"ಬಸವ ತತ್ವ ಅನುಸರಿಸುತ್ತಾರೆ ಅಂದಮಾತ್ರಕ್ಕೆ ಮಾಂಸಾಹಾರ ತಿನ್ನಬಾರದು ಅಂತೇನಿಲ್ಲ"- ಹಿರಿಯ ನಟಿ ಉಮಾಶ್ರೀ
ಕನ್ನಡ ಚಿತ್ರನಟ ಧನಂಜಯ್ ಮಾಂಸಾಹಾರ ಸೇವನೆ ವಿಚಾರ ವಿನಾಕಾರಣ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅವರವರ ಅಭಿರುಚಿಗೆ ತಕ್ಕಂತೆ ಆಹಾರ ಸೇವಿಸುತ್ತಾರೆ. ಜಾತಿಗೂ ತಿನ್ನುವ ಆಹಾರಕ್ಕೂ ಎತ್ತಣದಿಂದೆತ್ತಣ ಸಂಬಂಧ ಎಂದು ಸಾಕಷ್ಟು ಜನ ಧನಂಜಯ್ ಪರ ನಿಂತಿದ್ದಾರೆ. ಹಿರಿಯ ನಟಿ ಉಮಾಶ್ರೀ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಮಾಂಸಾಹಾರದ ಹೋಟೆಲ್ ಉದ್ಘಾಟನೆಗೆ ಹೋಗಿದ್ದಾಗ ನಟ ಧನಂಜಯ್ ಅಲ್ಲಿ ಮಾಂಸಾಹಾರ ಸೇವಿಸಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಲಿಂಗಾಯತ ಸಮುದಾಯದವರಾಗಿ ಧನಂಜಯ ಮಾಂಸಾಹಾರ ಸೇವಿಸ್ತಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡಿತ್ತು. ಜೇನುಕಲ್ಲು ಸಿದ್ದೇಶ್ವರನನ್ನು ಧನಂಜಯ ಪೂಜಿಸುವ, ಬಸವ ತತ್ವಗಳ ಬಗ್ಗೆ ಮಾನಾಡುವ ಧನಂಜಯ್ ಮಾಂಸಾಹಾರ ಸೇವಿಸುವುದು ಎಷ್ಟು ಸರಿ? ಎಂದು ಕೆಲವರು ಚಕಾರ ಎತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಹಿರಿಯ ನಟಿ ಉಮಾಶ್ರೀ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

"ಧನಂಜಯ್ ಜಾತಿ ವಿಚಾರಕ್ಕೆ ಅಂಟಿಕೊಂಡಿರುವವನಲ್ಲ. ಯಾರೊಟ್ಟಿಗೂ ಆತ ಆ ರೀತಿ ನಡೆದುಕೊಂಡಿದ್ದು ನಾವು ನೋಡಿಲ್ಲ. ಅದರ ವಾಸನೆ ಕೂಡ ಕಂಡಿಲ್ಲ. ಅವರು ಜಾತಿವಾದಿ ಅಂತ, ಆಹಾರಧರ್ಮದ ಬಗ್ಗೆ ವಿಶಿಷ್ಟವಾದ ಭಾವನೆ ಇಟ್ಟುಕೊಂಡಿದ್ದಾರೆ ಎಂದು ನಮಗೆ ಎಂದೂ ಅನ್ನಿಲಿಲ್ಲ. ಅವರಿಗೆ ಬೇಕಾಗಿದ್ದು ಅವ್ರು ತಿಂತಾರೆ.. ಇದು ತಿನ್ನಬೇಕು, ಅದು ತಿನ್ನಬಾರದು ಎಂದು ಹೇಳಲು ನಾವು ಯಾರು? ಅದು ಅವರ ಇಷ್ಟ, ಅವರ ಆಯ್ಕೆ" ಎಂದು ಉಮಾಶ್ರೀ ಹೇಳಿದ್ದಾರೆ.
ಬಸವ ತತ್ವಗಳ ಬಗ್ಗೆ ಮಾತನಾಡುವ ಧನಂಜಯ್ ಮಾಂಸಾಹಾರ ಸೇವಿಸಿದ್ದು ಸರೀನಾ? ಎಂದು ಕೆಲವರು ಕೇಳುತ್ತಿದ್ದಾರೆ. ಈ ಬಗ್ಗೆ ಉಮಾಶ್ರೀ ಮಾತನಾಡಿ "ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರ ಬಗ್ಗೆ ಮಾತಾಡ್ತಾರೆ, ಅವ್ರು ನಾನ್ ವೆಜ್ ತಿನ್ನಲ್ವಾ? ನಾನು ಬಸವಣ್ಣನವರ ಬಗ್ಗೆ ಮಾತನಾಡ್ತೀನಿ, ನಾನು ತಿನ್ನಲ್ವಾ? ಬಸವಣ್ಣನವರು ನೀವು ಅದು ತಿನ್ನಿ, ಇದು ತಿನ್ನಿ ಎಂದು ಹೇಳಿಲ್ಲ. ನಿಮ್ಮ ಮನಸ್ಸು, ನಾಲಿಗೆ, ಕೈ ಶುದ್ಧಿ ಆಗಿರಲಿ ಎಂದು ಹೇಳಿದ್ದಾರೆ. ಬಸವಣ್ಣನವರ ತತ್ವಗಳ ಸಾರವನ್ನು ಅಳವಡಿಸಿಕೊಳ್ಳಿ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಹಿರಿಯ ನಟಿ "ಮೂಲಭೂತವಾಗಿ ನಮ್ಮ ಪೂರ್ವಜರೆಲ್ಲಾ ಗಡ್ಡೆ ಗೆಣಸು, ಮಾಂಸ ತಿನ್ನುತ್ತಿದ್ದರು. ಈಗ ನಾವೆಲ್ಲಾ ಜಾತಿ ಧರ್ಮ ಮಾಡಿಕೊಂಡಿರುವುದು. ಮಾಂಸಾಹಾರ ತಿನ್ನುವವರು ಧನಂಜಯ್ ಅವ್ರನ್ನು ಇಷ್ಟಪಡ್ತಾರೆ ಅಂದ್ರೆ ಓಕೆ, ತಿನ್ನದವರು ಇಷ್ಟಪಡಲ್ವಾ ಅಂದ್ರೆ ಓಕೆ.. ಹೋಗೋದೇನಿದೆ" ಎಂದು ಉಮಾಶ್ರೀ ಪ್ರಶ್ನಿಸಿದ್ದಾರೆ.
'ಟಗರು ಪಲ್ಯ' ಚಿತ್ರದ ಹಾಡೊಂದಕ್ಕೆ ನಟ ಧನಂಜಯ್ ಸಾಹಿತ್ಯ ಬರೆದಿದ್ದರು. "ಚೆಂದ ಕೋಳಿ ಸಾರು.. ಅಷ್ಟೆ ಚೆಂದ ಕೀರು. ನನ್ನ ರುಚಿ ನಂದು.. ನಿನ್ನ ರುಚಿ ನಿಂದು. ಚೆಂದ ಸುಟ್ಟ ಮೀನು.. ಅಷ್ಟೆ ಚೆಂದ ಗಿಣ್ಣು.. ನನ್ನ ರುಚಿ ನಂದು ನಿನ್ನ ರುಚಿ ನಿಂದು.. ಬಾಡು ಬಾಡು ಬಾಡು ಬಾಡೇ ನಮ್ಮ ಹಾಡು.. ಬಾಡು ಬಾಡು ಬಾಡು ಬಾಡೇ ಗಾಡು.. ಹಸಿವು ದ್ಯಾವರಲ್ವ.. ಹಸಿರು ದ್ವಾವರಲ್ವ ರುಚಿಯು ದ್ವಾವರಲ್ಲವೇ?" ಎಂದು ಅವರವರ ಅಭಿರುಚಿಗೆ ತಕ್ಕಂತೆ ಆಹಾರ ಎಂದು ಧನಂಜಯ್ ಹಾಡಿನ ಮೂಲಕ ಸಾರಿ ಹೇಳಿದ್ದರು.
'ರತ್ನನ್ ಪ್ರಪಂಚ' ಚಿತ್ರದಲ್ಲಿ ತಾಯಿ ಮಗನಾಗಿ ಉಮಾಶ್ರೀ ಹಾಗೂ ಧನಂಜಯ್ ನಟಿಸಿದ್ದರು. ಕೋವಿಡ್ ಸಮಯದಲ್ಲಿ ನೇರವಾಗಿ ಈ ಸಿನಿಮಾ ಓಟಿಟಿಗೆ ಬಂದಿತ್ತು. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಲ್ಯಾಂಡ್ಲಾರ್ಡ್' ಚಿತ್ರದ ಪ್ರಮುಖ ಪಾತ್ರದಲ್ಲಿ ಉಮಾಶ್ರೀ ನಟಿಸಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್ ತಾಯಿ ಪಾತ್ರದಲ್ಲಿ ಅವರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.


Click it and Unblock the Notifications











