ಇಂದು ಬಿಡುಗಡೆಯಾಗುತ್ತಿರುವ ಮಾನ್ಸೂನ್ ರಾಗ ಚಿತ್ರಕ್ಕೆ ಆಲ್ ದ ಬೆಸ್ಟ್; ವೈರಲ್ ಆಯಿತು ಅಪ್ಪು ಟ್ವೀಟ್!
ಇಂದು ( ಸೆಪ್ಟೆಂಬರ್ 16 ) ರಾಜ್ಯಾದ್ಯಂತ ಮಾನ್ಸೂನ್ ರಾಗ ಬಿಡುಗಡೆಯಾಗಿದೆ. ಪ್ರೀಮಿಯರ್ ಶೋ ಎಂಬ ಹೊಸ ಟ್ರೆಂಡನ್ನು ಪಾಲಿಸಿದ ಈ ಚಿತ್ರ ಕೂಡ ನಿನ್ನೆಯೇ ಐದಾರು ಪೇಯ್ಡ್ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿತ್ತು ಹಾಗೂ ಎಲ್ಲವೂ ಹೌಸ್ಫುಲ್ ಆಗಿದ್ದವು. ಇನ್ನು ಈ ಚಿತ್ರದಲ್ಲಿ ಧನಂಜಯ ನಾಯಕನಾಗಿ ಕಾಣಿಸಿಕೊಂಡಿದ್ದರೆ, ರಚಿತಾ ರಾಮ್ ನಾಯಕಿಯಾಗಿದ್ದಾರೆ, ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಕೂಡ ತಾರಾಗಣದಲ್ಲಿದ್ದಾರೆ. ಇನ್ನು ಈ ಚಿತ್ರ ತೆಲುಗಿನ ಕೇರ್ ಆಫ್ ಕಾಂಚರಪಾಲೆಂ ಚಿತ್ರದ ರಿಮೇಕ್ ಆಗಿದ್ದರೂ ಸಹ ಕೆಲವೊಂದಿಷ್ಟು ಬದಲಾವಣೆ ಮಾಡಿಕೊಂಡಿದೆ.
ಚಿತ್ರದ ಕ್ಯಾಮೆರಾ ವರ್ಕ್, ಎಡಿಟಿಂಗ್, ಮ್ಯೂಸಿಕ್ ಹಾಗೂ ಸಂಭಾಷಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರ ನೋಡದ ಪ್ರೇಕ್ಷಕರು ಎಲ್ಲರೂ ಒಂದೊಮ್ಮೆ ನೋಡಲೇಬೇಕಾದ ಚಿತ್ರ ಎನ್ನುತ್ತಿದ್ದರೆ, ತೆಲುಗಿನಲ್ಲಿ ಕೇರ್ ಆಫ್ ಕಾಂಚರಪಾಲೆಂ ನೋಡಿದ್ದ ಸಿನಿ ಪ್ರೇಕ್ಷಕರು ಇದೊಂದು ರಿಮೇಕ್ ಸಿನಿಮಾ ಎಂಬುದನ್ನು ಚಿತ್ರತಂಡ ಮುಚ್ಚಿಟ್ಟಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ಬಹುತೇಕರು ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದು ಹೆಚ್ಚು ದಿನ ಚಿತ್ರಮಂದಿರದಲ್ಲಿ ತನ್ನ ರಾಗವನ್ನು ಮುಂದುವರೆಸಲಿದೆಯಾ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಈ ಚಿತ್ರದ ಬಿಡುಗಡೆಗೆ ಕನ್ನಡದ ಹಲವು ಕಲಾವಿದರು ಟ್ವೀಟ್ ಮಾಡಿ, ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ಶುಭ ಕೋರಿದ್ದು, ಸದ್ಯ ಪುನೀತ್ ರಾಜ್ಕುಮಾರ್ ಅವರ ಟ್ವೀಟ್ ಕೂಡ ವೈರಲ್ ಆಗಿದೆ.

ಮಾನ್ಸೂನ್ ರಾಗ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದ ಅಪ್ಪು
ಇನ್ನು ಇಂದು ಬಿಡುಗಡೆಯಾಗುತ್ತಿರುವ ಮಾನ್ಸೂನ್ ರಾಗ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ ಎಂಬ ಎಡಿಟೆಡ್ ಫೋಟೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂದು ಎಡಿಟೆಡ್ ಫೋಟೊ ಎಂದು ತಿಳಿದಿದ್ದರೂ ಸಹ ಹಲವರು ಈ ಫೋಟೊವನ್ನು ಇಷ್ಟಪಟ್ಟಿದ್ದಾರೆ ಹಾಗೂ ಇಲ್ಲಿಯೂ ಸಹ ಅಪ್ಪು ನೆನಪು ಕಾಡಿರುವುದು ಸತ್ಯ.

ಇದು ಎಡಿಟ್, ಆದ್ರೆ ಅಪ್ಪು ಇದ್ದಿದ್ರೆ ಇದೇ ನಿಜ
ಇನ್ನು ಅಪ್ಪು ಅಭಿಮಾನಿಗಳು ಯಾವ ರೀತಿ ಫೋಟೊ ಎಡಿಟ್ ಮಾಡಿದ್ದಾರೋ ಅಪ್ಪು ಇದ್ದಿದ್ದರೆ ಅದೇ ರೀತಿಯ ವಿಷ್ ಬರುತ್ತಿತ್ತು ಎಂಬುದು ಸತ್ಯ. ಸದಾ ಕನ್ನಡ ಸಿನಿಮಾಗಳಿಗೆ ಇದೇ ರೀತಿ ವಿಷ್ ಮಾಡುತ್ತಿದ್ದ ಪುನೀತ್ ರಾಜ್ಕುಮಾರ್ ಇಂದು ಇದ್ದಿದ್ದರೆ ಇದೇ ರೀತಿ ಶುಭ ಕೋರುತ್ತಿದ್ದದ್ದು ಸತ್ಯ. ಇನ್ನು ಅಪ್ಪು ಅವರ ರೀತಿಯೇ ಈ ಫೋಟೊವನ್ನು ಎಡಿಟ್ ಮಾಡಿರುವವರಿಗೆ ಧನ್ಯವಾದ ಎನ್ನುತ್ತಿದ್ದಾರೆ ಕೆಲ ಅಪ್ಪು ಫ್ಯಾನ್ಸ್.

ಕೊನೆಯ ಟ್ವೀಟ್ ಕೂಡ ಇಂಥದ್ದೇ
ಅಂದು ಅಕ್ಟೋಬರ್ 29, ಅಂದೂ ಸಹ ಇದೇ ರೀತಿ ಶಿವಣ್ಣ ಅಭಿನಯದ ಭಜರಂಗಿ 2 ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಮಾರ್ನಿಂಗ್ ಶೋ ಮುಗಿದು ಸೆಕೆಂಡ್ ಶೋ ಶುರುವಾಗುವುದರಲ್ಲಿತ್ತು. ಅಷ್ಟರಲ್ಲಿ ಸಿಡಿಲಿನಂತೆ ಅತಿಕೆಟ್ಟ ಸುದ್ದಿಯೊಂದು ಅಪ್ಪಳಿಸಿತ್ತು. ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ಅಂದೂ ಸಹ ಪುನೀತ್ ಶಿವಣ್ಣ ಅಭಿನಯದ ಭಜರಂಗಿ 2 ಚಿತ್ರಕ್ಕೆ ಟ್ವೀಟ್ ಮಾಡಿದ್ದರು. ಹೀಗೆ ಅಪ್ಪು ಟ್ವಿಟರ್ ಖಾತೆಯಲ್ಲಿರುವ ಕೊನೆಯ ಟ್ವೀಟ್ ಕೂಡ ಕನ್ನಡ ಚಿತ್ರವೊಂದಕ್ಕೆ ಶುಭ ಕೋರಿದ್ದೇ.


Click it and Unblock the Notifications











