ವಿಧಾನಸಭೆ ಚುನಾವಣೆಯಲ್ಲಿ ಚಿತ್ರರಂಗದವರಿಗೆ ಸಿಹಿಗಿಂತ ಕಹಿಯೇ ಹೆಚ್ಚು!
ರಾಜಕೀಯರಂಗಕ್ಕೂ ಬಿಡಿಸಲಾಗದ ನಂಟು. ಕರ್ನಾಟಕ ಕೂಡ ಇದಕ್ಕೆ ಹೊರತಲ್ಲ. ಚಿತ್ರರಂಗದಲ್ಲಿರುವವರು ರಾಜಕೀಯರಂಗಕ್ಕೆ ಬಂದು ಗೆದ್ದಿದ್ದರೆ, ರಾಜಕೀಯರಂಗದಲ್ಲಿ ಇರುವವರು ಸಿನಿಮಾ ಕ್ಷೇತ್ರಗಳಲ್ಲೂ ಗುರ್ತಿಸಿಕೊಂಡಿದ್ದಾರೆ. ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಸದ್ಯ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಅದರಲ್ಲಿ ಕೆಲವರು ಗೆದ್ದಿದ್ದರೆ ಕೆಲವರು ಸೋಲುಂಡಿದ್ದಾರೆ.
ಈ ಬಾರಿ ಸಿನಿಮಾ ತಾರೆಯರು ಪ್ರಚಾರದ ಕಣಕ್ಕೆ ಇಳಿದಿದ್ದರಿಂದ ಚುನಾವಣೆ ಮತ್ತಷ್ಟು ರಂಗೇರಿತ್ತು. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು ಸರ್ಕಾರ ರಚನೆಗೆ ಸಿದ್ಧತೆ ನಡೀತಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಗಾದಿಗೆ ಏರುವ ಸಾಧ್ಯತೆ ದಟ್ಟವಾಗಿದೆ. ಆಡಳಿತ ಪಕ್ಷ ಬಿಜೆಪಿ ಹಿನ್ನಡೆ ಅನುಭವಿಸಿದೆ. ಇನ್ನು ಅತಂತ್ರ ಸ್ಥಿತಿ ನಿರ್ಮಾಣ ಆದರೆ ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೂ ನಿರಾಸೆಯಾಗಿದೆ. ಕೆಲವೆಡೆ ಘಟಾನುಘಟಿ ನಾಯಕರೇ ಸೋಲುಂಡಿದ್ದಾರೆ. ಕೆಲವೆಡೆ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ನಟರಾದ ನಿಖಿಲ್ ಕುಮಾರಸ್ವಾಮಿ, ಸಿ. ಪಿ ಯೋಗೇಶ್ವರ್, ಬಿ. ಸಿ ಪಾಟೀಲ್, ಕುಮಾರ್ ಬಂಗಾರಪ್ಪ, ಹಾಸ್ಯ ನಟ ಟೆನ್ನಿಸ್ ಕೃಷ್ಣ, ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ, ಮುನಿರತ್ನ, ನಿರ್ದೇಶಕ ಸ್ಮೈಲ್ ಶ್ರೀನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನಿಖಿಲ್ ಕುಮಾರಸ್ವಾಮಿಗೆ ಸೋಲು
ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ರಾಮನಗರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್ನ ಇಕ್ಬಾಲ್ ಹುಸೇನ್ ಎದುರು 11 ಸಾವಿರ ಮತಗಳಿಂದ ನಿಖಿಲ್ ಪರಾಭವಗೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು ಸೋತಿದ್ದ ನಿಖಿಲ್ಗೆ ಇದು ಎರಡನೇ ದೊಡ್ಡ ಸೋಲಾಗಿದೆ. ಜೆಡಿಎಸ್ ಕ್ಷೇತ್ರವನ್ನೇ ಕಾಂಗ್ರೆಸ್ಗೆ ಬಿಟ್ಟುಕೊಟ್ಟಂತೆ ಆಗಿದೆ.

RR ನಗರದಲ್ಲಿ ಮುನಿರತ್ನ ಗೆಲುವು
ಜಿದ್ದಾಜಿದ್ದಿನಿಂದ ಕೂಡಿದ್ದ RR ನಗರದ ಕ್ಷೇತ್ರದಲ್ಲಿ ಕೊನೆಗೂ ನಿರ್ಮಾಪಕರಾದ ಮುನಿರತ್ನ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಿಮ್ಮರಾಯಪ್ಪ ಹಾಗೂ ಮುನಿರತ್ನ ನಡುವೆ ನೆಕ್ ಟು ನೆಕ್ ಫೈಟ್ ಎನ್ನುವಂತೆ ಇತ್ತು. ಒಂದು ಹಂತದಲ್ಲಿ ಕುಸುಮಾ ಅಲ್ಪ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ಅಂತಿಮವಾಗಿ ಗೆಲುವು ಮುನಿರತ್ನ ಪಾಲಾಯಿತು.
ಬೊಮ್ಮನಹಳ್ಳಿಯಲ್ಲಿ ಉಮಾಪತಿ ಸೋಲು
ಈ ಬಾರಿ ನಿರ್ಮಾಪಕ ಉಮಾಪತಿ ಬೊಮ್ಮನಹಳ್ಳಿಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಹಾಲಿ ಶಾಸಕ ಸತೀಶ್ ರೆಡ್ಡಿಗೆ ಸವಾಲ್ ಹಾಕಿದ್ದರು. ಸತೀಶ್ ರೆಡ್ಡಿ ಪರ ನಟ ದರ್ಶನ್ 2 ಬಾರಿ ಪ್ರಚಾರಕ್ಕೆ ಬಂದಿದ್ದರು. ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್- ಉಮಾಪತಿ ಈಗ ದೂರಾಗಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ವಾಕ್ ಸಮರ ನಡೆದಿತ್ತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ 25 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಉಮಾಪತಿ ಪ್ರಬಲ ಪೈಪೋಟಿ ಕೊಟ್ಟಿದ್ದು ಸುಳ್ಳಲ್ಲ.

ಬಿ. ಸಿ ಪಾಟೀಲ್ ಸೋಲು
ಹಾಲಿ ಸಚಿವರು ಆಗಿದ್ದ ಬಿ. ಸಿ ಪಾಟೀಲ್ ಹಿರೇಕೆರೂರನಲ್ಲಿ ಸೋಲುಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯು. ಬಿ ಬಣಕರ್ ಅಲ್ಲಿ ಗೆಲು ಸಾಧಿಸಿದ್ದಾರೆ. ನಟ ದರ್ಶನ್ ಕೂಡ ಬಿ. ಸಿ ಪಾಟೀಲ್ ಪರ ಪ್ರಚಾರ ನಡೆಸಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ.
ಸೊರಬದಲ್ಲಿ ಸೋಲುಂಡ ಕುಮಾರ್ ಬಂಗಾರಪ್ಪ
ಮಾಜಿ ಸಿಎಂ ಬಂಗಾರಪ್ಪ ಪತ್ರರಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ನಡುವಿನ ಜಟಾಪಟಿ ಗೊತ್ತೇಯಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದ್ದಾರೆ. ಮಧು ಬಂಗಾರಪ್ಪ 98912 ಮತಗಳನ್ನು ಪಡೆದರೆ ಕುಮಾರ್ ಬಂಗಾರಪ್ಪ 54650 ಮತಗಳನ್ನಷ್ಟೆ ಪಡೆಯಲು ಸಾಧ್ಯವಾಯಿತು.
ಸಿಪಿ ಯೋಗೇಶ್ವರ್ ಸೋಲು
ಇನ್ನು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ನಟ, ಮಾಜಿ ಸಚಿತ ಸಿ. ಪಿ ಯೋಗೇಶ್ವರ್ ಸೋಲುಂಡಿದ್ದಾರೆ. 15,974 ಮತಗಳ ಅಂತರದಲ್ಲಿ ಎಚ್ಡಿಕೆ ವಿಜಯಶಾಲಿ ಆಗಿದ್ದಾರೆ.


Click it and Unblock the Notifications











