ಬಾಲಯ್ಯ ಬೆನ್ನ ಹಿಂದೆ ಮತ್ತೊಮ್ಮೆ ನಿಂತ ಶಿವಣ್ಣ, 'ಅಖಂಡ 2' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಹ್ಯಾಟ್ರಿಕ್ ಹೀರೋ
ಚಿತ್ರರಂಗದಲ್ಲಿ ಕೇವಲ ಬಿಲ್ಡಪ್ಗಳಿಂದ ಸ್ಟಾರ್ ಆದವರು ಯಾರಾದರೂ ಇದ್ದರೆ ಅದು ಪಕ್ಕದ ಮನೆಯ ಬಾಲಯ್ಯ ಮಾತ್ರ. ಪ್ಯಾರಾಚೂಟ್ ಮೂಲಕವೇ ಪಾಕಿಸ್ತಾನಕ್ಕೆ ಹೋಗುವ.. ಒಂದೇ ಕೈಯಲ್ಲಿ ರೈಲನ್ನೂ ನಿಲ್ಲಿಸುವ.. ಚಕಚಕನೆ ಬೆಟ್ಟ ಹತ್ತುವ ಸಾಮರ್ಥ್ಯವನ್ನು ಹೊಂದಿರುವ ಬಾಲಯ್ಯ ತೆಲುಗು ಚಿತ್ರರಂಗದ ಪವಾಡ ಪುರುಷ ಕೂಡ ಹೌದು. ''ಡೋಂಟ್ ಟ್ರಬಲ್ ದಿ ಟ್ರಬಲ್'' ಎಂಬ ಡೈಲಾಗ್ ಹೊಡೆಯುತ್ತಲೇ...
110 ಚಿತ್ರಗಳನ್ನು ಮಾಡಿರುವ ಬಾಲಯ್ಯ ಅಲಿಯಾಸ್ ನಂದಮೂರಿ ಬಾಲಕೃಷ್ಣ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗಿವೆ. ಇಂಥಾ ಬಾಲಯ್ಯ ಸದ್ಯ ''ಅಖಂಡ 2'' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಬೇರೆ ಎಲ್ಲ ಸ್ಟಾರ್ಗಳಂತೆ ಅಖಂಡ 2 ಮೂಲಕ ಪ್ಯಾನ್ ಇಂಡಿಯಾ ಪ್ರವಾಸ ಮಾಡಲು ಮುಂದಾಗಿದ್ದಾರೆ. ಇವರ ಈ ಪ್ರವಾಸ ಕನ್ನಡದ ಮಣ್ಣಿಂದ ಶುರುವಾಗುತ್ತಿರುವುದು ವಿಶೇಷ.

ಹೌದು, ''ಅಖಂಡ 2'' ಚಿತ್ರ ಕೇವಲ ತೆಲುಗು ಮಾತ್ರವಲ್ಲ. ಹಿಂದಿಯೂ ಸೇರಿ ಬೇರೆ ಬೇರೆ ಭಾಷೆಗಳಲ್ಲಿ ಅಖಂಡ ವಿಶ್ವದೆಲ್ಲೆಡೆ ಇದೇ ಡಿಸೆಂಬರ್ 5ಕ್ಕೆ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರ ಶುರು ಮಾಡಿರುವ ಬಾಲಯ್ಯ ಮತ್ತು ತಂಡ ಮೊನ್ನೆ ಮೊನ್ನೆಯಷ್ಟೇ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ.
ಸದ್ಯ.. ಬಿಡುಗಡೆಯಾದ ''ತಾಂಡವಮ್'' ಹಾಡು ಯೂಟ್ಯೂಬ್ನಲ್ಲಿ ಅಬ್ಬರಿಸುತ್ತಿದೆ. ಈ ಹಾಡಿನ ಪ್ರಭೆಯಲ್ಲಿಯೇ ಈಗ ಚಿತ್ರತಂಡ ಚಿತ್ರದ ಟ್ರೇಲರ್ನ ಇದೇ ನವೆಂಬರ್ 21ರಂದು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಚಿಕ್ಕಬಳ್ಳಾಪುರದಲ್ಲಿ ಅಭಿಮಾನಿಗಳ ಅಭಿಮಾನದ ಪ್ರತೀಕದಂತೆ ನಡೆಯಲಿರುವ ಈ
ಅದ್ಧೂರಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ಮುಖ್ಯ ಅತಿಥಿಯಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬರುತ್ತಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಶಿವಣ್ಣ ಮತ್ತು ಬಾಲಯ್ಯ ಅವರದ್ದು ಒಂದೇ ಜೀವ ಎರಡು ದೇಹ ಎನ್ನುವಂತಹ ಸ್ನೇಹ. ಶಿವಣ್ಣ ಚಿತ್ರಗಳಿಗೆ ಬಾಲಯ್ಯ ಬೆಂಬಲ ನೀಡಿದರೆ, ಬಾಲಯ್ಯ ಚಿತ್ರಗಳಿಗೆ ಶಿವಣ್ಣ ಸಾಥ್ ನೀಡುತ್ತಾ ಬಂದಿದ್ದಾರೆ. ಇನ್ನೂ ಶಿವಣ್ಣ ಅವರನ್ನು ಕನ್ನಡದ ಗಡಿಯಾಚೆ ಕರೆದುಕೊಂಡ ಹೆಗ್ಗಳಿಕೆ ಕೂಡ ಬಾಲಯ್ಯ ಅವರದ್ದೇ. ಬಾಲಯ್ಯ ಅಭಿನಯದ ನೂರನೇ ಚಿತ್ರ ''ಗೌತಮಿಪುತ್ರ ಶಾತಕರಣಿ''ಯಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಮೂಲಕ ಮೊದಲ ಬಾರಿಗೆ ಬೇರೆ ಭಾಷೆಯ ಚಿತ್ರಕ್ಕೆ ಬಣ್ಣ ಹಚ್ಚಿದ್ದರು.
ತೆಲುಗು ಚಿತ್ರರಂಗದ ಲೆಜೆಂಡರಿ ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ಟಿಆರ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ಖುದ್ದು ಶಿವಣ್ಣ ನನ್ನ ತಂದೆ ಡಾ ರಾಜ್ಕುಮಾರ್ ಅವರು ಕನ್ನಡದ ನಟ. ಎನ್ಟಿಆರ್ ಅವರು ತೆಲುಗು ನಟ. ಪ್ರತಿದಿನ ಈ ಇಬ್ಬರು ಕಲಾವಿದರನ್ನು ನೋಡಲು ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಚೆನ್ನೈಗೆ ಸಾಕಷ್ಟು ಅಭಿಮಾನಿಗಳು ಬರುತ್ತಿದ್ದರು. ನಾವು ಯಾವಾಗಲೂ ನಮ್ಮ ತಂದೆಯನ್ನು ಎನ್ಟಿಆರ್ ಅವರ ಕಿರಿಯ ಸಹೋದರ ಎಂದು ಭಾವಿಸುತ್ತಿದ್ದೆವು ಎಂದು ಹೇಳಿದ್ದರು. ಬಾಲಯ್ಯ ಅವರು ಕೂಡ ನನ್ನ ಸಹೋದರ ಇದ್ದಂತೆ ಎಂದು ಹೇಳಿದ್ದರು.

ಹೀಗೆ ಕಾಲ ಕಾಲಕ್ಕೆ ಪ್ರೀತಿ ಅಭಿಮಾನವನ್ನು ಪರಸ್ಪರ ತೋರಿಸುತ್ತಲೇ ಬಂದ ಶಿವಣ್ಣ ಮತ್ತು ಬಾಲಯ್ಯ ಈಗ ಮತ್ತೊಮ್ಮೆ ''ಅಖಂಡ 2'' ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ನವೆಂಬರ್ 21 ರಂದು ಸಂಜೆ 6 ಗಂಟೆಗೆ ಚಿಕ್ಕಬಳ್ಳಾಪುರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಬಾಲಯ್ಯ ಅವರ ಹಲವಾರು ಅಭಿಮಾನಿಗಳು ಬಂದು ಸೇರುವ ನಿರೀಕ್ಷೆ ಇದೆ. ಇನ್ನುಳಿದಂತೆ ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರಕ್ಕೆ ತಮನ್ ಸಂಗೀತ ನಿರ್ದೇಶನ ಇದೆ.ರಾಮ್ ಅಚಂತಾ ಮತ್ತು ಗೋಪಿ ಅಚಂತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications










