ಕನ್ನಡ, ತಮಿಳು ಎರಡು ಭಾಷೆಗಳಲ್ಲಿ ಡಬ್ಬಿಂಗ್ ಮುಗಿಸಿದ 'ಉದ್ಘರ್ಷ'
ಮಾಸ್ಟರ್ ಆಫ್ ಸಸ್ಪೆನ್ಸ್ ಥ್ರಿಲ್ಲರ್ ಎಂದೇ ಖ್ಯಾತಿಯಾಗಿರೋ ಸೃಜನಶೀಲ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಸಿನಿಮಾದ ಡಬ್ಬಿಂಗ್ ಕೆಲಸ ಬಹುತೇಕ ಮುಗಿದಿದೆ. ಕಳೆದ ವಾರ ಕನ್ನಡದ ಡಬ್ಬಿಂಗ್ ಮುಗಿಸಿದ್ದ ಚಿತ್ರತಂಡ, ಚೆನ್ನೈಗೆ ತೆರಳಿತ್ತು.
ಈಗ 'ಉದ್ಘರ್ಷ' ತಮಿಳು ವರ್ಷನ್ ಡಬ್ಬಿಂಗ್ ಸಹ ಮುಗಿದಿದ್ದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರಾಳರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೈದರಾಬಾದ್ ಗೆ ಪ್ರಯಾಣ ಬೆಳಸಲಿರೋ ನಿರ್ದೇಶಕ ದೇಸಾಯಿ, ತೆಲುಗು ಅವತರಣಿಕೆಯ ಡಬ್ಬಿಂಗ್ ಕಾರ್ಯವನ್ನೂ ಮುಗಿಸಲಿದ್ದಾರೆ.

ಇನ್ನು ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಮೂರು ಸಾಹಸ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಸಾಹಸ ನಿರ್ದೇಶಕ ರವಿ ವರ್ಮಾ, ಸಂಯೋಜನೆಯಲ್ಲಿ ಮೂರು ಅದ್ಧೂರಿ ಫೈಟ್ ಗಳಿಗೆ ಪ್ಲಾನ್ ಮಾಡಿರುವ ದೇಸಾಯಿ, ಕೆಲವೇ ದಿನಗಳಲ್ಲಿ ಇದನ್ನೂ ಮುಗಿಸುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರುವ ದೇಸಾಯಿ, ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲು ಯೋಚಿಸಿದ್ದಾರೆ. ಇನ್ನು 'ಉದ್ಘರ್ಷ' ಚಿತ್ರದಲ್ಲಿ ದೊಡ್ಡ ಪ್ರಮಾಣದ ತಾರಾ ಬಳಗವೇ ಇದ್ದು, ಮಿಸ್ಟರ್ ವರ್ಲ್ಡ್ ಖ್ಯಾತಿ ಠಾಕೂರ್ ಅನೂಪ್ ಸಿಂಗ್, ಬಹುಭಾಷಾ ತಾರೆ ಕಬೀರ್ ಸಿಂಗ್ ದುಹಾನ್, ಕಿಶೋರ್, ಕಬಾಲಿ ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಶ್ರದ್ಧಾ ದಾಸ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ವಂಶಿ ಕೃಷ್ಣ, ಸೃಜನ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications











