'ಕಾಂತಾರ' ಸಿನಿಮಾ ನೋಡಿದೆ ಎಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ!
ಕೇಂದ್ರ ಗೃಹ ಮಂತ್ರಿ ಹಾಗೂ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪುತ್ತೂರಿಗೆ ಆಗಮಿಸಿದ್ದು, ಹಲವು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿದ್ದಾರೆ. ಇದರ ನಡುವೆ ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ 'ಕಾಂತಾರ' ಸಿನಿಮಾವನ್ನು ಸಹ ನೆನಪು ಮಾಡಿಕೊಂಡಿದ್ದಾರೆ.
ಪುತ್ತೂರಿನಲ್ಲಿ ಆಯೋಜಿಸಿದ್ದ ಕಾಪ್ಕೊಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ತುಳುನಾಡಿನ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ 'ಕಾಂತಾರ' ಸಿನಿಮಾ ನೋಡಿರುವುದಾಗಿ ಹೇಳಿದರು.
ಭಾಷಣದ ಆರಂಭದಲ್ಲಿ ಮಂಗಳೂರು, ಪುತ್ತೂರು, ಕರಾವಳಿ, ದಕ್ಷಿಣ ಕನ್ನಡ ಜಿಲ್ಲೆಗಳ ಸೊಬಗಿನ ಮತ್ತೆ ಉಲ್ಲೇಖಿಸಿದ ಅಮಿತ್ ಶಾ, ''ಪುತ್ತೂರು ಪವಿತ್ರ ಭೂಮಿ, ಇದು ಪರಶುರಾಮನ ಸೃಷ್ಟಿ ಎಂಬ ಪ್ರತೀತಿಯೂ ಇದೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹಲವು ಸಂಸ್ಕೃತಿಗಳು ಬೆಸೆದುಕೊಂಡಿವೆ'' ಎಂದ ಅಮಿತ್ ಶಾ, ''ನಾನು ಇತ್ತೀಚೆಗಷ್ಟೆ 'ಕಾಂತಾರ' ಸಿನಿಮಾ ನೋಡಿದೆ. ಆ ಸಿನಿಮಾ ನೋಡಿದ ಬಳಿಕ ನನಗೆ ಇಲ್ಲಿನ ಸಂಸ್ಕೃತಿಯ ಇನ್ನಷ್ಟು ಪರಿಚಯ ಆಯಿತು'' ಎಂದಿದ್ದಾರೆ.
ಈ ನೆಲವು ಎಷ್ಟು ಸಂಪದ್ಭರಿತವಾಗಿದೆ, ಇಲ್ಲಿನ ಧಾರ್ಮಿಕ ಸಂಸ್ಕೃತಿ ಎಷ್ಟು ಮಹತ್ತರವಾದುದು ಎಂಬುದು ಅರಿವಾಯಿತು. ಮಂಗಳೂರಿನ ಪುಣ್ಯಭೂಮಿಗೆ ನಾನು ಪ್ರಣಾಮ ಮಾಡುತ್ತೇನೆ. ಮಂಗಳಾದೇವಿ, ಕದ್ರಿ ದೇವಾಲಯ ಅವುಗಳ ಜೊತೆಗೆ ರಾಣಿ ಅಬ್ಬಕ್ಕನನ್ನೂ ಸಹ ನಾನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ'' ಎಂದಿದ್ದಾರೆ ಅಮಿತ್ ಶಾ.

'ಕಾಂತಾರ' ಸಿನಿಮಾ ಸಿನಿಮಾ ಮಂದಿಯನ್ನು, ಸಿನಿಮಾ ಪ್ರೇಕ್ಷಕರನ್ನು ಮಾತ್ರವೇ ಅಲ್ಲದೆ ರಾಜಕಾರಣಿಗಳನ್ನೂ ಸೆಳೆದಿದೆ, ರಾಜ್ಯದ ಹಲವು ರಾಜಕಾರಣಿಗಳು 'ಕಾಂತಾರ' ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಬಹಳ ಬ್ಯುಸಿಯಾಗಿರುವ ರಾಷ್ಟ್ರಮಟ್ಟದ ನಾಯಕರು ವೀಕ್ಷಿಸಿರುವುದು ಚಿತ್ರತಂಡಕ್ಕೆ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳಿಗೆ ಹೆಮ್ಮೆಯ ಸಂಗತಿ.
'ಕಾಂತಾರ' ಸಿನಿಮಾವನ್ನು ಈಗಾಗಲೇ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೀಕ್ಷಿಸಿದ್ದಾರೆ. ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಅವರು 'ಕಾಂತಾರ' ನೋಡಿದ್ದರು. ಅವರು ಮಾತ್ರವೇ ಅಲ್ಲದೆ ಹಲವು ಸಂಸದರು, ರಾಜ್ಯ, ಕೇಂದ್ರ ಸಚಿವರುಗಳು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











