'ಜಾಸ್ತಿ ಖುಷಿಯಾಗ್ಬೇಡಿ, ದರ್ಶನ್ ಮತ್ತು ನನ್ನ ಸ್ನೇಹ ಚೆನ್ನಾಗಿದೆ'
25 ಕೋಟಿ ವಂಚನೆಗೆ ಯತ್ನ ಪ್ರಕರಣದ ಬೆಳವಣಿಗೆ ಗಮನಿಸಿದರೆ ನಟ ದರ್ಶನ್ ಹಾಗೂ ಉಮಾಪತಿ ಅವರ ಸ್ನೇಹ ಇಲ್ಲಿಗೆ ಮುಗಿತಾ ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಈ ಪ್ರಕರಣದಲ್ಲಿ ನೇರವಾಗಿ ದರ್ಶನ್ ಅವರ ಪಾತ್ರ ಇಲ್ಲದಿರುವುದು ಸದ್ಯಕ್ಕೆ ಸ್ಪಷ್ಟವಾಗಿದೆ. ಆದರೆ, ಡಿ ಬಾಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಹೊಡೆಯುವ ಉದ್ದೇಶದಿಂದ ಆಪ್ತರಲ್ಲಿ ಯಾರಾದರೂ ಈ ಸ್ಕೆಚ್ ಹಾಕಿದ್ರಾ ಎನ್ನುವುದು ಅಷ್ಟೇ ಅನುಮಾನ ಉಂಟು ಮಾಡಿದೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಮೈಸೂರು ಆಪ್ತರಿಗೆ ಕ್ಲೀನ್ ಚಿಟ್ ಕೊಟ್ಟರು. ಪರೋಕ್ಷವಾಗಿ ಉಮಾಪತಿ ಕಡೆ ಬೆರಳು ತೋರಿಸಿ ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಅಂದರು. ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡಿದ ಉಮಾಪತಿ 'ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗಲಿದೆ. ಅಲ್ಲಿಯವರೆಗೂ ಕಾಯಬೇಕು' ಎಂದರು. ನಿನ್ನೆಯವರೆಗೂ ಒಟ್ಟಿಗೆ ಓಡಾಡಿಕೊಂಡಿದ್ದ ದರ್ಶನ್-ಉಮಾಪತಿ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ಮಾಡಿ ಸ್ನೇಹಕ್ಕೆ ಕ್ಲೈಮ್ಯಾಕ್ಸ್ ಬರೆದುಬಿಟ್ಟರಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ಮುಂದೆ ಓದಿ...

ಅನುಮಾನ ಇಲ್ಲ, ಆದರೆ ಸ್ಪಷ್ಟಪಡಿಸಿ
ವಂಚಕಿ ಮಹಿಳೆ ಹೇಳಿಕೆ ಹಿನ್ನೆಲೆ ಈ ಪ್ರಕರಣದಲ್ಲಿ ಉಮಾಪತಿ ಮುಖ್ಯ ಪಾತ್ರಧಾರಿಯಾಗಿದ್ದಾರೆ ಎಂದು ದರ್ಶನ್ ಹೇಳಿದರು. ಸ್ವತಃ ಮಹಿಳೆ ಡಿ ಬಾಸ್ ಬಳಿ 'ಉಮಾಪತಿ ಇದಕ್ಕೆಲ್ಲಾ ಕಾರಣ' ಎಂದಿದ್ದಾರಂತೆ. ಈ ನಿಟ್ಟಿನಲ್ಲಿ ಉಮಾಪತಿ ಅಂಗಳಕ್ಕೆ ಚೆಂಡು ಬಾರಿಸಿರುವ ನಟ ದರ್ಶನ್, 'ನನಗೆ ಉಮಾಪತಿ ಅವರ ಮೇಲೆ ಯಾವುದೇ ಅನುಮಾನ ಇಲ್ಲ, ಆದರೆ ಅವರು ಸಹ ಬಕ್ರಾ ಆದ್ರಾ ಗೊತ್ತಿಲ್ಲ. ಮಹಿಳೆ ಖುದ್ದು ಹೇಳಿರುವುದರಿಂದ ಉಮಾಪತಿ ಅವರೇ ಈ ಬಗ್ಗೆ ಸ್ಪಷ್ಟನೆ ಕೊಡಬೇಕು' ಎಂದು ಪ್ರೆಸ್ಮೀಟ್ನಲ್ಲಿ ಹೇಳಿದರು.

ಸುದ್ದಿಗೋಷ್ಠಿಗೆ ಏಕೆ ಉಮಾಪತಿ ಇರಲಿಲ್ಲ?
ನಿನ್ನೆ ರಾತ್ರಿಯವರೆಗೂ ಮೈಸೂರಿನಲ್ಲಿ ದರ್ಶನ್ ಜೊತೆಗಿದ್ದ ಉಮಾಪತಿ ಸೋಮವಾರ ಬೆಳಗ್ಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಇರಲಿಲ್ಲ. ಉಮಾಪತಿ ಏಕೆ ಇರಲಿಲ್ಲ ಎಂಬ ಅನುಮಾನ ಕಾಡಿತು. ಈ ಬಗ್ಗೆ ಉಮಾಪತಿ ಅವರಿಗೆ ಕೇಳಿದಾಗ, ನನಗೆ ಈ ಕುರಿತು ಗೊತ್ತೇ ಇರಲಿಲ್ಲ. ಪ್ರೆಸ್ಮೀಟ್ಗೂ ಅರ್ಧ ಗಂಟೆ ಮುಂಚೆ ದರ್ಶನ್ ಅವರು ಫೋನ್ ಮಾಡಿದಾಗಲೇ ಗೊತ್ತಾಗಿದ್ದು ಅಂದರು. ಅಲ್ಲಿಗೆ ಇವರಿಬ್ಬರ ಸಂಬಂಧ ಅಳಿಸಿತಾ ಎಂಬ ಪ್ರಶ್ನೆಯೂ ಕಾಡುತ್ತದೆ.

ನಾನು ದರ್ಶನ್ ಗಂಡ ಹೆಂಡತಿ ಅಲ್ಲ
''ನಾನು ಮತ್ತು ದರ್ಶನ್ ಸರ್ ಗಂಡ ಹೆಂಡತಿ ಅಲ್ಲ. ನಾನೊಬ್ಬ ನಿರ್ಮಾಪಕ, ಅವರೊಬ್ಬ ನಟ. ನನ್ನ ಜೊತೆ ದರ್ಶನ್ ಇಲ್ಲ ಅಂದ್ರು ನನ್ನ ಜೀವನ ನಡೆಯುತ್ತೆ, ದರ್ಶನ್ ಜೊತೆ ನಾನಿಲ್ಲ ಅಂದ್ರು ಅವರ ಜೀವನ ನಡೆಯುತ್ತೆ. ಆದರೆ, ನಾವಿಬ್ಬರು ಚೆನ್ನಾಗಿಯೇ ಇದ್ದೇವೆ. ಇಬ್ಬರು ದೂರ ಆದ್ರು ಜಾಸ್ತಿ ಖುಷಿಯಾಗ್ಬೇಡಿ. ನಿನ್ನೆ 10-15 ಕಾಲ್ ಇವತ್ತು 4-5 ಸಲ ಫೋನ್ ಮಾಡಿ ಮಾತಾಡಿದ್ದಾರೆ. ಫೋನ್ ಮಾಡಿದ್ರೆ ಮೊದಲು ಕೇಳು ಊಟ ಮಾಡಿದ್ರಾ, ಏನ್ ಸ್ಪೆಷಲ್ ಅಂತಾರೆ'' ಎಂದು ಉಮಾಪತಿ ಹೇಳಿದರು.
Recommended Video

ದರ್ಶನ್ ಆಪ್ತರ ಜೊತೆ ಉಮಾಪತಿ ಮನಸ್ತಾಪ?
ಈ ಪ್ರಕರಣದಲ್ಲಿ ದರ್ಶನ್ ಹಾಗೂ ಉಮಾಪತಿ ನೇರವಾಗಿ ಎಲ್ಲಿಯೂ ಭಾಗಿಯಾಗಿಲ್ಲ. ಆದರೆ, ದರ್ಶನ್ ಅವರ ಮೈಸೂರಿನ ಗೆಳೆಯರಾದ ಹರ್ಷ ಮೇಲಂಟಾ, ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ಹೆಸರು ಹೆಚ್ಚು ಕೇಳಿ ಬರುತ್ತಿದೆ. ಇವರ ಜೊತೆ ಉಮಾಪತಿಗೆ ಮನಸ್ತಾಪ ಮೂಡಿತಾ? ಇದರಿಂದ ಇದೆಲ್ಲವೂ ಆಗಿದ್ಯಾ ಎನ್ನುವ ಅನುಮಾನವನ್ನು ದೂರ ಮಾಡುವಂತಿಲ್ಲ. ಆದರೆ, ಉಮಾಪತಿ ಅವರು ಮಾತನಾಡಬೇಕಾದರೆ ಹರ್ಷಾ, ರಾಕೇಶ್ ಜೊತೆಯೂ ನಾನು ಚೆನ್ನಾಗಿದ್ದೇನೆ ಎಂದರು.


Click it and Unblock the Notifications











