ಉಮಾಪತಿ ಶ್ರೀನಿವಾಸ್ ಹತ್ಯೆಗೆ ಸಂಚು: ಮತ್ತಿಬ್ಬರು ಆರೋಪಿಗಳ ಬಂಧನ!
ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ, ಜಯನಗರ ಪೊಲೀಸರು 2020ರಲ್ಲಿ ಹಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ದರ್ಶನ್, ಸಂಜು ಎಂಬ ಇಬ್ಬರು ತಲೆಮರೆಸಿಕೊಂಡಿದ್ದರು. ಇವರಿಗಾಗಿ ಪೊಲೀಸರು ಹುಡಕಾಟ ನಡೆಸಿದ್ದರು. ಆದರೆ ಅವರಿಬ್ಬರೂ ಖಾಕಿ ಕೈಗೆ ಸಿಕ್ಕಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕೇಸ್ನಲ್ಲಿ ತಲೆಮರೆಸಿಕೊಂಡಿದ್ದ ಮತ್ತೆ ಇಬ್ಬರನ್ನು ಈಗ ಬಂಧಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸದ್ಯ ಇವರ ವಿಚಾರಣೆ ನಡೆಯತ್ತಿದೆ ಎಂದು ತಿಳಿದು ಬಂದಿದೆ.
2020ರ ಡಿಸೆಂಬರ್ನಲ್ಲಿ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದು ಬಯಲಾಗಿತ್ತು. ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್ 15ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಸುದರ್ಶನ್ ಮತ್ತವರ ತಂಡಕ್ಕೆ ಆಕಸ್ಮಿಕವಾಗಿ ಸಿಕ್ಕಿಬಿದ್ದ ಗ್ಯಾಂಗ್ ಅದು. ಈಗ ಇನ್ನಿಬ್ಬರ ಬಂಧನವಾಗಿದೆ. ಉಮಾಪತಿ ಹತ್ಯೆಗೆ ಬಾಂಬೆ ರವಿ ಸ್ಕೆಚ್ ಹಾಕಿದ್ದ ಎನ್ನಲಾಗಿತ್ತು.

ತಲೆಮರೆಸಿಕೊಂಡಿದ್ದ ದರ್ಶನ್ ಅಲಿಯಾಸ್ ರಾಬರಿ ಮತ್ತು ಸಂಜು ಎಂಬುವವರನ್ನು ಸಿಸಿಬಿ ಪೊಲೀಸರು ಈಗ ಅರೆಸ್ಟ್ ಮಾಡಿದ್ದಾರೆ. ಇವರಿಬ್ಬರೂ ಸೇರಿ ಪ್ರಕರಣ ಸಂಬಂಧ ಇದುವರೆಗೆ 17 ಆರೋಪಿಗಳ ಬಂಧನವಾದಂತಾಗಿದೆ.
ಇನ್ನು ಈ ಪ್ರಕರಣದ ಹಿನ್ನೆಲೆಯನ್ನು ನೊಡುವುದಾದರೆ. ಭೂಗತ ಪಾತಕಿ ಬಾಂಬೆ ರವಿ ಸೂಚನೆ ಮೇರೆಗೆ ಅರೋಪಿಗಳು ನಿರ್ಮಾಪಕ ಉಮಾಪತಿ ಗೌಡ, ಅವರ ಸಂಬಂಧಿ ದೀಪಕ್, ಕುಖ್ಯಾತ ರೌಡಿ ಶೀಟರ್ಗಳಾದ ಸೈಕಲ್ ರವಿ ಹಾಗೂ ಬೇಕರಿ ರಘು ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು.

ಈ ಸಂಬಂಧ ಆರೋಪಿಗಳು 2020ರ ಡಿಸೆಂಬರ್ 20 ರಂದು ಜಯನಗರ ಠಾಣೆ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೈದಾನದ ಬಳಿ ಟೆಂಪೋ ಟ್ರಾವೆಲರ್ ವಾಹನದಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಮಾರಕಾಸ್ತ್ರಗಳ ಸಮೇತ ಕುಳಿತಿದ್ದರು. ಅದೇ ವೇಳೆ ಗಸ್ತು ತಿರುಗುತ್ತಿದ್ದ ಜಯನಗರ ಠಾಣೆ ಸುದರ್ಶನ್ ಅನುಮಾನಗೊಂಡು ವಾಹನ ಪರಿಸೀಲಿಸಿದಾಗ ಆರೋಪಿಗಳು ಅವರ ಮೇಲೆಯೇ ವಾಹನ ಹತ್ತಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಮಾಹಿತಿ ಮೇರೆಗೆ ಉಳಿದರವನ್ನು ಬಂಧಿಸಲಾಗಿತ್ತು. ಆದರೆ, ಈ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.


Click it and Unblock the Notifications











