ರೈತ ವಿರೋಧಿ ಹೇಳಿಕೆ: ಕಂಗನಾ ವಿರುದ್ಧ FIR ದಾಖಲಿಸಲು ತುಮಕೂರು ಕೋರ್ಟ್ ಆದೇಶ
ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ತುಮಕೂರು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಕೇಂದ್ರ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ರೈತರನ್ನು ಪರೋಕ್ಷವಾಗಿ ಕಂಗನಾ ರಣಾವತ್ ಭಯೋತ್ಪಾದಕರಿಗೆ ಹೋಲಿಸಿದ್ದರು. ಕಂಗನಾ ಅವರ ಹೇಳಿಕೆ ಖಂಡಿಸಿ ತುಮಕೂರಿನ ವಕೀಲರೊಬ್ಬರು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದರು. ಈ ಪ್ರಕರಣ ಕುರಿತು ಅಕ್ಟೋಬರ್ 5 ರಂದು ಅರ್ಜಿ ವಿಚಾರಣೆ ನಡೆದಿತ್ತು. ಆದರೆ, ಅಕ್ಟೋಬರ್ 9 ರಂದು ಆದೇಶ ಕಾಯ್ದಿರಿಸಿತ್ತು. ಇಂದು ಕೋರ್ಟ್ ಆದೇಶ ನೀಡಿದ್ದು, ಎಫ್ ಐ ಆರ್ ದಾಖಲಿಸಲು ಸೂಚಿಸಿದೆ. ಮುಂದೆ ಓದಿ....

ಕಂಗನಾ ರಣಾವತ್ ಟ್ವೀಟ್ನಲ್ಲಿ ಏನಿದೆ?
'ಸಿಎಎಯಿಂದ ಒಬ್ಬರ ನಾಗರೀಕತೆಯೂ ಹೋಗಲಿಲ್ಲ, ಆದರೆ ಇವರು ರಕ್ತದ ನದಿಯನ್ನೇ ಹರಿಸಿದರು. ಅದೇ ಭಯೋತ್ಪಾದಕರು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ. ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳಿದಿರುವವರಿಗೆ ಸರಿಯಾದ ಮಾಹಿತಿ ಕೊಡಬಹುದು, ಆದರೆ ಮಲಗಿರುವಂತೆ ನಟಿಸುತ್ತಿರುವವರಿಗೆ, ದಡ್ಡರಂತೆ ನಟಿಸುತ್ತಿರುವವರಿಗೆ ಏನು ತಿಳಿಹೇಳಿದರೆ ಏನು ಪ್ರಯೋಜನ?' ಎಂದು ಟ್ವೀಟ್ ಮಾಡಿದ್ದರು.

ತಪ್ಪು ಸಾಬೀತು ಆದರೆ ಕ್ಷಮೆ ಕೇಳ್ತೀನಿ
ಕಂಗನಾ ಟ್ವೀಟ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರನೇಯ ದಿನ ಮತ್ತೊಂದು ಟ್ವೀಟ್ ಮಾಡಿದ ಕಂಗನಾ ರಣೌತ್, 'ಪಪ್ಪುವಿನ ಸೇನೆ ಸುಳ್ಳು ಸುದ್ದಿಗಳನ್ನು ಇಟ್ಟುಕೊಂಡು ಗಲಾಟೆಗಳನ್ನು ಮಾಡುತ್ತಿದೆ' ಎಂದಿದ್ದಾರೆ. ನಾನು ರೈತರನ್ನು ಭಯೋತ್ಪಾದಕರು ಎಂದಿಲ್ಲ, ನಾನು ಹಾಗೆ ಹೇಳಿದ್ದಾಗಿ ಸಾಬೀತು ಮಾಡಿದರೆ ನಾನು ಕ್ಷಮೆ ಕೇಳುತ್ತೇನೆ'' ಎಂದಿದ್ದರು.

ಕೇಸ್ ದಾಖಲಿಸಿದ್ದು ಯಾರು?
ಅಂದ್ಹಾಗೆ, ಕಂಗನಾ ರಣಾವತ್ ವಿರುದ್ಧ ದೂರು ದಾಖಲಿಸಿರುವುದು ತುಮಕೂರಿನ ನಿವಾಸಿ ಹಾಗೂ ಹೈ ಕೋರ್ಟ್ ವಕೀಲ ಎಲ್ ರಮೇಶ್ ಕುಮಾರ್. ಸೆಪ್ಟೆಂಬರ್ 22 ರಂದು ಡಿಜಿಪಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು. ಆದ್ರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ, ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
Recommended Video

ಕಂಗನಾಗೆ ನೋಟಿಸ್!
ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಸೂಚಿಸಿದೆ. ಇದು ಕಂಗನಾಗೆ ಕಂಟಕ ಆಗುವ ಸಾಧ್ಯತೆ ಇದೆ. ಎಫ್ಐಆರ್ ದಾಖಲಾದ ನಂತರ ಕಂಗನಾ ಈ ಕುರಿತು ಸ್ಪಷ್ಟನೆ ನೀಡಬೇಕಿದೆ.


Click it and Unblock the Notifications











