಲ್ಲಿ ಎಲ್ಬಿಡಬ್ಲೂ ಬಲೆಗೆ ಸಿಲುಕಿ ನಿರೂಪ್ ಭಂಡಾರಿ ಪೆವಿಲಿಯನ್ ಸೇರಿದರು. ನಿರೂಪ್ ನಿರ್ಗಮನದ ನಂತರ ರಾಜೀವ್ ಹನು ಅಬ್ಬರಿಸಲು ಶುರು ಮಾಡಿದರು. ಕೇವಲ 23 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಆ ನಂತರ ರತ್ನದೀಪ್ ಬೌಲಿಂಗ್ನಲ್ಲಿ 35 ಎಸೆತಗಳಲ್ಲಿ 69 ರನ್ ಗಳಿಸಿ ಔಟಾದರು. ರಾಜೀವ್ ಔಟಾದ ನಂತರ ಬಂದ ಕರಣ್ ಆರ್ಯನ್ 3 ರನ್ ಗಳಿಸಿ ಔಟಾದರು.
ಕಳೆದ ಸೀಸನ್ನಲ್ಲಿ ಅಬ್ಬರಿಸಿದ್ದ ಡಾರ್ಲಿಂಗ್ ಕೃಷ್ಣ ಫೈನಲ್ ಪಂದ್ಯದಲ್ಲಿಯೂ ನಿರಾಸೆ ಮಾಡಿದರು. 20 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ರತ್ನದೀಪ್ಗೆ ವಿಕೆಟ್ ಒಪ್ಪಿಸಿದರು. ಹೀಗೆ 13 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕರ್ನಾಟಕ ಬುಲ್ದೋಜರ್ಸ್ ನೂರು ರನ್ ಗಳಿಸಿತ್ತಾದರೂ ರಾಜೀವ್ ಹನು ಔಟಾದ ನಂತರ ಬೌಂಡರಿಗಳ ಬರ ಎದುರಿಸಿತ್ತು. ಬೆಂಗಾಲ್ ತಂಡ ಕರ್ನಾಟಕ ಬುಲ್ದೋಜರ್ಸ್ ಬ್ಯಾಟರ್ಗಳನ್ನು ಕಟ್ಟಿ ಹಾಕಿತ್ತು. ಕರ್ನಾಟಕ ಬುಲ್ಡೋಜರ್ಸ್ ತಂಡ ಒತ್ತಡಕ್ಕೊಳಗಾಗಿತ್ತು.
ಇದೇ ಸಮಯದಲ್ಲಿ ಅಂಪೈರ್ ಅನುಮತಿ ನೀಡದಿದ್ದರೂ ಸುದೀಪ್ ಮೈದಾನದೊಳಗೆ ಬಂದು ಕ್ರೀಸ್ನಲ್ಲಿದ್ದ ಮಂಜುನಾಥ್ ಮತ್ತು ಜಯರಾಂ ಕಾರ್ತಿಕ್ ಅವರ ಜೊತೆ ಜೊತೆ ಚರ್ಚೆ ಮಾಡಿದರು. ಸಹಜವಾಗಿ ಬೆಂಗಾಲ್ ತಂಡ ಸುದೀಪ್ ಅವರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು.
ಕೊನೆಗೂ 48 ಬಾಲ್ಗಳ ನಂತರ ಜೆಕೆ ಬ್ಯಾಟ್ನಿಂದ ಬೌಂಡರಿ ಹೊರ ಹೊಮ್ಮಿತು. ಕೊನೆಯ ಐದು ಓವರ್ನಲ್ಲಿ 17 ರನ್ಗಳ ಅವಶ್ಯಕತೆ ಕರ್ನಾಟಕ ಬುಲ್ದೋಜರ್ಸ್ ತಂಡಕ್ಕಿತ್ತು. 16ನೇ ಓವರ್ನಲ್ಲಿ 7 ರನ್ಗಳನ್ನು ಬುಲ್ದೋಜರ್ಸ್ ಗಳಿಸಿತು. ಕೊನೆಯ 24 ಬಾಲ್ಗಳಲ್ಲಿ ಗೆಲುವಿಗೆ 10 ರನ್ಗಳು ಬೇಕಿದ್ದವು. ಅಂತಿಮವಾಗಿ ಮಂಜುನಾಥ್ ಎರಡು ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ದಡಕ್ಕೆ ತಲುಪಿಸಿದರು. ಈ ಮೂಲಕ ಹನ್ನೆರಡು ವರ್ಷಗಳ ನಂತರ ಕರ್ನಾಟಕ ಬುಲ್ದೋಜರ್ಸ್ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತು. ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.


Click it and Unblock the Notifications











