ಸ್ಟಾರ್ಸ್ ವಿವಾದಗಳಲ್ಲಿ ಫಿಲಂ ಚೇಂಬರ್ ಮೌನವಹಿಸಿದ್ದು ಏಕೆ?
ಚಿತ್ರರಂಗಕ್ಕೆ ಫಿಲಂ ಚೇಂಬರ್ ಮಾತೃ ಸಂಸ್ಥೆ. ಏನೇ ಸಮಸ್ಯೆಯಾದರೂ ಫಿಲಂ ಚೇಂಬರ್ನಲ್ಲಿ ಹಿರಿಯರು ಒಟ್ಟುಗೂಡಿ ಸಭೆಗಳು ಮಾಡುವುದು, ಸಂಧಾನ ನಡೆಸುವುದು, ಕಾರ್ಯಕ್ರಮಗಳನ್ನು ರೂಪಿಸುವುದು ಹೀಗೆ ಅನೇಕ ಬೆಳವಣಿಗೆಗಳು ಆಗಿರುವ ಉದಾಹರಣೆಗಳಿವೆ. ಮೀಟೂ ವಿವಾದ ಸಂದರ್ಭದಲ್ಲಿ ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಫಿಲಂ ಚೇಬರ್ಗೆ ಬಂದು ಸಂಧಾನ ಮಾಡುವ ಪ್ರಯತ್ನ ಮಾಡಿದ್ದನ್ನು ಸ್ಮರಿಸಬಹುದು.
ಆದರೆ, ಇತ್ತೀಚಿಗೆ ಭಾರಿ ಸದ್ದು ಮಾಡಿದ ದರ್ಶನ್-ಇಂದ್ರಜಿತ್ ಲಂಕೇಶ್, ಉಮಾಪತಿ ಅವರ ವಿವಾದದ ಬಗ್ಗೆ ಫಿಲಂ ಚೇಂಬರ್ ಏನು ಪ್ರತಿಕ್ರಿಯಿಸಿಲ್ಲ. ನಟ ದರ್ಶನ್ ಅವರನ್ನು 5 ವರ್ಷ ಬ್ಯಾನ್ ಮಾಡಬೇಕು ಎಂದು ಸಂಘಟನೆಯೊಂದು ಮನವಿ ಮಾಡಿದ್ದು ವರದಿಯಾಗಿದೆ. ಆ ಬಗ್ಗೆಯೂ ಯಾವುದೇ ನಿಲುವು ಕೈಗೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಫಿಲಂ ಚೇಂಬರ್ ಪ್ರಾಮುಖ್ಯತೆ ಕಳೆದುಕೊಂಡಿದ್ಯಾ? ಸ್ಟಾರ್ಗಳ ನಡುವೆ ವಿವಾದಗಳು, ಭಿನ್ನಾಭಿಪ್ರಾಯಗಳು ಆದಾಗ ಏಕೆ ಫಿಲಂ ಚೇಂಬರ್ ಮಧ್ಯ ಪ್ರವೇಶಿಸಿಲ್ಲ ಎಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸಹಜವಾಗಿ ಚರ್ಚೆಗೆ ಬರುತ್ತದೆ.
ಈ ಕುರಿತು ಫಿಲಂ ಚೇಂಬರ್ ನಿರ್ಮಾಪಕ ವಲಯದ ಉಪಾಧ್ಯಕ್ಷ ಉಮೇಶ್ ಬಣಕಾರ್, ಬಾಲರಾಜ್ ತಂತ್ರಿ ನಿರೂಪಣೆಯಲ್ಲಿ ಮೂಡಿ ಬಂದ 'ಒನ್ ಇಂಡಿಯಾ ಕನ್ನಡದ ಸಂವಾದ'ದಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ...

ಫಿಲಂ ಚೇಂಬರ್ ಮೌನವಾಗಿರುವುದು ಏಕೆ?
ಸ್ಟಾರ್ಗಳ ನಡುವೆ ವಿವಾದ, ಭಿನ್ನಾಭಿಪ್ರಾಯ ಉಂಟಾದಾಗ ವಾಣಿಜ್ಯ ಮಂಡಳಿ ಮೌನವಹಿಸುವುದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ ವಲಯದ ಉಪಾಧ್ಯಕ್ಷ ಉಮೇಶ್ ಬಣಕರ್ ''ಫಿಲಂ ಚೇಂಬರ್ ಮಾತೃ ಸಂಸ್ಥೆ ಎಂದು ಇದ್ದರೂ, ಕೆಲವು ವೈಯಕ್ತಿಕ ಸಂಘಗಳಿವೆ. ನಿರ್ಮಾಪಕ ಸಂಘ, ನಿರ್ದೇಶಕ ಸಂಘ, ಕಲಾವಿದರ ಸಂಘ ಇವೆ. ಸಣ್ಣಪುಟ್ಟ ತೊಂದರೆಗಳು ಉಂಟಾದಾಗ ಆ ಸಂಘಟನೆಗಳು ಬಗೆಹರಿಸಿಕೊಳ್ಳುತ್ತೆ'' ಎಂದರು.

ವಾಣಿಜ್ಯ ಮಂಡಳಿ ಪ್ರಾಮುಖ್ಯತೆ ಕಳೆದುಕೊಂಡಿದ್ಯಾ?
ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಾಮುಖ್ಯತೆ ಕಳೆದುಕೊಂಡಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಣಕರ್, ''ಪ್ರಾಮುಖ್ಯತೆ ಕಳೆದುಕೊಳ್ಳದವರು ಯಾರು ಇದ್ದಾರೆ ಸರ್, ಯಾರೋ ಕೆಲವು ಸ್ವಯಂ ಘೋಷಿತ ನಾಯಕರುಗಳಿಂದ ಅಂತಹ ಭಾವನೆ ಬರ್ತಿದೆ ಅಷ್ಟೇ. ಅಂತವರನ್ನು ಚೇಂಬರ್ನಿಂದ ಹೊರಗೆ ಹಾಕಲಾಗಿದೆ'' ಎಂದು ಹೇಳಿದರು.

ಜಗ್ಗೇಶ್ ಸಲಹೆ ಕೊಟ್ಟಿದ್ದರು
ದರ್ಶನ್-ಇಂದ್ರಜಿತ್ ಲಂಕೇಶ್ ಅವರ ವಿವಾದ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ನಟ ಜಗ್ಗೇಶ್ ಟ್ವೀಟ್ ಮಾಡಿ, ''ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉಧ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಪ್ರಾರ್ಥನೆ'' ಎಂದು ಮನವಿ ಮಾಡಿದ್ದಾರೆ. ಆದರೆ, ಆಯಾ ಸಂಘಗಳಿವೆ, ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಚೇಂಬರ್ ಆಡಳಿತ ಮಂಡಳಿ ಹೇಳುತ್ತಿದೆ.

ಎರಡು ವಾಣಿಜ್ಯ ಮಂಡಳಿಯ ಪಾತ್ರವೇನು?
ಕರ್ನಾಟಕ ಚಲನಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಎರಡು ವಾಣಿಜ್ಯ ಮಂಡಳಿ ಇದೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಡಬ್ಬಿಂಗ್ ವಿರೋಧಿಸಿದ ವಾಣಿಜ್ಯ ಮಂಡಳಿ ಒಂದು ಕಡೆಯಾದರೆ, ಡಬ್ಬಿಂಗ್ ಬೆಂಬಲಿಸಿದವರು ಸೇರಿ ಇನ್ನೊಂದು ವಾಣಿಜ್ಯ ಮಂಡಳಿ ಸೃಷ್ಟಿಸಿದರು. ನಿಜಕ್ಕೂ ಸ್ಯಾಂಡಲ್ವುಡ್ಗೆ ಎರಡು ಫಿಲಂ ಚೇಂಬರ್ ಅವಶ್ಯಕತೆ ಏನಿದೆ ಎನ್ನುವುದು ಈವರೆಗೂ ತಿಳಿದಿಲ್ಲ. ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಇಂತಹ ಕೆಲಸ ಆಗ್ತಿದೆ ಎಂದಷ್ಟೇ ಹೇಳಿ ಸುಮ್ಮನಾಗ್ತಾರೆ ಕೆಲವು ಹಿರಿಯ ಸಿನಿಮಾ ಉದ್ಯಮಿಗಳು.

ಕಲಾವಿದರ ಸಂಘವೂ ಮೌನ!
ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟವರು ಬಹಿರಂಗವಾಗಿ ಕಿತ್ತಾಡುತ್ತಿದ್ದರೂ ಕಲಾವಿದರ ಸಂಘ ಆಗಲಿ, ಹಿರಿಯ ಕಲಾವಿದರಾಗಲಿ ಯಾರೂ ಮಧ್ಯ ಪ್ರವೇಶಿಸುವ ನಿರ್ಧಾರ ಮಾಡಿಲ್ಲ. ಹಾಗಾದ್ರೆ, ಇದಕ್ಕಿಂತ ದೊಡ್ಡ ಗಲಾಟೆಗಳು, ವಿವಾದಗಳು ನಡೆದಾಗ ಫಿಲಂ ಚೇಂಬರ್, ಅಂಬರೀಶ್ ಮನೆಯಲ್ಲಿ ಚಿತ್ರರಂಗವೇ ಸೇರಿದ್ದ ಉದಾಹರಣೆಗಳು ಇವೆ ಅಲ್ಲವೇ?


Click it and Unblock the Notifications











