ನಿರ್ಮಾಪಕರು ನಿಗಿ ನಿಗಿ ಕೆಂಡ: ಕೊನೆಗೂ ಕ್ಷಮೆ ಕೇಳಿದ ಸತೀಶ್ ನೀನಾಸಂ, ಏನಿದು 'ಅಯೋಗ್ಯ' ವಿವಾದ
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ.
ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು ಇಂತಹ ಚಿತ್ರರಂಗದಲ್ಲಿ ನಿರ್ಮಾಪಕರ ಕಥೆ ಮತ್ತು ವ್ಯಥೆ ಆ ದೇವರಿಗೆ ಪ್ರೀತಿ.

ಹೀಗಿರುವಾಗ ನಿರ್ಮಾಪಕರಿಗೆ ಜ್ಞಾನದ ಕೊರತೆ ಇದೆ. ಕನ್ನಡ ಚಿತ್ರಕ್ಕೆ ಬೆವರು ಸುರಿಸಿ ದುಡಿದ ದುಡ್ಡನ್ನು ಹೂಡುವು ನಿರ್ಮಾಪಕರು ಅವಿದ್ಯಾವಂತರು. ಚಿತ್ರದ ಸೋಲಿಗೆ ನಿರ್ಮಾಪಕರೇ ಕಾರಣ ಎಂಬರ್ಥದಲ್ಲಿ ಯಾರಾದರೂ ಮಾತನಾಡಿದರೆ ..? ಅಣ್ಣಾವ್ರ ಕಣ್ಣಲ್ಲಿ ಕಾಣಿಸಿದ್ದ ಚಿತ್ರರಂಗದ ಅನ್ನದಾತರ ಎದೆಯ ಮೇಲೆ ಒದ್ದಂತೆ ಆಗಲ್ವಾ..? ಸದ್ಯ ಸತೀಶ್ ನೀನಾಸಂ ಅವರಾಡಿದ ಮಾತು ಇಂತಹದ್ದೇ ಒಂದು ಚರ್ಚೆಗೆ ಮುನ್ನುಡಿ ಬರೆದಿದೆ. ವಿವಾದಕ್ಕೆ ಕಾರಣವಾಗಿದೆ. ಸಡನ್ ಜ್ಞಾನೋದಯವಾದಂತೆ ಆಗಿ ಸತೀಶ್ ನೀನಾಸಂ ಕ್ಷಮೆಯನ್ನು ಕೂಡ ಕೇಳಿಯಾಗಿದೆ.
ಏನಿದು ಅಯೋಗ್ಯ ವಿವಾದ ..?
ಅಸಲಿಗೆ ಶ್ರೀಯುತ ಸತೀಶ್ ನೀನಾಸಂ ಅವರು ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ಅಯೋಗ್ಯ -2''. 2018-19ರ ಆಸು ಪಾಸು ತೆರೆಗೆ ಬಂದಿದ್ದ ''ಅಯೋಗ್ಯ'' ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಇದು. ಸದ್ಯ ಈ ''ಅಯೋಗ್ಯ 2'' ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಇದೇ ಸಮಯದಲ್ಲಿ ಸತೀಶ್ ನೀನಾಸಂ ಅವರಾಡಿದ ಮಾತುಗಳು ಕನ್ನಡದ ನಿರ್ಮಾಪಕರನ್ನು ಕೆರಳಿಸಿವೆ.
ಯಾಕೆಂದರೆ.. ಮಾತಿನ ಭರದಲ್ಲಿ ಸತೀಶ್ ನೀನಾಸಂ ಸಿನಿಮಾ ಸೋಲುತ್ತೆ ಎನ್ನುವುದು ಗೊತ್ತಿದ್ದಾಗ ಸಿನಿಮಾ ಯಾಕ್ರೀ ನಿರ್ಮಾಣ ಮಾಡ್ತೀರಾ..? ಎಂದು ಪ್ರಶ್ನೆ ಮಾಡಿದ್ದರು. ನಿರ್ಮಾಪಕರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದ್ದರು. ಕೇವಲ ಧನ ಹಾಕುವುದು ಮುಖ್ಯ ಅಲ್ಲ, ತನು ಮನ ಕೂಡ ಅರ್ಪಿಸಿ ಸಿನಿಮಾ ಮಾಡಿ ಎಂದಿದ್ದರು.
ಸತೀಶ್ ನೀನಾಸಂ ಅವರ ಈ ಮಾತು ಸಹಜವಾಗಿಯೇ ಹಲರವನ್ನು ಕೆರಳಿಸಿದೆ. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ಸೋಲು ಗೆಲುವಿನ ಆಚೆ ಇಲ್ಲಿ ಹಲವು ನಿರ್ಮಾಪಕರು ಮನೆ ಮಾರಿಕೊಂಡಿದ್ದಾರೆ. ಮನೆ ಮೇಲೆ ಮನೆಯನ್ನು ಕೂಡ ಕಟ್ಟಿಸಿದ್ದಾರೆ. ಅಂತಿಮವಾಗಿ ಆರಂಭದಲ್ಲಿಯೇ ನಾವು ಹೇಳಿದಂತೆ ಕಷ್ಟ-ನಷ್ಟ ಎಲ್ಲವೂ ನಿರ್ಮಾಪಕರದ್ದೇ.

ಹೀಗಾಗಿ ನಿಗಿ ನಿಗಿ ಕೆಂಡದಂತಾಗಿದ್ದ ಹಲವು ನಿರ್ಮಾಪಕರು ಇಂದು (ಜೂನ್ 22) ನಿರ್ಮಾಪಕರ ಸಂಘದಲ್ಲಿ ಸತೀಶ್ ನೀನಾಸಂ ವಿರುದ್ದ ಸಭೆ ಕರೆದಿದ್ದರು. ಇದನ್ನರಿತ ಸತೀಶ್ ನೀನಾಸಂ ಸದ್ಯ ಉಲ್ಟಾ ಹೊಡೆದಿದ್ದಾರೆ. ನಾನು ಹೇಳಿದ್ದೊಂದು. ನೀವು ಅರ್ಥ ಮಾಡಿಕೊಂಡಿದ್ದೊಂದು ಎಂದು ಸಮಜಾಯಿಷಿ ನೀಡುವ ಪ್ರಯುತ್ನ ಮಾಡಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿರುವ ಸತೀಶ್ ನೀನಾಸಂ, ನಾನು ಸಿನಿಮಾ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೇಳಿದ್ದೇನೆ ಹೊರತು, ನಾನು ನಿಮ್ಮ ಶಿಕ್ಷಣದ ಕುರಿತು ಮಾತನಾಡಿಲ್ಲ ಎಂದಿದ್ದಾರೆ. ನಿರ್ಮಾಪಕರಿಂದಲೇ ನಾವು ಮತ್ತು ಚಿತ್ರರಂಗ ಎಂದು ಕೂಡ ಹೇಳಿರುವ ಸತೀಶ್ ನೀನಾಸಂ ತಮ್ಮ ಹೇಳಿಕೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ಮಾಪಕನಾಗಿ ನಾನು ಕೂಡ ಸೋತು ತುಂಬಾ ವಿಚಾರ ಕಲಿತುಕೊಂಡಿದ್ದೇನೆ ಈ ಹಿನ್ನೆಲೆ ಚಿತ್ರರಂಗಕ್ಕೆ ಬರುವ ಹೊಸಬರು ಎಲ್ಲ ವಿಭಾಗವನ್ನು ತಿಳಿದುಕೊಂಡು ಬರಬೇಕು ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಸತೀಶ್ ನೀನಾಸಂ ಅವರ ಈ ಮಾತು ಈ ಸ್ಪಷ್ಟನೆ ನಿರ್ಮಾಪಕರ ಅಸಹನೆ, ಅಸಮಾಧಾನ, ಕೋಪ-ತಾಪವನ್ನೆಲ್ಲಾ ತಣ್ಣಗಾಗಿಸುತ್ತಾ..? ಕಾದು ನೋಡಬೇಕಿದೆ.


Click it and Unblock the Notifications