ಪುನೀತ್ ನಿಧನದ ಬೆನ್ನಲ್ಲೆ ಅಭಿಮಾನಿಗಳ ಮಹಾ ಅಭಿಯಾನ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ಪುನೀತ್ ಆದರ್ಶವನ್ನು ಇಟ್ಟುಕೊಂಡು ಏನೆಲ್ಲಾ ಮಾಡಬಹುದು ಅದನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಜೊತೆಗೆ ರಸ್ತೆಗಳಿಗೆ ಪುನೀತ್ ಹೆಸರು, ಪುನೀತ್ ಪ್ರತಿಮೆ ನಿರ್ಮಾಣ, ಹೀಗೆ ಪುನೀತ್ ಅವರ ಸ್ಮರಣಾರ್ಥವಾಗಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಇತ್ತ ಕನ್ನಡ ಚಿತ್ರರಂಗವೂ ಕೂಡ ಪುನೀತ್ ನಿಧನ ಬಳಿಕ ಎಚ್ಚೆತ್ತುಕೊಳ್ಳುತ್ತಿದೆ. ಎಲ್ಲಾ ಕಲಾವಿದರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.
ಹೌದು ಪುನೀತ್ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶಾಕ್ಗೆ ಹೋಗಿತ್ತು. ಇನ್ನು ಅದೆಷ್ಟೋ ಮಂದಿ ಪುನೀತ್ ಸಾವಿನಿಂದ ಹೊರಬಂದಿಲ್ಲ. ಇದರ ನಡುವೆಯೇ ಸ್ಯಾಂಡಲ್ವುಡ್ ಕಲಾವಿದರು ಒಗ್ಗಟ್ಟಾಗಿ ಕನ್ನಡ ಚಿತ್ರರಂಗವನ್ನು ಮುನ್ನಡೆಸಲು ತೀರ್ಮಾನಿಸಿದ್ದಾರೆ. ಹೌದು ಪುನೀತ್ ನಿಧನದ ಬಳಿಕ ಫ್ಯಾನ್ಸ್ ಕ್ಲಬ್ಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಯುನೈಟೆಡ್ ಕೆಎಫ್ಐ ಕನ್ನಡ ಚಿತ್ರರಂಗ ಮಾಡಿರುವ ಸ್ಟಾರ್ ನಟರ ಕೊಲೆಜ್ ಚಿತ್ರ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಹಾಗೇ ನಟ ಸುದೀಪ್ ಫ್ಯಾನ್ಸ್ ಪೇಜ್ನ ಅಡ್ಮಿನ್ ಟ್ವಿಟ್ಟರ್ನಲ್ಲಿ ಬಹಿರಂಗ ಪತ್ರವನ್ನು ಕೂಡ ಬರೆದು ಇನ್ನು ಸ್ಟಾರ್ ವಾರ್ಗೆ ಅಂತ್ಯ ಹಾಡಬೇಕು ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಕನ್ನಡ ಚಿತ್ರರಂಗ ಈಗಾಗಲೇ ಊಹಿಸಲಾಗದಷ್ಟು ನಷ್ಟಕ್ಕೆ ಈಡಾಗಿದೆ. ಇದು ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಹೀಗಾಗಿ ಇನ್ನು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಸ್ಟಾರ್ ವಾರ್ಗೆ ಯಾವುದೇ ಅರ್ಥ ಇಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಚಿತ್ರರಂಗದ ಬೆಳವಣಿಗೆಗೆ ಒಂದಾಗಿ ಪ್ರೋತ್ಸಾಹಿಸಲು ಯುನೈಟೆಡ್ ಕೆಎಫ್ಐ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ಪ್ರಾರಂಭಿಕ ಬೆಂಬಲ ಎಂಬಂತೆ ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ಅಭಿಯಾನಕ್ಕೆ ಜಗ್ಗೇಶ್ ಪ್ರತಿಕ್ರಿಯೆ ಏನು?
ಈ ಭಾವ ನನ್ನ ಕಣ್ಣಲ್ಲಿ ಆನಂದ ಭಾಷ್ಪ ತರಿಸಿತು! ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ! ಕನ್ನಡಿಗರು ನಮ್ಮ ಬಂಧುಗಳು! ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು! ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು! ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ love all.
ಹೀಗೆಂದು ಬರೆದುಕೊಂಡಿರೋ ಜಗ್ಗೇಶ್ #UnitedKFI ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಇನ್ನು ನಟ ಜಗ್ಗೇಶ್ ಮಾತ್ರವಲ್ಲದೇ ನಟಿ ಅದಿತಿ ಪ್ರಭುದೇವ ಕೂಡ ಇದಕ್ಕೆ ಪ್ರತಿಕ್ರಿಯಿಸಿ ಉತ್ತಮ ಬೆಳವಣಿಗೆಗೆ ನಾವೆಲ್ಲರೂ ಬೆಂಬಲಿಸೋಣ ಎಂದಿದ್ದಾರೆ. ಇವರ ಜೊತೆಗೆ ಪುನೀತ್ ಅಭಿಮಾನಿಗಳ ಬಳಗ, ನಟ ಯಶ್ ಫ್ಯಾನ್ಸ್ ಕ್ಲಬ್, ಕಿಚ್ಚ ಸುದೀಪ್ ಫ್ಯಾನ್ಸ್ ಕ್ಲಬ್ , ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗ , ದರ್ಶನ್ ಅಭಿಮಾನಿಗಳ ಬಳಗ, ಶ್ರೀ ಮುರುಳಿ ಫ್ಯಾನ್ಸ್, ಹೀಗೆ ಎಲ್ಲಾ ಫ್ಯಾನ್ಸ್ ಕ್ಲಬ್ಗಳು ಕೂಡ ಈ ಒಳ್ಳೆ ಅಭಿಯಾನಕ್ಕೆ ಕೈ ಜೋಡಿಸಿದೆ.
ಹೀಗೆ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಭಾವಚಿತ್ರವನ್ನು ಬಳಸಿ ಫ್ಯಾನ್ಸ್ ಕ್ಲಬ್ಗಳು ಚಿತ್ರರಂಗದ ಒಗ್ಗಟ್ಟಿಗೆ ಮುಂದಾಗಿದೆ. ಇನ್ನಾದರು ಸ್ಟಾರ್ವಾರ್ಗಳನ್ನು ಬಿಟ್ಟು ನಾವೆಲ್ಲರೂ ಒಂದೇ, ಎಲ್ಲರೂ ಸೇರಿ ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎಂಬ ಅಭಿಯಾನ ಹೆಚ್ಚೆಚ್ಚು ವೈರಲ್ ಅಗುತ್ತಿದ್ದು, ಸಾಕಷ್ಟು ಕಲಾವಿದರು ಕೂಡ ಈಗ ಇದಕ್ಕೆ ಬೆಂಬಲಿಸುತ್ತಿದ್ದಾರೆ. ನಟ ಪುನೀತ್ರನ್ನ ಕಳೆದುಕೊಂಡು ಇಡೀ ಚಿತ್ರರಂಗವೇ ದುಃಖದಲ್ಲಿದೆ. ಇದರ ಬೆನ್ನಲ್ಲೆ ನಮ್ಮ ಸ್ಟಾರ್ ನಂ1 ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸ್ಟಾರ್ನ ಅಭಿಮಾನಿಗಳನ್ನು ಕಾಲೆಳೆಯುತ್ತಿದ್ದ ಫ್ಯಾನ್ಸ್ಗಳೆಲ್ಲಾ ಈಗ ಒಂದಾಗುವ ಮನಸ್ಸು ಮಾಡಿದ್ದಾರೆ. ಜೊತೆಗೆ ಸ್ಟಾರ್ ನಟರನ್ನು ಒಂದು ಗೂಡಿಸುತ್ತಿದ್ದಾರೆ.


Click it and Unblock the Notifications










