ಚಿರಂಜೀವಿ ಸರ್ಜಾ ಜೊತೆ ಮಾಡಲು ಆಗದ ಸಿನಿಮಾ ನೆನಪಿಸಿಕೊಂಡ ನಾಗಾಭರಣ
ಇಂದು (ಅಕ್ಟೋಬರ್ 17) ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಇದೇ ದಿನ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಮತ್ತೆ ಸಿನಿಮಾಕ್ಕೆ ಮರಳುತ್ತಿದ್ದಾರೆ.
ಚಿರು ಸರ್ಜಾ ಹಾಗೂ ಮೇಘನಾ ರಾಜ್ಗೆ ಆತ್ಮೀಯ ಸ್ನೇಹಿತರಾಗಿರುವ ಪನ್ನಗಾಭರಣಚ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಮೂಲಕ ಮೇಘನಾ ರಾಜ್ ನಟನೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಚಿರು ಅಗಲಿಕೆ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಮೇಘನಾ ರಾಜ್ ಕೆಲವು ಜಾಹಿರಾತುಗಳಲ್ಲಿಯಷ್ಟೆ ನಟಿಸಿದ್ದರು. ಈಗ ಮತ್ತೆ ಸಿನಿಮಾಕ್ಕೆ ವಾಪಸ್ಸಾಗಿದ್ದಾರೆ.
ಇನ್ನೂ ಹೆಸರಿಡದ ಈ ಸಿನಿಮಾದ ಸುದ್ದಿಗೋಷ್ಠಿ ಇಂದು ನಡೆದಿದ್ದು, ಪನ್ನಗಾಭರಣ ತಂದೆ ನಾಗಾಭರಣ, ಮೇಘನಾ ರಾಜ್, ಸುಂದರ್ ರಾಜ್, ಪನ್ನಗಾಭರಣ, ನಿರ್ದೇಶನದ ವಿವೇಕ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಇನ್ನೂ ಕೆಲವು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಾಭರಣ, ಚಿರಂಜೀವಿ ಸರ್ಜಾ ಜೊತೆ ಮಾಡಬೇಕಾಗಿದ್ದ ಸಿನಿಮಾ ಬಗ್ಗೆ ಭಾವುಕರಾಗಿ ಮಾತನಾಡಿದರು.

''ಜುಗಾರಿ ಕ್ರಾಸ್ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ತಯಾರಿ ನಡೆಸಿದ್ದೆ. ನಮ್ಮ ಮನೆಯಲ್ಲಿ ಈಗಲೂ ಜುಗಾರಿ ಕ್ರಾಸ್ನ ದೊಡ್ಡ ಚಿತ್ರ ಇದೆ. ಅವನ ನೆನಪಿಗಾಗಿ ಅದನ್ನು ಮನೆಯಲ್ಲಿ ಹಾಕಿಕೊಂಡಿದ್ದೇನೆ. ಲೊಕೇಶನ್ ಹೇಗಿರಬೇಕು ಎಂಬದನ್ನೆಲ್ಲ ಕಲ್ಪಿಸಿ ಮಾಡಿಸಿದ್ದ ಚಿತ್ರ ಅದು. ಅವನ ಮೂಲಕ ನಾನು ಜುಗಾರಿ ಕ್ರಾಸ್ ಕನಸು ನನಸು ಮಾಡಿಕೊಳ್ಳುತ್ತೇನೆ ಎಂಬ ಆಸೆ ಇತ್ತು. ಆಗಲಿಲ್ಲ. ಅವನಂಥಹಾ ಚೇತನ ಮತ್ತೆ ಸಿಗುತ್ತಾನೊ ಇಲ್ಲವೊ ಗೊತ್ತಿಲ್ಲ'' ಎಂದು ಭಾವುಕರಾದರು ನಾಗಾಭರಣ.
ನಿರ್ದೇಶಕ ನಾಗಾಭರಣ, ಪೂರ್ಣ ಚಂದ್ರ ತೇಜಸ್ವಿ ರಚಿತ 'ಜುಗಾರಿ ಕ್ರಾಸ್' ಕತೆಯನ್ನು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಅದರ ನಾಯಕನ ಪಾತ್ರಕ್ಕೆ ಚಿರಂಜೀವಿ ಸರ್ಜಾ ಅನ್ನು ಕಲ್ಪಿಸಿಕೊಂಡಿದ್ದರು. ಆದರೆ ಅದು ಸೆಟ್ಟೇರುವ ಮುನ್ನವೇ ಚಿರು ಸರ್ಜಾ ಇಹಲೋಕ ತ್ಯಜಿಸಿದರು. ನಾಗಾಭರಣ ಈ ಮುಂಚೆ ಪೂರ್ಣ ಚಂದ್ರ ತೇಜಸ್ವಿ ಅವರ 'ತಬರನ ಕತೆ' ಯನ್ನು ಸಿನಿಮಾ ಮಾಡಿದ್ದರು.
ಮುಂದುವರೆದು ಮಾತನಾಡಿದ ನಾಗಾಭರಣ, ''ಕೊರೊನಾ ಕಾಲದಲ್ಲಿ ಸಾಂಸ್ಕೃತಿಕವಾಗಿ ನಾವು ಮತ್ತೆ ಪುನಶ್ಚೇತನಗೊಳ್ಳಬೇಕಿದೆ. ಈ ಸಾಂಸ್ಕೃತಿಕ ಪುನಶ್ಚೇತನದಲ್ಲಿ ಸಿನಿಮಾಗಳ ಪಾತ್ರ ದೊಡ್ಡದಾಗಿದೆ. ನಮಗೆ ಈಗ ಕಂಟೆಂಟ್ ಕ್ರಿಯೇಟರ್ಗಳ ಅವಶ್ಯಕತೆ ಹೆಚ್ಚಿಗಿದೆ. ನಾವು 70-80 ರಲ್ಲಿ ಚಿತ್ರರಂಗಕ್ಕೆ ಬಂದಾಗ ಯಾರೂ ನಮ್ಮನ್ನು ಸೇರಿಸಿಕೊಂಡಿರಲಿಲ್ಲ. ನಮ್ಮ ಸಿನಿಮಾಗಳನ್ನು ಅವರು ನಂಬುತ್ತಿರಲಿಲ್ಲ. ವಿಷ್ಣುವರ್ಧನ್ಗೆ ಸಿನಿಮಾ ಮಾಡು, ಅಂಬರೀಶ್ಗೆ ಸಿನಿಮಾ ಮಾಡು ಎನ್ನುತ್ತಿದ್ದರು. ಆದರೆ ಯಾರೂ ಒಳ್ಳೆಯ ಸಿನಿಮಾ ಮಾಡು ಎನ್ನುತ್ತಿರಲಿಲ್ಲ. ನಮ್ಮ ಪ್ರತಿಭೆಯನ್ನು ಗುರುತಿಸಿದ್ದು ಕೆಲವೇ ನಿರ್ಮಾಪಕರು ಎಂದ ನಾಗಾಭರಣ ಅದರಲ್ಲಿ ಒಬ್ಬರು ಪಾರ್ವತಮ್ಮ ರಾಜ್ಕುಮಾರ್'' ಎಂದರು.
''ವಾಣಿಜ್ಯ ಸಿನಿಮಾಗಳು ವರ್ಷಕ್ಕೆ 10 ರಿಂದ 15 ಬರಬಹುದು. ಶೇ 90% ಸಿನಿಮಾಗಳು ಸಣ್ಣ ಬಜೆಟ್ನ ಸಿನಿಮಾಗಳೇ ಆಗಿವೆ. ಕೆಲವು ನಿರ್ದೇಶಕರು ಈಗಲೂ ಅತ್ಯುತ್ತಮ ಕಂಟೆಂಟ್ಗಳನ್ನು ನೀಡುತ್ತಿದ್ದಾರೆ. ಒಳ್ಳೆಯ ನಿರ್ದೇಶಕರು ಮತ್ತು ದೊಡ್ಡ ಬ್ಯಾನರ್ಗಳು ಒಟ್ಟಿಗೆ ಕೆಲಸ ಮಾಡಬೇಕು ಆಗಲೇ ಕನ್ನಡ ಸಿನಿಮಾ ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯ. ಒಳ್ಳೆಯ ಕಂಟೆಂಟ್ ಕ್ರಿಯೇಟರ್ಗಳಿಗೆ ನನ್ನ ಮಗನ ಸಿನಿಮಾ ನಿರ್ಮಾಣ ಸಂಸ್ಥೆ 'ಪಿಬಿ' ಒಳ್ಳೆಯ ವೇದಿಕೆ ಆಗಲಿದೆ ಎಂಬ ನಿರೀಕ್ಷೆ ನನಗೆ ಇದೆ. ಒಳ್ಳೆಯ ಮನಸ್ಸುಗಳು ಒಟ್ಟು ಸೇರಿ ಮಾಡಿದ ಸಿನಿಮಾಕ್ಕೆ ಒಳ್ಳೆಯದ್ದೇ ಆಗುತ್ತದೆ'' ಎಂದರು ನಾಗಾಭರಣ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್ಲರೂ ಚಿರಂಜೀವಿ ಸರ್ಜಾ ಅವರನ್ನು ನೆನಪಿಸಿಕೊಂಡರು. ಪನ್ನಾಗಭರಣ ಮೊದಲ ಬಾರಿಗೆ ನಿರ್ಮಾಣ ಮಾಡಲು ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದರು. ಮೇಘನಾ ರಾಜ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಹೊಸ ನಿರ್ದೇಶಕ ವಿಶಾಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











