ಒಂದು ಕಡೆ ಪುಕಪುಕ ಮತ್ತೊಂದು ಕಡೆ ನಿರಾತಂಕ ; ದರ್ಶನ್ ಡಿಮ್ಯಾಂಡ್ಗೆ ಅಸ್ತು ಎಂದ ಕೋರ್ಟ್ - ಆದರೆ ಡಿಸೆಂಬರ್ 17ಕ್ಕೆ ?
''ಕುಂಟು'' ನೆಪ ಹೇಳಿ ಕಳೆದ ವರ್ಷಾಂತ್ಯದಲ್ಲಿ ದರ್ಶನ್ ಜಾಮೀನು ಪಡೆದು ಹೊರಗಡೆ ಏನೋ ಬಂದಿದ್ದರು. ಆದರೆ.. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಅಂತಿದ್ದ ದರ್ಶನ್ ಗೆ ನೆಮ್ಮದಿ ಇರಲಿಲ್ಲ. ಯಾಕೆಂದರೆ ದರ್ಶನ್ ಗೆ ಮುಂದೆ ಎದುರಾಗಬಹುದಾದ ಅಪಾಯದ ಅರಿವು ಇತ್ತು. ಸ್ವತಂತ್ರ ಹಕ್ಕಿಯಾದರು ಕೂಡ ಮತ್ತೆ ಜೈಲು ಹಕ್ಕಿಯಾಗುವ ಭಯ ಇತ್ತು. ಆತಂಕ ಇತ್ತು.
ಕೊನೆಗೂ ಅಂದುಕೊಂಡತೆಯೇ ಆಯ್ತು. ದರ್ಶನ್ ಈಗ ಮತ್ತೊಮ್ಮೆ ಜೈಲಿನ ದರ್ಶನ ಮಾಡಿದ್ದಾರೆ. ಆದರೆ.. ಈ ಬಾರಿ ಅರಮನೆಯಲ್ಲ ಬದಲಿಗೆ ಅಕ್ಷರಶಃ ದರ್ಶನ್ ಪಾಲಿಗೆ ಜೈಲು ಸೆರೆಮನೆಯಾಗಿದೆ. ''ಇದ್ರೆ ನೆಮ್ಮದಿಯಾಗ್ ಇರಬೇಕ್'' ಎನ್ನುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ದಿನ ನಿತ್ಯ ನರಕ ದರ್ಶನವಾಗುತ್ತಿದೆ.

ಈ ನರಕದಿಂದ ದರ್ಶನ್ ಪಾರಾಗುತ್ತಾರಾ..? ಜೈಲಿಂದ ಹೊರ ಬರುತ್ತಾರಾ..? ಈ ಪ್ರಶ್ನೆಗಳಿಗೆ ಉತ್ತರ ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಜೈಲಿನಲ್ಲಿ ಕುಳಿತುಕೊಂಡೆ ತಮ್ಮ ''ಡೆವಿಲ್'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ದರ್ಶನ್ ಬೇಡಿಕೆಗೆ ನ್ಯಾಯಾಲಯ ಇಂದು ( ಡಿಸೆಂಬರ್ 4 ) ಅಸ್ತು ಎಂದಿದೆ.
ಹೌದು, ನಿನ್ನೆ (ಡಿಸೆಂಬರ್ 3 ) ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿತ್ತು. ಪವಿತ್ರಾ ಗೌಡ, ದರ್ಶನ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಮೊನ್ನೆಯವರೆಗೆ ಹಾಸಿಗೆ-ದಿಂಬು ಎಂದು ಒದ್ದಾಡುತ್ತಿದ್ದ ದರ್ಶನ್ ಹೊಸದೊಂದು ಬೇಡಿಕೆಯನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ತಮ್ಮ ಬ್ಯಾರಕ್ನಲ್ಲಿ ಟಿವಿ ಅಳವಡಿಸುವಂತೆ ಮನವಿಯನ್ನು ಮಾಡಿದ್ದರು.
ದರ್ಶನ್ ಅವರ ಈ ಬೇಡಿಕೆಗೆ ನ್ಯಾಯಾಲಯ ಒಂದೇ ದಿನದಲ್ಲಿ ಅಸ್ತು ಎಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ನ್ಯಾಯಾಲಯ ಬ್ಯಾರಕ್ನಲ್ಲಿ ಟಿವಿ ಅಳವಡಿಸಲು ಸೂಚನೆ ನೀಡಿದೆ. ಟಿವಿ ಅಳವಡಿಸಲು ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದು, ಟಿವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿಸಿಟಿವಿಯನ್ನು ಕೂಡ ಅಳವಡಿಸುವಂತೆ ಆದೇಶ ನೀಡಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಅಭಿನಯದ ''ಡೆವಿಲ್'' ಈ ಹನ್ನೊಂದರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದು ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧರಾಗಿದ್ದಾರೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗ ದರ್ಶನ್ಗೆ ಜೈಲಿನಲ್ಲಿ ಟಿವಿ ಭಾಗ್ಯ ಸಿಕ್ಕಿದೆ. ಈ ಹಿನ್ನೆಲೆ ಜೈಲಿನಲ್ಲಿ ಕುಳಿತುಕೊಂಡೆ ತಮ್ಮ ಅಭಿಮಾನಿಗಳ ಅಭಿಮಾನದ ಜಾತ್ರೆಯನ್ನು ದರ್ಶನ್ ಕಣ್ತುಂಬಿಕೊಳ್ಳಲಿದ್ದಾರೆ.

ಇದೇ ಸಮಯದಲ್ಲಿ ದರ್ಶನ್ಗೆ ಹಿನ್ನೆಡೆ ಕೂಡ ಆಗಿದೆ. ಹೌದು, ಅಸಲಿಗೆ ರೇಣುಕಾಸ್ವಾಮಿ ತಂದೆ ಮತ್ತು ತಾಯಿಗೆ ಸಮನ್ಸ್ ನೀಡಲು ನಿರ್ಧಾರ ಮಾಡಲಾಗಿತ್ತು. ಪ್ರಾಸಿಕ್ಯೂಷನ್ ಅವರ ಈ ನಿರ್ಧಾರಕ್ಕೆ ದರ್ಶನ್ ಪರ ವಕೀಲರಾದ ಸುನಿಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ದರ್ಶನ್ ಪರ ವಕೀಲರ ಈ ಆಕ್ಷೇಪ ತಿರಸ್ಕರಿಸಿ ಇಂದು 57ನೇ ಸಿಸಿಹೆಚ್ ನ್ಯಾಯಾಲಯ ಆದೇಶ ನೀಡಿದ್ದು ರೇಣುಕಾಸ್ವಾಮಿ ತಂದೆ ಮತ್ತು ತಾಯಿಗೆ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 17ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಬರುವಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ತಂದೆ ತಾಯಿಯನ್ನು 7 ಮತ್ತು 8ನೇ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಇದೇ ಡಿಸೆಂಬರ್ 17ರಂದು ಇಬ್ಬರು ವಿಚಾರಣೆಗೆ ಹಾಜರಾಗಲಿದ್ದಾರೆ. ಬೆಂಗಳೂರಿನ 57ನೇ ಸಿಎಚ್ ಕೋರ್ಟ್ನಲ್ಲಿ ಇದೇ ಡಿಸೆಂಬರ್ 17ರಿಂದ ದರ್ಶನ್ ಪ್ರಕರಣದ ವಿಚಾರಣೆ ಹಂತ ಹಂತವಾಗಿ ನಡೆಯಲಿದ್ದು, ಎಲ್ಲ ಪ್ರಮುಖ ಸಾಕ್ಷ್ಯಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಇನ್ನು ಯಾವ ಸಾಕ್ಷಿಗಳನ್ನು ಹಾಜರುಪಡಿಸಬೇಕೆನ್ನುವುದು ಪ್ರಾಸಿಕ್ಯೂಷನ್ ಆಯ್ಕೆ ಎಂದು ನ್ಯಾಯಾಲಯ ಹೇಳಿದೆ.


Click it and Unblock the Notifications











