ಕಾಂಗ್ರೆಸ್ ಪರ ನಟರು 'ಮೇಕೆದಾಟು' ಮೀಟಿಂಗ್ ಹೈಜಾಕ್ ಮಾಡಿದರು: ಉಮೇಶ್ ಬಣಕಾರ್
ಮೇಕೆದಾಟು ಪಾದಯಾತ್ರೆ ಪ್ರಸ್ತುತ ರಾಜ್ಯದಾದ್ಯಂತ ಚರ್ಚೆಯಾಗುತ್ತಿರುವ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಕನ್ನಡ ಚಿತ್ರರಂಗವೂ ಸಹ ಈ ಪಾದಯಾತ್ರೆಗೆ ಬೆಂಬಲ ಸೂಚಿಸಿವೆ.
ಆದರೆ ಕನ್ನಡ ಚಿತ್ರರಂಗವು ಪಾದಯಾತ್ರೆಗೆ ಬೆಂಬಲ ಸೂಚಿಸಿರುವುದು ಹಲವರ ಟೀಕೆಗೆ ಕಾರಣವಾಗಿದೆ. ಚಿತ್ರರಂಗದಲ್ಲಿರುವವರೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮೊದಲಿಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿ ಮೇಕೆದಾಟು ಪಾದಯಾತ್ರೆಗೆ ಬೆಂಬಲ ಕೇಳಿದ ಬಳಿಕ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದು ಚಲನಚಿತ್ರ ರಂಗವು ಪಾದಯಾತ್ರೆಗೆ ಬೆಂಬಲ ನೀಡುವುದಾಗಿ ಪ್ರಕಟಿಸಲಾಯಿತು. ಆದರೆ ಯಾವ ನಟ ಅಥವಾ ನಟಿಯರ ಮೇಲೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲೇ ಬೇಕು ಎಂಬ ಒತ್ತಡ ಇರುವುದಿಲ್ಲ ಎಂದು ನಿರ್ಣಯವಾಯ್ತು. ಆದರೆ ಬಿಜೆಪಿ ಪರ ಗುರುತಿಸಿಕೊಂಡಿರುವ ಕೆಲವು ನಟ-ನಟಿಯರು ವಾಣಿಜ್ಯ ಮಂಡಳಿಯ ಈ ನಿರ್ಣಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿರುವ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ''ಡಿ.ಕೆ.ಶಿವಕುಮಾರ್ ಅವರು ನಮ್ಮ ಬೆಂಬಲ ಕೇಳಿಕೊಂಡು ಬಂದಾಗ ಅವರನ್ನು ಸ್ವಾಗತಿಸಬೇಕಾದುದು ನಮ್ಮ ಕರ್ತವ್ಯವಾಗಿತ್ತು. ನಾವು ಸಹ ಸ್ವಾಗತ ಮಾಡಿದೆವು. ಆದರೆ ಅದಾದ ಬಳಿಕ ನಡೆದ ಸಭೆಯಲ್ಲಿ ಕಾಂಗ್ರೆಸ್ ಪರ ಗುರುತಿಸಿಕೊಂಡ ಕಲಾವಿದರು ಏಕಪಕ್ಷೀಯವಾಗಿ ನಿಲುವು ತೆಗೆದುಕೊಂಡಿದ್ದಾರೆ'' ಎಂದಿದ್ದಾರೆ.
''ನಾವು ಪಾದಯಾತ್ರೆಗೆ ಬೆಂಬಲ ನೀಡುವ ಮೂಲಕ ಸರ್ಕಾರದ ವಿರುದ್ಧ ನಿಲವು ತೆಗೆದುಕೊಂಡಿದ್ದೇವೆ ಎಂಬ ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿಯು ಸರ್ಕಾರದ ವಿರುದ್ಧ ಖಂಡಿತ ಇಲ್ಲ. ನಾವು ಸರ್ಕಾರದ ಜೊತೆಗೆ ಸಾಗುತ್ತಿದ್ದೇವೆ'' ಎಂದಿದ್ದಾರೆ ಉಮೇಶ್ ಬಣಕಾರ್.
''ಸರ್ಕಾರವು ನಮಗೆ ಸಾಕಷ್ಟು ಸಹಾಯವನ್ನು ಮಾಡಿದೆ. ಕೊರೊನಾ ಬಳಿಕ ಚಿತ್ರಮಂದಿರಗಳ ಮೇಲಿನ ಕೆಲವು ತೆರಿಗೆಗಳನ್ನು ನಮ್ಮ ಮನವಿಯಿಂದಾಗಿ ಸರ್ಕಾರವು ತೆಗೆದು ಹಾಕಿದೆ. ಸುಮಾರು ಕೋಟ್ಯಂತರ ಹಣವನ್ನು ಸರ್ಕಾರ ಇದರಿಂದ ನಷ್ಟ ಮಾಡಿಕೊಂಡಿದೆ'' ಎಂದು ಉಮೇಶ್ ಹೇಳಿದರು.
ಇದೀಗ ಹೇರಲಾಗಿರುವ ವೀಕೆಂಡ್ ಕರ್ಫ್ಯೂ ಬಗ್ಗೆ ಮಾತನಾಡಿರುವ ಉಮೇಶ್ ಬಣಕಾರ್, ''ವೀಕೆಂಡ್ ಕರ್ಫ್ಯೂ ಇಂದ ಕನ್ನಡ ಸಿನಿಮಾಗಳಿಗೆ ದೊಡ್ಡ ನಷ್ಟ ಉಂಟಾಗುತ್ತಿದೆ. ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಂಡು ಕಲೆಕ್ಷನ್ ಮಾಡುವುದೇ ಶನಿವಾರ, ಭಾನುವಾರ ಆ ದಿನವೇ ಚಿತ್ರಮಂದಿರಗಳನ್ನು ಲಾಕ್ ಮಾಡಿಬಿಟ್ಟರೆ ನಿರ್ಮಾಪಕ ದೊಡ್ಡ ನಷ್ಟ ಅನುಭವಿಸುತ್ತಾನೆ. ನಾವು ಸಿಎಂ ಅವರನ್ನು ಭೇಟಿಯಾಗಿ ವೀಕೆಂಡ್ ದಿನಗಳಲ್ಲಿ 50-50 ಗಾದರೂ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ'' ಎಂದು ಉಮೇಶ್ ಮಾಹಿತಿ ನೀಡಿದರು.
ಮೇಕೆದಾಟು ಪಾದಯಾತ್ರೆಗೆ ಚಿತ್ರರಂಗದ ಹಲವು ಗಣ್ಯರು ಬೆಂಬಲ ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ನಟ ದುನಿಯಾ ವಿಜಯ್, ಸಾಧುಕೋಕಿಲ, ನಟಿ, ರಾಜಕಾರಣಿ ಉಮಾಶ್ರೀ, ಸಾ.ರಾ.ಗೋವಿಂದು, ಜಯಮಾಲಾ ಇನ್ನೂ ಹಲವರು ಭಾಗವಹಿಸಿದ್ದರು. ನಟ ಶಿವರಾಜ್ ಕುಮಾರ್ ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕೊರೊನಾ ಹಾಗೂ ಇತರೆ ಕಾರಣಗಳಿಂದಾಗಿ ಶಿವರಾಜ್ ಕುಮಾರ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ.
ಮೇಕೆದಾಟು ಪಾದಯಾತ್ರೆಗೆ ಬೆಂಬಲ ಸೂಚಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನಿರ್ದೇಶಕಿ ರೂಪಾ ಅಯ್ಯರ್ ''ಮೇಕೆದಾಟು ಪಾದಯಾತ್ರೆಗೆ ಫಿಲ್ಮ್ ಚೇಂಬರ್ ಹೆಸರು ದುರ್ಬಳಕೆ ಆಗಿದೆ. ಚಿತ್ರರಂಗದ ವಾಣಿಜ್ಯ ಮಂಡಳಿ ರಾಜಕೀಯಕ್ಕೆ ಕಾಲಿಡಬಾರದು. ಒಂದು ಪಕ್ಷವನ್ನು ಓಲೈಸಲು ಒಂದು ಪಕ್ಷ ಮಾಡಿದಂತಹ ಪತ್ರಿಕಾಗೋಷ್ಠಿ, ಅಧಿಕೃತವಾದ ಘೋಷಣೆ, ಅವರಿಗೆ ಮೈಕ್ ಕೊಟ್ಟು, ಜಾಗಕೊಟ್ಟು ಮಾಡಿದ್ದು ತಪ್ಪು ಅಂತ ನಾನು ಖಂಡಿಸುತ್ತೇನೆ. ವಾಣಿಜ್ಯ ಮಂಡಳಿಯ ಅನೇಕ ಸದಸ್ಯರು ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಫಿಲ್ಮ್ ಚೇಂಬರ್ ಯಾವುದೇ ಪದಾಧಿಕಾರಗಳಿಗೂ ಇಷ್ಟ ಆಗಿಲ್ಲ. ಒಳಗಡೆ ಇರುವ ಯಾರಿಗೋ ಟಿಕೆಟ್ ಸಿಗಬೇಕು ಅನ್ನುವ ಕಾರಣಕ್ಕಾಗಿ, ಇನ್ನೊಂದು ವೈಯುಕ್ತಿಕ ನಿಲುವನ್ನು ಇಟ್ಟುಕೊಂಡು ವಾಣಿಜ್ಯ ಮಂಡಳಿಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ನಾನೇ ಯಾವುದೋ ಇನ್ನೊಂದು ಪಕ್ಷವನ್ನು ಇಷ್ಟ ಪಡುತ್ತೇನೆ ಎಂದ ಕಾರಣಕ್ಕೆ ನಾನು ಫಿಲ್ಮ್ ಚೇಂಬರ್ ವೇದಿಕೆಯನ್ನು ದುರುಪಯೋಗ ಮಾಡಿಕೊಂಡಿಲ್ಲ" ಎಂದಿದ್ದಾರೆ.


Click it and Unblock the Notifications











