‘ಉಲ್ಟಾ ಪಲ್ಟಾ’ ಖ್ಯಾತಿಯ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ನಿಧನ
ಚಿತ್ರರಂಗಕ್ಕೆ ಈ ವರ್ಷ ಒಂದಾದ ಮೇಲೊಂದರಂತೆ ಆಘಾತಗಳಾಗುತ್ತಿವೆ. ಕಲಾ ಸೇವೆಯನ್ನು ಮಾಡಿದ ಸಾಧಕರು ಒಬ್ಬರ ಹಿಂದೆ ಒಬ್ಬರಂತೆ ಇಹಲೋಕ ತ್ಯಜಿಸುತ್ತಿದ್ದಾರೆ. ಕೇವಲ 20 ದಿನಗಳ ಅಂತರದಲ್ಲಿ ಭಾರತಿ ರಾಜ, ಕೆ.ಭಾಗ್ಯರಾಜ್ ಅವರನ್ನು ಕಳೆದುಕೊಂಡ ಚಿತ್ರರಂಗಕ್ಕೆ ಇಂದು (ಜೂನ್ 28) ಮತ್ತೊಂದು ಬರಸಿಡಿಲು ಬಡಿದಿದ್ದು ಕನ್ನಡದ ಕೆಲವೇ ಕೆಲ ಕ್ಲಾಸಿಕ್ ಕಾಮಿಡಿ ಚಿತ್ರಗಳಲ್ಲಿ ಒಂದಾದ ''ಉಲ್ಟಾ ಪಲ್ಟಾ'' ಚಿತ್ರದ ನಿರ್ದೇಶಕ ಎನ್ಎಸ್ ಶಂಕರ್ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ಎಸ್ ಶಂಕರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮಲಗಿದ್ದಾಗಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅನಾರೋಗ್ಯಕ್ಕೀಡಾಗಿದ್ದ ತಮ್ಮ ಪತ್ನಿಯನ್ನು ಶಂಕರ್ ಕಳೆದುಕೊಂಡಿದ್ದರು. ಆ ನೋವಲ್ಲಿಯೇ ಇದ್ದ ಶಂಕರ್ ಅವರು ತಮ್ಮ ಪತ್ನಿಯನ್ನು ಹಿಂಬಾಲಿಸಿದ್ದಾರೆ.

ಎನ್ಎಸ್ ಶಂಕರ್ ಹಿನ್ನೆಲೆ
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದ್ದ ಎನ್ಎಸ್ ಶಂಕರ್, ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಾಲ್ಯ ಕಳೆದರು. ಆ ನಂತರ ಮೈಸೂರಿನಲ್ಲಿ ಹೈಸ್ಕೂಲ್ ಓದಿದ್ದ ಶಂಕರ್ ಬೆಂಗಳೂರಿನಲ್ಲಿ ಕಾಲೇಜ್ ಶಿಕ್ಷಣ ಪೂರ್ಣಗೊಳಿಸಿದ್ದರು.
ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೆಸರು ಮಾಡುವ ಮುನ್ನ ಪತ್ರಕರ್ತರಾಗಿದ್ದ ಎನ್ಎಸ್ ಶಂಕರ್ , ಪಿ. ಲಂಕೇಶ್ ಅವರ ''ಲಂಕೇಶ್ ಪತ್ರಿಕೆ''.. ''ಮುಂಗಾರು''.. ''ಪ್ರಜಾವಾಣಿ'' ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.
ಪತ್ರಿಕೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ, ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಧ್ವನಿಯಾಗಿ ಶೋಷಿತರ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಎನ್ಎಸ್ ಶಂಕರ್ ಅವರನ್ನು ಚಿತ್ರರಂಗ ತನ್ನತ್ತ ಸೆಳೆಯಿತು.
ಇವರ ನಿರ್ದೇಶನದ ಮೊದಲ ಚಿತ್ರ ''ಉಲ್ಟಾ ಪಲ್ಟಾ'' ಕನ್ನಡ ಚಿತ್ರರಂಗದಲ್ಲಿ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆಯಿತು. ವಿಲಿಯಂ ಶೇಕ್ಸ್ಪಿಯರ್ ಅವರ ''ಕಾಮಿಡಿ ಆಫ್ ಎರರ್ಸ್'' ನಾಟಕವನ್ನು ಆಧರಿಸಿದ ಈ ಹಾಸ್ಯ ಪ್ರಧಾನ ಚಿತ್ರ ಪ್ರೇಕ್ಷಕರನ್ನು ಕರಾವಳಿಯಿಂದ ಹಿಡಿದು ಕಲ್ಯಾಣ ಕರ್ನಾಟಕದವರೆಗೆ ನಗೆಗಡಲಿನಲ್ಲಿ ತೇಲಿಸಿತ್ತು.
ಇತ್ತೀಚಿನ ದಿನಗಳಲ್ಲೂ ಅವರ ಕ್ರಿಯಾಶೀಲತೆ ಕಡಿಮೆಯಾಗಿರಲಿಲ್ಲ. ತಮ್ಮ ಕೊನೆಯ ದಿನಗಳವರೆಗೂ ಅವರು 'ಈಗ...' ಎಂಬ ಮೂರು ಭಾಗಗಳ ಕಿರುಚಿತ್ರಗಳ ಸರಣಿಯ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಯಾವತ್ತು ಬೀಳದ ಎನ್ಎಸ್ ಶಂಕರ್ ಅವರ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2024ರಲ್ಲಿ ಇವರಿಗೆ ಪ್ರತಿಷ್ಠಿತ ''ರಾಜ್ಯೋತ್ಸವ ಪ್ರಶಸ್ತಿ'' ನೀಡಿ ಗೌರವಿಸಿತ್ತು.
ಚಿತ್ರರಂಗ ಮಾತ್ರವಲ್ಲದೆ ಸಾಹಿತ್ಯ ಲೋಕಕ್ಕೂ ಕೂಡ ಅಪಾರ ಕೊಡುಗೆಯನ್ನು ನೀಡಿರುವ ಶಂಕರ್, ಸುಮಾರು 20ಕ್ಕೂ ಹೆಚ್ಚು ವೈಚಾರಿಕ ಹಾಗೂ ಸಾಹಿತ್ಯಿಕ ಕೃತಿಗಳನ್ನು ರಚಿಸಿದ್ದಾರೆ. ಅವರ ಅಗಲಿಕೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಿದ್ಧರಾಮಯ್ಯ ಸಂತಾಪ
ಹಿರಿಯ ಪತ್ರಕರ್ತ ಮತ್ತು ಪ್ರತಿಭಾವಂತ ಚಿತ್ರ ನಿರ್ದೇಶಕ ಮತ್ತು ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದ ಎನ್.ಎಸ್.ಶಂಕರ್ ಅವರ ಸಾವಿನ ಸುದ್ದಿ ಕೇಳಿ ದು:ಖವಾಯಿತು.
ಪ್ರಜಾವಾಣಿ, ಮುಂಗಾರು, ಸುದ್ದಿಸಂಗಾತಿ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಶಂಕರ್, ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಇನ್ನಷ್ಟು ಕಾಲ ನಮ್ಮ ಜೊತೆ ಇದ್ದು, ನಮಗೆಲ್ಲ ಮಾರ್ಗದರ್ಶನ ನೀಡಬೇಕಾಗಿತ್ತು. ಅವರ ಕುಟುಂಬವರ್ಗಕ್ಕೆ ಸಂತಾಪಗಳು, ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಎನ್.ಎಸ್. ಶಂಕರ್ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅವರು ಸದಾ ಜೀವಂತವಾಗಿರುತ್ತಾರೆ. ''ಉಲ್ಟಾ ಪಲ್ಟಾ'' ಚಿತ್ರವನ್ನು ನೋಡಿ ನಗುವ ಪ್ರತಿ ಪ್ರೇಕ್ಷಕನ ಮೊಗದಲ್ಲಿಯೂ ಶಂಕರ್ ಅವರ ನೆನಪು ಇರುತ್ತದೆ. ಮಾಧ್ಯಮ ಮತ್ತು ಚಿತ್ರರಂಗದ ಈ ಮೇಧಾವಿಗೆ ಕರುನಾಡಿನ ಭಾವಪೂರ್ಣ ವಿದಾಯ.


Click it and Unblock the Notifications