ನಟಿ ಮತ್ತು ನಿರ್ಮಾಪಕ ಅರವಿಂದ್ ರೆಡ್ಡಿಯ ಸರಸ-ವಿರಸ ; 7 ಕೋಟಿ ಬೇಡಿಕೆ - ಸ್ನೇಹಿತ ಅರೆಸ್ಟ್
ಈ ಪ್ರಪಂಚದಲ್ಲಿ ಯಾರು ಒಳ್ಳೆಯವರು.. ಯಾರು ಕೆಟ್ಟವರು ಎಂದು ಒಮ್ಮೆಲೆ ಹೇಳಿ ಬಿಡಲು ಸಾಧ್ಯ ಇಲ್ಲ. ಯಾಕೆಂದರೆ ಇಲ್ಲಿ ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ನಂಬಿಕೆ ಅನ್ನೋದು ಈ ಜಗತ್ತಿನ ಅತಿ ದೊಡ್ಡ ಬಂಡವಾಳ. ಕೊಡು-ಕೊಳ್ಳುವ ನಿಯಮ ನಿಂತಿರುವುದೇ ಈ ನಂಬಿಕೆಯ ಸಿದ್ದಾಂತದ ಮೇಲೆ.
ಆದರೆ ಈಗೀಗ ಬದಲಾದ ಕಾಲದಲ್ಲಿ ಈ ನಂಬಿಕೆಯನ್ನು ಯಾರು ಹೇಗೆ ಬೇಕಾದರು ಬಳಸಿಕೊಳ್ಳಬಹುದು ಎನ್ನುವಂತಾಗಿದೆ. ಹೊಂಚು ಹಾಕಿ ಸಂಚು ಮಾಡಿ ಗಂಟು ಹೊಡೆಯಲು ಇಲ್ಲಿ ಹಲವರು ದಿನನಿತ್ಯ ಹಲವು ಬಗೆಯ ಸರ್ಕಸ್ ಮಾಡುತ್ತಲಿರುತ್ತಾರೆ. ನಮ್ಮ ಪ್ರತಿಯೊಂದು ಕ್ರಿಯೆಗೆ ಅದರದ್ದೇ ಆದ ಪ್ರತಿಫಲ ಇರುತ್ತೆ ಎನ್ನುವುದನ್ನು ಕೂಡ ಮರೆಯುವ ಇವರು ನಂಬಿಕೆ ಮತ್ತು ದ್ರೋಹದ ನಡುವೆ ಇರುವ ಅತ್ಯಂತ ತೆಳ್ಳಗಿರುವ ಗೆರೆಯನ್ನು ಕೂಡ ದಾಟುತ್ತಾರೆ.

ಈ ಹಿನ್ನೆಲೆ ಯಾರು ಸಂತ್ರಸ್ತರು.. ಯಾರು ಅಪರಾಧಿಗಳು ಎನ್ನುವುದನ್ನು ಕಾಲದ ನಿರ್ಣಯಕ್ಕೆ ಬಿಡುವುದು ಒಳ್ಳೆಯದು. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಉದ್ಯಮಿ ಮತ್ತು ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಮತ್ತು ಕನ್ನಡ ಚಿತ್ರರಂಗದ ಚೆಲುವೆಯ ಸರಸ-ವಿರಸದ ಕಥೆ ರೋಚಕ ಟ್ವಿಸ್ಟ್ ಪಡೆದಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ವರ್ಷಾಂತ್ಯದಲ್ಲಿ ಕನ್ನಡ ಚಿತ್ರರಂಗದ ನಟಿ, ಅರವಿಂದ್ ರೆಡ್ಡಿ ಅವರ ವಿರುದ್ಧ ಲೈಂ*ಗಿಕ ಕಿರುಕುಳದ ಆರೋಪ ಮಾಡಿದ್ದರು. ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಬಳ್ಳಾರಿ ಮೂಲದ ಉದ್ಯಮಿ ಅರವಿಂದ್ ರೆಡ್ಡಿ ಅವರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದರು.
ಆ ನಂತರ ಜಾಮೀನು ಪಡೆದು ಹೊರ ಬಂದ ಅರವಿಂದ್ ರೆಡ್ಡಿ, ನಟಿಯ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಐಷಾರಾಮಿ ಕಾರು ಕೊಡಿಸಿದ್ದೆ ಎಂದು ಹೇಳಿದ್ದ ರೆಡ್ಡಿ ಅವರ ತಮ್ಮನ ಮದುವೆ, ಮನೆ ಗೃಹಪ್ರವೇಶಕ್ಕೆ ಸಹಾಯ ಮಾಡಿದ್ದಾಗಿಯೂ ಕೂಡ ಹೇಳಿದ್ದರು. ಸೈಟ್ ಅಗ್ರಿಮೆಂಟ್ ರಿಜಿಸ್ಟರ್ ಮಾಡಿದ್ದೀನಿ ಎಂದು ಹೇಳಿದ್ದ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ನನ್ನ ಕೋಟ್ಯಂತರ ರೂಪಾಯಿ ಹಣ ಅವಳ ಮೇಲೆ ಸುರಿದಿದ್ದೇನೆ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು.
ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟಿಯ ಆಪ್ತಮಿತ್ರ ''ವೈಶಾಕ್''ನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಅಸಲಿಗೆ ಕಳೆದ ತಿಂಗಳ ಆರಂಭದಲ್ಲಿ ಅರವಿಂದ್ ರೆಡ್ಡಿ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆಯ ಪತ್ರವೊಂದು ಬಂದಿತ್ತು.

ಬ್ಲೂಡಾರ್ಟ್ ಕೊರಿಯರ್ ಮೂಲಕ ಕಳುಹಿಸಲಾಗಿದ್ದ ಈ ಪತ್ರದಲ್ಲಿ ನಟಿಯ ಜೊತೆಗಿನ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವಂತೆ ಹೇಳಲಾಗಿತ್ತು. ರಾಜಿ ಮಾಡಿಕೊಳ್ಳುವಂತೆ ತಾಕೀತು ಮಾಡಲಾಗಿತ್ತು.ಇಷ್ಟೇ ಅಲ್ಲ 6 ರಿಂದ 7 ಕೋಟಿ ಹಣಕ್ಕೆ ಬೇಡಿಕೆಯನ್ನು ಇಡಲಾಗಿತ್ತು. ಜನವರಿ 25ರಂದು ತಮ್ಮ ಡ್ರೈವರ್ ಬಳಿ ತಾನು ಹೇಳಿದ ಹಣವನ್ನು ಜೆಂಟಲೈನ್ ವರ್ಕ್ ಶಾಪ್ನಲ್ಲಿ ನೀಡುವಂತೆ ಕೂಡ ಹೇಳಲಾಗಿತ್ತು. ಹಣ ನೀಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಕೂಡ ಹಾಕಲಾಗಿತ್ತು.
ಪತ್ರವನ್ನು ಓದಿದ ನಂತರ ಕೂಡಲೇ ಅರವಿಂದ್ ರೆಡ್ಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ನಂತರ ಪತ್ರದ ಜಾಡು ಹಿಡಿದು ಹೊರಟ ಪೊಲೀಸರಿಗೆ ಬನಶಂಕರಿಯಿಂದ ಕೊರಿಯರ್ ಕಳುಹಿಸಿರುವ ವಿಚಾರ ಗೊತ್ತಾಯ್ತು. ಹೀಗೆ ಪ್ರಕರಣವನ್ನು ಭೇದಿಸಲು ಶುರು ಮಾಡಿದ ಪೊಲೀಸರು ಸದ್ಯ ನಟಿಯ ಅತ್ಯಾಪ್ತ ಸ್ನೇಹಿತ ವೈಶಾಖ್ನನ್ನು ಬಂಧಿಸಿದ್ದಾರೆ.
''ಸುವರ್ಣ ನ್ಯೂಸ್'' ವರದಿಯ ಪ್ರಕಾರ ನಟಿಯ ಮನೆಯಿಂದಲೇ ವೈಶಾಖ್ನನ್ನು ಪೊಲೀಸರು ಬಂಧಿಸಿದ್ದು, ಕೋಟಿ ಕುಳ ಅರವಿಂದ್ ರೆಡ್ಡಿ ಅವರಿಂದ ಮತ್ತಷ್ಟು ಕೋಟಿ ಪೀಕಲು ಸ್ನೇಹಿತ ವೈಶಾಖ್ ಜೊತೆ ಸೇರಿ ನಟಿ ಬ್ಲಾಕ್ ಮೇಲ್ ಮಾಡಲು ಮುಂದಾದರಾ..? ಎನ್ನುವ ಅನುಮಾನ ಸದ್ಯ ಕಾಡುತ್ತಿದೆ. ಈ ಹಿನ್ನೆಲೆ ನಟಿಗೆ ಪೊಲೀಸರು ಅಧಿಕೃತವಾಗಿ ನೋಟಿಸ್ ಜಾರಿ ಮಾಡಿ ತನಿಖೆ ಬರುವಂತೆ ಆಗ್ರಹಿಸಿದ್ದಾರೆ ಎಂದು ''ಸುವರ್ಣ ನ್ಯೂಸ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಒಟ್ನಲ್ಲಿ ಕಣ್ಣಿಗೆ ಕಾಣುವುದೆಲ್ಲ ಸತ್ಯ ಅಲ್ಲ, ಸತ್ಯವನ್ನು ಬಹುದಿನ ಮುಚ್ಚಿಡಲು ಕೂಡ ಸಾಧ್ಯ ಇಲ್ಲ ಒಂದಲ್ಲೊಂದು ದಿನ ಸತ್ಯ ಹೊರಗಡೆ ಬರಲೇಬೇಕು. ಸದ್ಯ ವೈಶಾಖ್ ಪೊಲೀಸರ ಅತಿಥಿಯಾಗಿದ್ದು ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ನೋಡಬೇಕಿದೆ. ನಿಜವಾದ ಅಪರಾಧಿ ಯಾರು..? ಸಂತಸ್ತ್ರ ಯಾರು..? ಎನ್ನುವುದು ಗೊತ್ತಾಗಬೇಕಿದೆ.


Click it and Unblock the Notifications











