ಅವತ್ತು ಒಂದು ಮಾತು ಹೇಳಿದ್ದೆ.. ಆದ್ರೆ ಈಗ; ಟಿವಿಕೆ ವಿಜಯ್ ಗೆಲುವಿನ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ರಾಜಕೀಯರಂಗದಲ್ಲಿ ತಮಿಳು ನಟ ವಿಜಯ್ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು, ಆಪ್ತರು, ಸಿನಿಮಾ ತಾರೆಯರು ದಳಪತಿ ದರ್ಬಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮಿಳು ಕಲಾವಿದರು ಮಾತ್ರವಲ್ಲ ತೆಲುಗು ತಾರೆಯರು 'ವಿಜಯ'ಯಾತ್ರೆಗೆ ಬಹುಪರಾಕ್ ಎನ್ನುತ್ತಿದ್ದಾರೆ. ಇದೀಗ ಕನ್ನಡ ನಟ ಶಿವರಾಜ್ಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಜಯ್ ಅವರಿಗೆ ಅರ್ಹವಾದ ಗೆಲುವು.. ತೀವ್ರವಾದ ದಾಳಿಗಳ ಸಮಯದಲ್ಲಿ ಮೌನವಾಗಿರುವುದು ಮತ್ತು ನಿಮ್ಮ ಕೆಲಸವನ್ನು ಮಾತನಾಡಲು ಬಿಡುವುದು ಅತ್ಯಂತ ದೊಡ್ಡ ಗೆಲುವು. ಪತ್ರಿಕಾ ಸಂವಾದವೊಂದರಲ್ಲಿ ನಾನು "ಟಿವಿಕೆ ಅಂದ್ರೆ ಟ್ರೈ ವಿಜಯ್ ಆಸ್ ಕಿಂಗ್" ತಮಾಷೆಯಾಗಿ ಹೇಳಿದ್ದೆ. ಇಂದು ನೀವು ರಾಜನಂತೆ ಎತ್ತರವಾಗಿ ನಿಂತಿದ್ದೀರಿ. ತಮಿಳುನಾಡಿನ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ಪೂರೈಸಿ.. ನಿಮಗೆ ಯಶಸ್ಸು ಸಿಗಲಿ" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ NDTV ಸಂದರ್ಶನದಲ್ಲಿ ಕೂಡ ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ಶಿವಣ್ಣ ಮಾತನಾಡಿದ್ದರು. "ಅವ್ರು ಒಳ್ಳೆ ಪ್ರಯತ್ನ ಮಾಡುತ್ತಿದ್ದಾರೆ. ಶುಭವಾಗಲಿ.. ರಾಜಕೀಯರಂಗದಲ್ಲಿ ಕೂಡ ವಿಜಯ್, ವಿಜಯ್ ಆಗಿಯೇ ಇರಲಿ.. ಇಷ್ಟು ದಿನ ಸಿನಿಮಾ ಸೆಟ್ನಲ್ಲಿ, ಕುಟುಂಬದಲ್ಲಿ ನೀವು ಹೇಗಿರುತ್ತಿದ್ದಿರೋ ಅದೇ ರೀತಿ ರಾಜಕೀಯರಂಗದಲ್ಲೂ ಇರಿ. ಬದಲಾಗಬೇಡಿ" ಎಂದು ಸೆಂಚುರಿ ಸ್ಟಾರ್ ಸಲಹೆ ನೀಡಿದ್ದರು.
ವಿಜಯ್ ನಟನೆಯ 'ವಾರೀಸು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಸದ್ಯ ದಳಪತಿ ಗೆಲುವಿನ ಬಗ್ಗೆ ಆಕೆ ಟ್ವೀಟ್ ಮಾಡಿದ್ದಾರೆ. "ಅಭಿನಂದನೆ ವಿಜಯ್ ಸರ್.. ನಿಮ್ಮ ಬಗ್ಗೆ ತುಂಬಾ ಸಂತೋಷವಾಗಿದೆ ಮತ್ತು ಈ ಹೊಸ ಯುಗದಲ್ಲಿ ನಿಮ್ಮನ್ನು ನೋಡಲು ಉತ್ಸುಕನಾಗಿದ್ದೇನೆ.. ಶುಭವಾಗಲಿ ಸರ್" ಎಂದು ಬರೆದುಕೊಂಡಿದ್ದಾರೆ.
ತೆಲುಗು ನಟ ಚಿರಂಜೀವಿ ಟ್ವೀಟ್ ಮಾಡಿ "ಆತ್ಮೀಯ ವಿಜಯ್.. ನಿಮ್ಮ ಮೊದಲ ಚುನಾವಣೆಯಲ್ಲಿ ಈ ಅತ್ಯುತ್ತಮ ಮತ್ತು ಅರ್ಹವಾದ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು.. ತಮಿಳುನಾಡು ರಾಜ್ಯ ಮತ್ತು ಅಲ್ಲಿನ ಜನರಿಗೆ ನಿಮ್ಮ ಸಾರ್ವಜನಿಕ ಸೇವೆಗಾಗಿ ನನ್ನ ಶುಭಾಶಯಗಳು" ಎಂದು ತಿಳಿಸಿದ್ದಾರೆ. ಚಿರು ಪುತ್ರ ರಾಮ್ಚರಣ್ ಕೂಡ ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ.
ಎಲ್ಲರಿಗಿಂತ ಮುನ್ ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದು ತೆಲುಗು ನಟ ನಾನಿ. 100 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷಕ್ಕೆ ಮುನ್ನಡೆ ಎಂದು ಗೊತ್ತಾಗುತ್ತಿದ್ದಂತೆ ಅವರು ಟ್ವೀಟ್ ಮಾಡಿದ್ದರು. "ಅಭಿನಂದನೆಗಳು ವಿಜಯ್ ಸರ್..
ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಸಿಕ್ಕಿದೆ. ಅಂದು ನಮ್ಮ ರಾಜ್ಯದಲ್ಲಿ ನಡೆದಿತ್ತು. ಈಗ ಅದು ನಮ್ಮ ನೆರೆಯ ರಾಜ್ಯದಲ್ಲಿ ನಡೆಯುತ್ತಿದೆ. ಹಿಂದೆ ಇದ್ದವರ ಗೆಲುವು ಯಾವಾಗಲೂ ಸಿನಿಮಾ ರೀತಿ ಇರುತ್ತದೆ. ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ ತಮಿಳುನಾಡಿನ ಜನತೆಗೆ ಒಳ್ಳೆಯದಾಲಿ ಎಂದು ಆಶಿಸುತ್ತೇನೆ" ಎಂದಿದ್ದರು.
"ಜನರ ಪ್ರೀತಿ ಮತ್ತು ಬೆಂಬಲ ಪಡೆಯುವುದು ಒಂದು ಆಶೀರ್ವಾದ. ನನ್ನ ಸ್ನೇಹಿತ ವಿಜಯ್ ಮೇಲೆ ತಮಿಳುನಾಡು ಅಪಾರ ನಂಬಿಕೆ ಇಟ್ಟಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ನಟ ಸೂರ್ಯ ಟ್ವೀಟ್ ಮಾಡಿದ್ದರು.
"ವಿಜಯ್ ಅವರಿಗೆ ಮೊದಲ ಚುನಾವಣೆಯಲ್ಲಿ ಅದ್ಭುತವಾದ ಗೆಲುವು ಸಿಕ್ಕಿದೆ. ನಿಮ್ಮ ದಳಪತಿಗೆ ಅಭಿನಂದನೆಗಳು... ತಮಿಳುನಾಡಿನಾದ್ಯಂತ ಎಂಜಿಆರ್ ಅವರ ಪುನರಾವರ್ತನೆ ಆದಂತಾಗಿದೆ.. ಜನರಿಗೆ ಬದಲಾವಣೆ ಬೇಕಾದಾಗ ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ" ಎಂದು ನಟ ವಿಶಾಲ್ ಬರೆದುಕೊಂಡಿದ್ದಾರೆ.
ಮಧುರೈ ಸೆಂಟ್ರಲ್ ಕ್ಷೇತ್ರದಿಂದ ನಟಿ ಖುಷ್ಬೂ ಪತಿ ಸುಂದರ್ ಸಿ. ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ಹಾಗೂ ಎಐಎಡಿಎಂಕೆ ಬೆಂಬಲದೊಂದಿಗೆ ಅವರು ಮೊದಲ ಬಾರಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಆದರೆ ಗೆಲುವು ಸಿಕ್ಕಿಲ್ಲ.. ಖುಷ್ಬು ಟ್ವೀಟ್ ಮಾಡಿ ವಿಜಯ್ ಗೆಲುವಿಗೆ ಅಭಿನಂದರೆ ತಿಳಿಸಿದ್ದಾರೆ. "ತಮಿಳುನಾಡಿನಲ್ಲಿ ಅದ್ಭುತ ಗೆಲುವು ಸಾಧಿಸಿರುವ ವಿಜಯ್ ಹಾಗೂ ಟಿವಿಕೆ ತಂಡಕ್ಕೆ ಅಭಿನಂದನೆ. ಈಗ ನೀವು ಮುನ್ನಡೆಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ರಜನಿಕಾಂತ್, ಧನುಷ್, ರಿಷಬ್ ಶೆಟ್ಟಿ, ಮೋಹನ್ ಲಾಲ್ ಸೇರಿದಂತೆ ಸಾಕಷ್ಟು ತಾರೆಯರು ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ಸದ್ಯ ಟಿವಿಕೆ ಪಕ್ಷಕ್ಕೆ 108 ಸ್ಥಾನಗಳು ಸಿಕ್ಕಿದೆ. ಸರ್ಕಾರ ರಚನೆಗೆ 118 ಸ್ಥಾನಗಳು ಬೇಕಿದೆ. ವಿಜಯ್ ಮುಂದೆ ಏನು ಮಾಡ್ತಾರೆ? ಎಂದು ಕಾದು ನೋಡಬೇಕಿದೆ.


Click it and Unblock the Notifications