ಎರಡು ಮದ್ವೆಯಾದರೂ 'ಗುರು'ಗೆ ಸಿಗಲಿಲ್ಲ ಸಂಸಾರ ಸುಖ ? ಸಾಲದ ಹೊರೆ ಜೊತೆ ಕಾಡುತ್ತಿತ್ತು ಒಂಟಿತನ..?
ನಾವ್ ಸಿನಿಮಾನ ಲೈಟಾಗಿ ತಗೊಳ್ಳಲ್ಲ ಅಂತಿದ್ದವರು ಗುರುಪ್ರಸಾದ್. ಕೆಟ್ಟ ಸಿನಿಮಾ ಕೊಟ್ಟರೆ ಜನರಿಗೆ ಮುಖ ಹೆಂಗೆ ತೋರ್ಸೋದು ಎಂದು ತಮ್ಮ ಕ್ರಿಯಾಶೀಲತೆಯನ್ನೆಲ್ಲ ಒರೆಗಲ್ಲಿಗೆ ಹಚ್ಚಿದ್ದ ಗುರುಪ್ರಸಾದ್ ತಮ್ಮ ವ್ಯೆಯಕ್ತಿಕ ಜೀವನಕ್ಕೆ ತಮ್ಮ ಕೈಯಾರೆ ಬೆಂಕಿ ಹಚ್ಚಿದ್ದು ದೌರ್ಭಾಗ್ಯ.
ಹೌದು, ಈಗ್ಗೆ ಒಂದು ಆರು ವರ್ಷದ ಹಿಂದೆ ಗುರು ಪ್ರಸಾದ್ ತಮ್ಮ ಮೊದಲನೇ ಪತ್ನಿ ಆರತಿ ಅವರಿಂದ ದೂರವಾಗಿದ್ದರು. ಹೆಚ್ಚು ಕಡಿಮೆ ಹದಿನಾರು ವರ್ಷ ಜೊತೆಯಾಗಿ ಸಂಸಾರ ನಡೆಸಿದ್ದ ಗುರು ಪ್ರಸಾದ್ ತಮ್ಮ ಹೆಂಡ್ತಿಯ ಜೊತೆ ಸಂಬಂಧವನ್ನು ಕಡಿದುಕೊಂಡಿದ್ದರು.

ಆ ಕಾಲಕ್ಕೆ ಶುರುವಾಗಿದ್ದ ಮೀಟೂ ಅಭಿಯಾನದ ಬಗ್ಗೆ ಮಾತನಾಡಿದ್ದ ಗುರು ಮೀಟೂ ಅಭಿಯಾನ ಮಾಡೋರೆಲ್ಲ ಪತಿವ್ರತೆಯರಾ ಎಂದು ಪ್ರಶ್ನೆ ಮಾಡಿದ್ದರು. ಗುರು ಪ್ರಸಾದ್ ನೀಡಿದ್ದ ಈ ಹೇಳಿಕೆಯನ್ನು ಅವರ ಪತ್ನಿ ಆರತಿ ಅವರೇ ಆಗ ಒಪ್ಪಿರಲಿಲ್ಲ. ಹೀಗಾಗಿಯೇ ಬೇರೆಯವರ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಮೊದಲು ತಮ್ಮ ಬದುಕನ್ನು ಒಮ್ಮೆ ಗುರು ನೋಡಿಕೊಳ್ಳಲಿ ಎಂದು ಆರತಿ ಕಿಡಿ ಕಾರಿದ್ದರು. ಗುರುಪ್ರಸಾದ್ ಗೆ ಇರುವುದು ಒಂದು ಮುಖ ಅಲ್ಲ ಅವರದ್ದು ನೂರಾರು ಮುಖ ಎಂದು ಬಿಕ್ಕಿದ್ದರು. ಮಧ್ಯರಾತ್ರಿ ಮನೆಯಿಂದ ಪತ್ನಿ ಮತ್ತು ಮಗಳನ್ನು ಹೊರ ಹಾಕಿದ್ದು ಯಾರು ಎನ್ನುವ ಪ್ರಶ್ನೆಯನ್ನು ಮಾಡಿದ್ದರು. ಹದಿನಾರು ವರ್ಷದ ಸಾಂಸಾರಿಕ ಜೀವನದಲ್ಲಿ ನೊಂದು ಬೆಂದಿದ್ದೇನೆ ಎಂದು ಗುರು ಪ್ರಸಾದ್ ಅವರಿಂದ ಆರತಿ ಆ ನಂತರ ವಿಚ್ಛೇದನವನ್ನು ಪಡೆದಿದ್ದರು.
ಹೀಗೆ ಆರತಿ ಅವರಿಂದ ದೂರವಾದ ಗುರುಪ್ರಸಾದ್ 2023ರ ಆಸು ಪಾಸಿನಲ್ಲಿ ಹೆಚ್ಚು ಕಡಿಮೆ ಮಗಳ ವಯಸ್ಸಿನ ಸುಮಿತ್ರಾ ಅವರನ್ನು ಮದುವೆಯಾಗಿದ್ದರು. ಅವರಿಗೂ ಕೂಡ ಹೆಣ್ಣು ಮಗುವನ್ನು ಪ್ರಾಪ್ತಿ ಮಾಡಿದ್ದರು. ಹೋಗಲಿ ಸುಮಿತ್ರಾ ಅವರ ಜೊತೆಯಾದರು ಗುರುಪ್ರಸಾದ್ ನೆಮ್ಮದಿಯಿಂದ ಬಾಳ್ವೆ ನಡೆಸಿದ್ದರೆ ಆ ಕಥೆ ಬೇರೆಯಾಗುತ್ತಿತ್ತು.
ಆದರೆ ಗುರುಪ್ರಸಾದ್ ತಮ್ಮ ಎರಡನೇ ಪತ್ನಿ ಸುಮಿತ್ರಾ ಅವರನ್ನು ತಮ್ಮ ಅರಾಜಕ ಬದುಕಿನ ಭಾಗವಾಗಿಸಿಕೊಂಡಿದ್ದರು. ಕಾಸು ಕೇಳಲು ಬಂದವರ ವಿರುದ್ಧ ತಮ್ಮ ಎರಡನೇ ಪತ್ನಿಯಿಂದ ಪ್ರತಿ ದೂರನ್ನು ಸಲ್ಲಿಸುವ ಪ್ರಯತ್ನ ಮಾಡಿದರು. 30 ಲಕ್ಷ ಕಾಸು ಕೊಟ್ಟು ಸಂಕಟ ಅನುಭವಿಸುತ್ತಿದ್ದ ಶ್ರೀನಿವಾಸ್ ವಿರುದ್ಧ ತಮ್ಮ ಎರಡನೇ ಪತ್ನಿ ಸುಮಿತ್ರಾ ಅವರಿಂದ ಸುಳ್ಳು ದೂರು ಕೊಡಿಸಲು ಹೋಗಿ ವಿಫಲರಾಗಿದ್ದರು. ಆಮೇಲೆ ಅದೇನಾಯ್ತೋ ರಂಗನಾಯಕ ಚಿತ್ರದ ಸೋಲಿನ ನಂತರ ಗುರು ಪ್ರಸಾದ್ ತಮ್ಮ ಎರಡನೇ ಹೆಂಡತಿ ಸುಮಿತ್ರಾ ಅವರಿಂದ ಕೂಡ ಅಂತರವನ್ನು ಕಾಪಾಡಿಕೊಳ್ಳಲು ಶುರು ಮಾಡಿದ್ದರು. ಎರಡನೇ ಪತ್ನಿ ಮತ್ತು ಮಗಳನ್ನು ಬಿಟ್ಟು ಏಕಾಂಗಿಯಾಗಿ ಬದುಕಲು ಶುರು ಮಾಡಿದರು.
ಒಂದು ಕಡೆ ಸಾಲಗಾರರ ಕಾಟ ಮತ್ತೊಂದು ಕಡೆ ಒಂಟಿತನದಿಂದ ಗುರು ಪ್ರಸಾದ್ ಖಿನ್ನತೆಗೆ ಜಾರಿದರಾ ಗೊತ್ತಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಿಂದ ಮತ್ತು ಗಾಂಧಿನಗರದಿಂದ ಕಳೆದ ಆರು ತಿಂಗಳಿಂದ ದೂರ ಇದ್ದ ಗುರುಪ್ರಸಾದ್ ಇತ್ತೀಚಿನ ದಿನಗಳಲ್ಲಿ ವಿಪರೀತ ಕುಡಿಯಲು ಶುರು ಮಾಡಿದ್ದರು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಮಿತಿಮೀರಿದ ಸಾಲ, ಕುಡಿತ, ಸುಳ್ಳು ಹೀಗೆ ಒಂದಕ್ಕೊಂದು ಬೆಸೆದುಕೊಂಡು ಒದ್ದಾಡುತ್ತಿದ್ದ ಗುರುಪ್ರಸಾದ್ ಅದೆಲ್ಲದರಿಂದ ಹೊರ ಬಾರಲಾಗದೇ ಉಸಿರು ಚೆಲ್ಲಿರಬಹುದು ಎನ್ನುವ ಅಭಿಪ್ರಾಯ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪ್ರತಿಭಾವಂತ ನಿರ್ದೇಶಕನ ಅಗಲಿಕೆಯ ಸುದ್ದಿಯನ್ನು ಕೇಳಿ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.
ಒಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದು ಆಸ್ಕರ್ ತರಬೇಕೆಂದು ಕನಸು ಕಂಡಿದ್ದ ಗುರುಪ್ರಸಾದ್,ತಾವೇ ಸೃಷ್ಟಿಸಿಕೊಂಡ ಅದ್ವಾನಗಳಿಂದ ಹೊರಬರಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಪ್ರಸಾದ್ ಅವರ ಸಾವು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.


Click it and Unblock the Notifications











