"ಇವ್ರ ಮಾತು ಕಟ್ಕೊಂಡು ಕೋಟ್ಯಾಂತರ ರೂಪಾಯಿ ಹಾಕಿದೆ.. ಬಂದಿದ್ದು ₹16 ಲಕ್ಷ"; ಏನಿದು ಉಮಾಪತಿಯ 'ರಾಬರ್ಟ್' ಲೆಕ್ಕ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಮಾತಿನ ಸಮರ ನಡೆಯುತ್ತಿದೆ. 'ಕಾಟೇರ' ಟೈಟಲ್ಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನ್ 'ರಾಬರ್ಟ್' ನಿರ್ಮಾಪಕ ಉಮಾಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. 'ಕಾಟೇರ' ಟೈಟಲ್ ಕೊಟ್ಟಿದ್ದೇ ನಾನು ಎಂದು ದರ್ಶನ್ ಹೇಳಿದ್ದರು. ಈ ವೇಳೆ ಕೋಪದ ಭರಾಟೆಯಲ್ಲಿ ಉಮಾಪತಿಗೆ ತಗಡು ಎಂದು ಜರಿದಿದ್ದರು.
ಇದು 'ರಾಬರ್ಟ್' ಸಿನಿಮಾ ನಿರ್ಮಾಪಕನ ಆಕ್ರೋಶಕ್ಕೆ ಕಾರಣವಾಗಿತ್ತು. ನಿನ್ನೆ(ಫೆಬ್ರವರಿ 20) ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಲವು ಚಾನೆಲ್ ಹಾಗೂ ಯೂಟ್ಯೂಬ್ಗಳಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಉಮಾಪತಿ ಕೂಡ ದರ್ಶನ್ ವಿರುದ್ಧ ಆಕ್ರೋಶದಿಂದ ಮಾತಾಡಿದ್ದಾರೆ. ಇದೇ 'ರಾಬರ್ಟ್' ಸಿನಿಮಾ ಕಲೆಕ್ಷನ್ ಬಗ್ಗೆನೂ ಮಾತಾಡಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಹಿಂದೆ ದರ್ಶನ್ಗಾಗಿ 'ರಾಬರ್ಟ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಂಬ ಸುದ್ದಿಯೂ ಹಬ್ಬಿತ್ತು. ಆದ್ರೀಗ ಉಮಾಪತಿ ಪರೋಕ್ಷವಾಗಿ 100 ಕೋಟಿ ಮಾಡಿಲ್ಲ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಬೇರೆ ಬೇರೆ ಚಾನೆಲ್ಗಳಿಗೆ ನೀಡಿದ ಸಂದರ್ಶನದ ತುಣುಕಿನ ಸಾರಾಂಶ ಇಲ್ಲಿದೆ.
"ಸಿನಿಮಾ ನನ್ನ ಗುರಿಯಲ್ಲ"
ದರ್ಶನ್ ಹೇಳಿಕೆ ಪ್ರತಿಕ್ರಿಯೆ ಕೊಡುವಾಗ ಉಮಾಪತಿ ಶ್ರೀನಿವಾಸ್ ಗೌಡ ಸಿನಿಮಾದಿಂದ ಗೌರವ, ಕೀರ್ತಿ, ಹೆಸರು ಸಂಪಾದಿಸಿದ್ದೇನೆ. ಇದೇ ನನ್ನ ಗುರಿಯಲ್ಲ ಎಂದು ಹೇಳಿದ್ದಾರೆ. "ಸಿನಿಮಾ ಅಲ್ಲ ನನ್ನ ಗುರಿ.. ನನ್ನ ಗುರಿ ಬೇರೆನೇ ಇದೆ. ನಾನೇನು ಇದರಿಂದಲೇ ಬದುಕಬೇಕಿಲ್ಲ. ನಾನು ಕಾರು ತೆಗೆದುಕೊಂಡಿದ್ದು, ನಾನು ಹಾಕುತ್ತಿರುವ ಬಟ್ಟೆ ಸಿನಿಮಾದಿಂದ ಸಂಪಾದನೆ ಮಾಡಿದ್ದಲ್ಲ. ಸಿನಿಮಾದಿಂದ ಸಂಪಾದನೆ ಮಾಡಿದ್ದು ಗೌರವ, ಕೀರ್ತಿ, ಹೆಸರು ಅಷ್ಟೆ. " ಎಂದಿದ್ದಾರೆ.

"ಬಂದಿದ್ದು ಬರೀ ₹16 ಲಕ್ಷ"
ಉಮಾಪತಿ 'ರಾಬರ್ಟ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಪರೋಕ್ಷವಾಗಿ ಮಾತಾಡಿದ್ದಾರೆ. ನೇರವಾಗಿ ಗಳಿಕೆಯ ಗುಟ್ಟನ್ನು ಬಿಟ್ಟುಕೊಡದೇ ಇದ್ದರೂ, 100 ಕೋಟಿ ರೂಪಾಯಿ ಕಲೆಕ್ಷನ್ ಆಗಿಲ್ಲ ಎಂದಿದ್ದಾರೆ. "100 ಕೋಟಿ, 200 ಕೋಟಿ ರೂಪಾಯಿ ಅಂತಾರಲ್ಲ ಚಾಲೆಂಜ್ ಮಾಡುತ್ತೀನಿ. ಯಾವ ನೂರು ಕೋಟಿ ಮುಟ್ಟಿಸಿದ್ದಾರೆ ಹೇಳಿಬಿಡಲಿ. ನಾನು ಅವತ್ತು ಉತ್ತರ ಕೊಡುತ್ತೇನೆ. ಇದೇ ಆಂಧ್ರದಲ್ಲಿ ಇವರ ಮಾತು ಕಟ್ಕೊಂಡು ಕೋಟ್ಯಾಂತರ ರೂಪಾಯಿ ಹಾಕಿದೆ. ಬಂದಿದ್ದು 16 ಲಕ್ಷ ರೂಪಾಯಿ. ನಾನು ಯಾರಿಗೆ ಹೇಳಲಿ. ಯಾರ ಮನೆ ಹಾಳಲಾಗಿದ್ದು, ಅವರದ್ಯಾರ ಮನೆಯೂ ಹಾಳಲಾಗಲಿಲ್ಲ. ಯಾರಿಗೆ ಏನೇನು ಮಾತಾಡಿದ್ದೀನೋ ಅದನ್ನು ನಾನು ಕೊಟ್ಟಿದ್ದೀನಿ." ಎಂದು ನಿರ್ಮಾಪಕ ಉಮಾಪತಿ ಸ್ಪೀಡ್ ಪ್ಲಸ್ ಜೊತೆ ಹಂಚಿಕೊಂಡಿದ್ದಾರೆ.
'ರಾಬರ್ಟ್', 'ಉಪಾಧ್ಯಕ್ಷ' ಯಾವುದೆಷ್ಟು ಕೆಲಕ್ಷನ್?
ಉಮಾಪತಿ ಗೌಡ ಇದೇ ಸಂದರ್ಭದಲ್ಲಿ 30 ರಿಂದ 40 ಕೋಟಿ ಹಾಕಿದ ಸಿನಿಮಾ ಗಳಿಸಿದ್ದೆಷ್ಟು? ಅದೇ 'ಉಪಾಧ್ಯಕ್ಷ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತು? ಅನ್ನೋದನ್ನು ಬಿಚ್ಚಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಬರ್ಟ್ ಕಲೆಕ್ಷನ್ ಬಗ್ಗೆ ಮಾತಾಡಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. "ನಂದೂ ಉಪಾಧ್ಯಕ್ಷ ಗೆಲ್ಲಿಸಿಕೊಂಡಿದ್ದೇನೆ. ಚಿಕ್ಕಣ್ಣ ಸ್ಟಾರ್ ಆದ್ರಲ್ಲ. ನನಗೂ ಖುಷಿ ಆಗತ್ತೆ. 30- 40 ಕೋಟಿ ರೂಪಾಯಿ ಹಾಕಿ, 50 ಕೋಟಿ ರೂಪಾಯಿ ವ್ಯಾಪಾರ ಮಾಡೋದು ಹೇಗಿದೆ? 7 ಕೋಟಿ ರೂಪಾಯಿ ಹಾಕಿ 12-13 ಕೋಟಿ ಬ್ಯುಸಿನೆಸ್ ಮಾಡೋದು ಹೇಗಿದೆ? ಡಬಲ್ ಆಯ್ತಾ? ಲಾಭ ಯಾವುದರಿಂದ ಜಾಸ್ತಿ ಬಂತು? ಎಂದು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಕೂಲಿ ಮಾಡಿದವನು ನಾನೇ ಸರ್"
"ರಾಬರ್ಟ್ ಸಿನಿಮಾನೂ ಅವರದ್ದೇ ಇರಬಹುದು. ದುಡ್ಡು ಅವರದ್ದೇ ಇರಬಹುದು. ಕೂಲಿ ಮಾಡಿದವನು ನಾನೇ ಸರ್. ನನ್ನ ಶ್ರಮಕ್ಕೂ ಒಂದು ಬೆಲೆ ಸಿಗಬೇಕು ಸರ್. ನಾನು ಹೇಳುವುದು ಇಷ್ಟೇ ಚಪ್ಪಲಿಯನ್ನ ಹಾಕೊಂಡು ಮನೆವರೆಗೂ ಬಿಡ್ತೀನಿ ಅಂದ್ರೆ, ಹೌದು ಸ್ವಾಮಿ ಕಲ್ಲು ಮುಳ್ಳು ಚುಚ್ಚದೇ ಇರೋ ಹಾಗೇ ನಾನೂ ನೋಡಿಕೊಂಡಿದ್ದೇನೆ. ಕೈಯ್ಯಲ್ಲಿ ಆದಷ್ಟು ಕೆಲಸ ಮಾಡಿದ್ದಾನೆ." ಎಂದು ಉಮಾಪತಿ ಹೇಳಿದ್ದಾರೆ.


Click it and Unblock the Notifications










