ಚುನಾವಣೆ ಗೆದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ
ಸ್ಯಾಂಡಲ್ವುಡ್ನ ಜನಪ್ರಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದಾರೆ.
ಉಮಾಪತಿ ಶ್ರೀನಿವಾಸ್ ಗೌಡ ಅವರು ಒಕ್ಕಲಿಗರ ಚುನಾವಣೆಗೆ ಸ್ಪರ್ಧಿಸಿದ್ದರು. ನಿನ್ನೆಯಷ್ಟೆ ಚುನಾವಣೆ ಫಲಿತಾಂಶ ಬಂದಿದ್ದು ಭರ್ಜರಿ ಜಯಗಳಿಸಿದ್ದಾರೆ.
ವೈದ್ಯ ಆಂಜಿನಪ್ಪ ಅವರ ಸಿಂಡಿಕೇಟ್ ಮೂಲಕ ನಿರ್ದೇಶಕ ಸ್ಥಾನಕ್ಕೆ ಉಮಾಪತಿ ಶ್ರೀನಿವಾಸ್ ಗೌಡ ಸ್ಪರ್ಧೆ ಮಾಡಿದ್ದರು. ಉಮಾಪತಿ ಅವರಿಗೆ 44709 ಮತಗಳ ಲಭಿಸಿ ಗೆಲುವು ಸಾಧಿಸಿ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಐದು ವರ್ಷಗಳ ಕಾಲ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾಗಿ ಉಮಾಪತಿ ಶ್ರೀನಿವಾಸ್ ಗೌಡ ಕಾರ್ಯನಿರ್ವಹಿಸಲಿದ್ದಾರೆ.

ಮಹಾತ್ವಾಕಾಂಕ್ಷಿ ಉದ್ಯಮಿಯಾಗಿರುವ ಉಮಾಪತಿ ಶ್ರೀನಿವಾಸ್ ಗೌಡ, ಒಕ್ಕಲಿಗರ ಸಂಘ ಚುನಾವಣೆ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ಈ ಹಿಂದೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು ಉಮಾಪತಿ ಶ್ರೀನಿವಾಸ್ ಗೌಡ ಆದರೆ ಅವರಿಗೆ ಟಿಕೆಟ್ ಧಕ್ಕಿರಲಿಲ್ಲ. ಆದರೆ ಈಗ ಒಕ್ಕಲಿಗರ ಸಂಘದ ಚುನಾವಣೆ ಮೂಲಕ ಚುನಾವಣೆ ಎದುರಿಸಿ ಸುಲಭವಾಗಿ ಜಯ ಸಾಧಿಸಿದ್ದಾರೆ.
ಚುನಾವಣೆ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ್ದ ಉಮಾಪತಿ, ''ನನಗೆ ಹಾಗೂ ನಮ್ಮ ತಂಡಕ್ಕೆ ಮತ ಹಾಕಲು ಸಾಕಷ್ಟು ಕಾರಣಗಳನ್ನು ನಾವು ನೀಡಿದ್ದೇನೆ. ನಾನು ಸಹ ವೈಯಕ್ತಿಕವಾಗಿ ನನ್ನ ಹಣದಿಂದ ಏನು ಮಾಡಬಲ್ಲೆ ಎಂಬುದನ್ನಷ್ಟೆ ಆಶ್ವಾಸನೆಯಾಗಿ ನೀಡುತ್ತಿದ್ದೇನೆ. ಸಂಘದ ಹಣದಲ್ಲಿ ಏನು ಮಾಡುತ್ತೇನೆ ಎಂಬ ಭರವಸೆಯನ್ನು ನಾನು ನೀಡಿಲ್ಲ. ನಾನು ಗೆದ್ದರೆ 12 ಹೋಬಳಿಗಳಲ್ಲಿ ನನ್ನ ಸ್ವಂತ ಹಣದಲ್ಲಿ ಜನಾರ್ಧನ ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ. ಸಂಘದ ಹಣಕ್ಕೆ ನಾನೊಬ್ಬನೇ ವಾರಸುದಾರನಲ್ಲ, ಗೆದ್ದ ಮೇಲೆ ಎಲ್ಲ ಒಟ್ಟಿಗೆ ಸೇರಿ ತೀರ್ಮಾನ ಮಾಡಬೇಕಾದ ವಿಷಯವದು, ಹಾಗಾಗಿ ನಾನು ನನ್ನ ಹಣದಲ್ಲಿ ಏನು ಮಾಡಬಲ್ಲೆ ಎಂಬುದನ್ನಷ್ಟೆ ಹೇಳುತ್ತಿದ್ದೇನೆ'' ಎಂದಿದ್ದರು. ನೀಡಿದ ಭರವಸೆಗಳನ್ನು ಉಮಾಪತಿ ಈಡೇರಿಸುತ್ತಾರೆಯೇ ಕಾದು ನೋಡಬೇಕಿದೆ.
ಒಕ್ಕಲಿಗರ ಸಂಘದ ಚುನಾವಣೆ ಸಮಯದಲ್ಲಿ ಮಾಧ್ಯಮದೊಟ್ಟಿಗೆ ಮಾತನಾಡುತ್ತಾ, 'ವಿಧಾನಸೌಧದ ರಾಜಕೀಯಕ್ಕೆ ಬರುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ಉಮಾಪತಿ, ''ಖಂಡಿತವಾಗಿಯೂ ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ. ನನಗೆ ನಾನು ಬೇಲಿ ಏಕೆ ಹಾಕಿಕೊಳ್ಳಲಿ. ರಾಜಕೀಯದಲ್ಲಿ ನನಗೆ ಆಸಕ್ತಿ ಇದೆ, ನಾನು ರಾಜಕೀಯ ಮಾಡುತ್ತೇನೆ, ಸಿನಿಮಾದಲ್ಲಿ ಯಶಸ್ಸು ಸಿಕ್ಕಂತೆ ರಾಜಕೀಯದಲ್ಲಿಯೂ ಯಶಸ್ವಿಯಾಗುತ್ತೇನೆ'' ಎಂದಿದ್ದರು. ಇದೀಗ ಒಂದು ಚುನಾವಣೆ ಗೆದ್ದಿರುವ ಉಮಾಪತಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಯೋಜನೆಯಲ್ಲಿದ್ದಂತಿದೆ.
ಮಹಾತ್ವಾಕಾಂಕ್ಷೆಯುಳ್ಳ ಉದ್ಯಮಿಯಾಗಿರುವ ಉಮಾಪತಿ ಶ್ರೀನಿವಾಸ್, ಈಗಾಗಲೇ ಕೆಲವು ಗುಣಮಟ್ಟದ, ಬಿಗ್ ಬಜೆಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ, ನೀಡುವ ಪ್ರಕ್ರಿಯೆಯಲ್ಲಿದ್ದಾರೆ. ಅದರ ಜೊತೆಗೆ ಕನ್ನಡಕ್ಕೆಂದು ಹೊಸ ಫಿಲಂ ಸಿಟಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಕನಕಪುರ ರಸ್ತೆಯಲ್ಲಿ 25 ಎಕರೆ ಪ್ರದೆಶದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಯೋಜನೆಯನ್ನು ಉಮಾಪತಿ ಶ್ರೀನಿವಾಸ್ ಹೊಂದಿದ್ದು, ಇಂದು ಕುಟುಂಬದವರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬೃಹತ್, ಅದ್ದೂರಿ, ಸಕಲ ಸೌಕರ್ಯೋಪೇತ, ಆಧುನಿತ ತಂತ್ರಜ್ಞಾನದಿಂದ ಕೂಡಿದ ಫಿಲಂಸಿಟಿ ಇದಾಗಿರಲಿದ್ದು, ಫಿಲಂ ಸಿಟಿಯು ರವಿಶಂಕರ್ ಗುರೂಜಿ ಆಶ್ರಮದ ಸಮೀಪ ಉತ್ರಿ ಎಂಬಲ್ಲಿ ತಲೆ ಎತ್ತಲಿದೆ. ಈ ಸ್ಥಳ ಬೆಂಗಳೂರು ಕನಕಪುರ ರಸ್ತೆಯಲ್ಲಿದೆ.
ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ಮದಗಜ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ. 25 ಕೋಟಿ ಬಜೆಟ್ ಹಾಕಿದ್ದ ಈ ಸಿನಿಮಾ ಸುಮಾರು 50 ಕೋಟಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಹಿಂದೆ ಹೇಳಿಕೊಂಡಿದ್ದರು.


Click it and Unblock the Notifications











