ಯಾರ ಒತ್ತಡಕ್ಕೂ ಕ್ಯಾರೆ ಅನ್ನದೆ ದರ್ಶನ್ ಬಂಧಿಸಿದ ಆ ಇಬ್ಬರು 'ರಿಯಲ್ ಹೀರೊ'ಗಳ್ಯಾರು ಗೊತ್ತೇ?
ಸಿನಿಮಾ ಮಾಡುವವರಿಗೆ ರಿಯಲ್ ಸಿನಿಮಾ ತೋರಿಸಿದ ಘಟನೆಯಿದು. ದರ್ಶನ್ ಪೊಲೀಸ್ ಅಧಿಕಾರಿಯಾಗಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಾಕಿ ತೊಟ್ಟು ಹೀರೋಯಿಸಂ ತೋರಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಈಗ ರಿಯಲ್ ಪೊಲೀಸರು ತಾವೇ ಹೇಗೆ? ತಮ್ಮ ಕಾರ್ಯವೈಖರಿ ಹೇಗಿರುತ್ತೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಗಳ ಮುಂದೆ ನಾಲ್ಕು ಮಂದಿ ಬಂದು ಶರಣಾಗಾಗಿದ್ದರು. ಹಣಕಾಸಿನ ವಿಷಯಕ್ಕೆ ರೇಣುಕಾಸ್ವಾಮಿಯನ್ನು ಕೊಂದಿದ್ದು ನಾವೇ ಅಂತ ಒಪ್ಪಿಕೊಂಡಿದ್ದರು. ಸ್ಟೆಷನ್ ಲೆವೆಲ್ ಅಧಿಕಾರಿಗಳು ನಂಬಿದರೂ, ಡಿಸಿಪಿ ಗಿರೀಶ್ ಅವರು ಶರಣಾದವರ ವಾದವನ್ನು ಒಪ್ಪುವುದಕ್ಕೆ ರೆಡಿಯಿರಲಿಲ್ಲ. ಇಲ್ಲೇನೋ ಮಿಸ್ ಹೊಡೆಯುತ್ತಿದೆ ಅನ್ನೋ ಸುಳಿವು ಸಿಕ್ಕಿತ್ತು.

ಈಗಾಗಲೇ ಶರಣಾದವರನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ಮಾಡುವುದಕ್ಕೆ ಶುರು ಮಾಡಿದ್ದರು. ಆಗಲೇ, ಆರೋಪಿಗಳು ರೇಣುಕಾಸ್ವಾಮಿಯ ಹಿಂದಿನ ಅಸಲಿ ಸತ್ಯವನ್ನು ಹೊರಹಾಕಿದ್ದರು. ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ದರ್ಶನ್ ಹೆಸರನ್ನು ಬಾಯಿ ಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆ ಯಾಕೆ ಆಯ್ತು? ದರ್ಶನ್ ಯಾಕೆ ಬಂದ್ರು? ಏನು ಮಾಡಿದರು? ಅನ್ನೋ ಅಸಲಿ ಸತ್ಯವನ್ನು ಹೇಳಿದ್ದರು.
ಈ ಕೊಲೆ ಪ್ರಕರಣ ಪ್ರಾರಂಭಿಕ ಹಂತದಲ್ಲಿಯೇ ಮುಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳೂ ಇತ್ತು. ಒಂದ್ವೇಳೆ ಡಿಸಿಪಿ ಗಿರೀಶ್, ಎಸಿಪಿ ಚಂದನ್ ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಬಿ. ದಯಾನಂದ್ ಇರದೇ ಹೋಗಿದ್ದರೆ, ಈ ಕೇಸನ ಅಸಲಿ ಸತ್ಯ ಬೆಳಕಿಗೆ ಬರುತ್ತಿರಲಿಲ್ಲ ಅಂತ ಅಧಿಕಾರಿಯೊಬ್ಬರು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.

ಇನ್ನು ಅದ್ಯಾವಾಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಹೊರಬಂತೋ, ಆಗಲೇ ಡಿಸಿಪಿ ಗಿರೀಶ್ ಬಂಧನಕ್ಕೆ ಸ್ಕೆಚ್ ಹಾಕಿದ್ದರು. ಇವರೊಂದಿಗೆ ವಿಜಯನಗರ ಪೊಲೀಸ್ ಠಾಣೆಯ ಎಸಿಪಿ ಚಂದನ್ ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಬಿ. ದಯಾನಂದ್ ಪ್ಲ್ಯಾನ್ ಮಾಡಿದ್ದರು. ಈ ವೇಳೆ ತಮ್ಮ ಮೇಲೆ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ಬರುತ್ತೆ ಅನ್ನೋದು ಅವರಿಗೂ ಮನವರಿಕೆಯಾಗಿತ್ತು. ಅದಕ್ಕೆ ಸಲಕ ಸಿದ್ಧತೆಗಳನ್ನು ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದರು.
ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದವರು ಗಿರೀಶ್. ಬಳಿಕ ಐಪಿಎಸ್ ಆಗಿ ಅಧಿಕಾರಿಯಾಗಿ ಖಾಕಿ ತೊಟ್ಟು ಸಾರ್ವಜನಿಕರ ಸೇವೆಗೆ ಬಂದಿದ್ದಾರೆ. ಸದ್ಯ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಹೈಪ್ರೊಫೈಲ್ ಕೇಸ್ಗಳನ್ನು ಹ್ಯಾಂಡಲ್ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳನ್ನು, ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಿ ಹೆಸರುವಾಗಿಯಾಗಿದ್ದಾರೆ. 2011ರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೂ ಬಂಧಿಸಿದ್ದು ಇದೇ ಅಧಿಕಾರಿ.
ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್ ಇಬ್ಬರೂ ಸೇರಿ ಶರಣಾದವರನ್ನು ಬೆಂಡೆತ್ತಿದ್ದರು. ಬಳಿಕ ಅವರು ಈ ಕೊಲೆಯನ್ನು ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಿದ ವಿಷಯವ ಬಾಯಿ ಬಿಟ್ಟಿದ್ದರು. ಹೀಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಗ್ಯಾಂಗ್ನ ಒಬ್ಬೊಬ್ಬರ ಹೆಸರುಗಳೇ ಹೊರಬರುವುದಕ್ಕೆ ಶುರುವಾಗಿತ್ತು. ಈಗ ಸಾಕ್ಷಿಗಳನ್ನು ಕ್ರೂಢೀಕರಿಸಿದ ಬಳಿಕ ದರ್ಶನ್ ಬಂಧನಕ್ಕೆ ಬಂದು ನಿಂತಿತ್ತು.
ದರ್ಶನ್ ಬಂಧನಕ್ಕೆ ಎಸಿಪಿ ಚಂದನ್ ಕುಮಾರ್ ಅವರ ನೇತೃತ್ವದ ತಂಡವನ್ನು ನಿಯೋಜನೆ ಮಾಡಿ ಮೈಸೂರಿಗೆ ಕಳುಹಿಸಲಾಯಿತು. ಸೀದಾ ಮೈಸೂರಿಗೆ ತೆರಳಿದ ಎಸಿಪಿ ಚಂದನ್ ಕುಮಾರ್ ತಂಡ ಜಿಮ್ನಲ್ಲಿ ದರ್ಶನ್ ಬಂಧನಕ್ಕೆ ಮುಂದಾಗಿತ್ತು. ಆ ವೇಳೆ ದರ್ಶನ್ ತಮ್ಮದೇ ಕಾರಿನಲ್ಲಿ ಬರುತ್ತೇನೆ ಅಂತ ಹಠ ಹಿಡಿದಿದ್ದರು. ಅದನ್ನು ಕೇಳದ ಎಸಿಪಿ ಚಂದನ್ ಕುಮಾರ್ ಚಾಲೆಂಜಿಂಗ್ ಸ್ಟಾರ್ರನ್ನು ಬಂಧಿಸಿ ಕರೆತಂದಿದ್ದರು.
ದರ್ಶನ್ ಬಂಧನದ ವಿಷಯ ತಿಳಿಯುವ ಹೊತ್ತಿಗಾಗಲೇ ರಾಜಕೀಯ ಮುಖಂಡರಿಂದ ಒತ್ತಡ ಬಂದಿದ್ದವು. ಆದರೆ, ಅದ್ಯಾವುದಕ್ಕೂ ಇವರು ಕ್ಯಾರೆ ಅನ್ನಲಿಲ್ಲ. ಮಿಂಚಿನ ವೇಗದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿ ದರ್ಶನ್ ವಿರುದ್ಧ ಕೇಸ್ ದಾಖಲಿಸಿದ್ದರು. ಹೀಗಾಗಿ ಈ ಇಬ್ಬರು ಪೊಲೀಸ್ ಅಧಿಕಾರಿಗಳು 'ರೀಲ್ ಹೀರೊ'ನಾ ಬಂಧಿಸಿ 'ರಿಯಲ್ ಹೀರೊ'ಗಳಾಗಿದ್ದಾರೆ.


Click it and Unblock the Notifications










