ದುನಿಯಾ ವಿಜಯ್ ಹುಚ್ಚು ಮನಸ್ಸಿನ ಹಲವು ಮುಖಗಳು
ದುನಿಯಾ ಚಿತ್ರದವರೆಗೂ ವಿಜಯ್ ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲೋ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ನಟ ರಾತ್ರಿ ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಿದ್ದರು. ಇಂದು ದುನಿಯಾ ವಿಜಯ್ ಸ್ಯಾಂಡಲ್ ವುಡ್ ನ ಬಲು ಬೇಡಿಕೆಯುಳ್ಳ ಸ್ಟಾರ್ ಗಳಲ್ಲಿ ಒಬ್ಬರು.
ಅವರ ಬಣ್ಣ, ಕಟುಮಸ್ತಾದ ದೇಹ, ಮುಖಚಹರೆ ನೋಡಿದರೆ ಯಾವ ಕೋನದಿಂದಲೂ ಹೀರೋ ಅಲ್ಲ ಎಂದು ಭಾವಿಸುವವರೇ ಅಧಿಕ. ಆದರೆ ಇದೇ ಬಣ್ಣ, ಆಕಾರ, ದೇಹ ಈಗ ವಿಜಯ್ ಅವರ ಟ್ರಂಪ್ ಕಾರ್ಡ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಕರಿಯ, ಕರಿಚಿರತೆ ಎಂದು ಗುರುತಿಕೊಂಡ ಏಕೈಕ ನಟ ಎನ್ನಬಹುದು. [ದುನಿಯಾ ವಿಜಿ ದಾಂಪತ್ಯ ಕಲಹಕ್ಕೆ ಮಾಳವಿಕಾ ಪರಿಹಾರ]
ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಕರಿಚಿರತೆ, ಕರಿಯ, ಬ್ಲ್ಯಾಕ್ ಕೋಬ್ರಾ ಎಂದು ಕರೆಯುತ್ತಿರುವುದೇ ಇದಕ್ಕೆ ಸಾಕ್ಷಿ. ದುನಿಯಾ ವಿಜಯ್ ಇಂದು (ಜನವರಿ 20) 41ನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ. ಈ ಹಿನ್ನೆಯಲ್ಲಿ ಅವರ ಬಗ್ಗೆ ತೀರಾ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ನೋಡುವುದಾದರೆ...

ಹೆಚ್ಚಾಗಿ ಬಡತನದ ರೇಖೆಗಳನ್ನು ಕಂಡವರು
ವಿಜಯ್ ಹುಟ್ಟಿದ್ದು ಜನವರಿ 20, 1974ರಲ್ಲಿ. ಇವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿಜಿ ಅದೃಷ್ಟ ರೇಖೆಗಿಂತಲೂ ಹೆಚ್ಚಾಗಿ ಬಡತನದ ರೇಖೆಗಳನ್ನು ಕಂಡವರು. ಶಾಲಾ ದಿನಗಳಲ್ಲಿ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರದಿದ್ದರೂ ಕ್ರೀಡೆಗಳ ಬಗ್ಗೆ ಮಾತ್ರ ಒಲವು ಹೆಚ್ಚಾಗಿಯೇ ಇತ್ತು.

ಜಿಮ್ ತರಬೇತುದಾರನಾಗಿ ಕೆಲಸ
ಓದಿಗೆ ಗುಡ್ ಬೈ ಹೇಳಿದ ವಿಜಿ ಸ್ಟಂಟ್ ಮ್ಯಾನ್ ಹಾಗೂ ಜಿಮ್ ತರಬೇತುದಾರನಾಗಿ ಕುಟುಂಬಕ್ಕೆ ಆಧಾರವಾಗಿದ್ದರು. ಚಿತ್ರೋದ್ಯಮದ ಕೆಲವರೊಂದಿಗೆ ನಂಟೂ ಬೆಳೆಯಿತು. ಬೆಳ್ಳಿತೆರೆಗೆ ಅಡಿಯಿಡಲು ಇದೇ ದಾರಿಯಾಯಿತು.

ಯಾವುದೇ ಗಾಡ್ ಫಾದರ್ ಹಂಗಿಲ್ಲ
ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಹಂಗಿಲ್ಲದೆ ಹಂತಹಂತವಾಗಿ ಮೇರಿದ ನಟ. ಕೇವಲ ಕೆಲವು ಸೆಕೆಂಡ್ ಗಳಲ್ಲಿ ಮಾತ್ರ ಪರದೆ ಮೇಲೆ ಕಾಣುವಂತಹ ಪಾತ್ರಗಳಲ್ಲಿ ವಿಜಿ ಕಾಣಿಸಿಕೊಳ್ಳುತ್ತಿದ್ದರು.

ಅವಕಾಶ ಅರಸಿ ಹೋಗಿದ್ದು ಸೂರಿ, ಭಟ್ಟರ ಬಳಿಗೆ
ಮೊದಲು ಅವಕಾಶ ಕೇಳಿದ್ದೇ ಸೂರಿ ಹಾಗೂ ಯೋಗರಾಜ್ ಭಟ್ ಬಳಿ. ಆಗ ಅವರು ಮೊದಲು ನಿನ್ನ ನಟನಾ ಕೌಶಲ್ಯವನ್ನು ಸುಧಾರಿಸಿಕೋ ಆಮೇಲೆ ನೋಡೋಣ ಎಂದಿದ್ದರು. ಆ ಬಳಿಕ ರಂಗ ಎಸ್ಎಸ್ಎಲ್ ಸಿ, ಜೋಗಿ ಚಿತ್ರಗಳಲ್ಲಿ ಅಭಿನಯಿಸಿದರು.

ಸ್ಯಾಂಡಲ್ ವುಡ್ ರಜನಿಕಾಂತನಾದ ವಿಜಿ
ಅದಾದ ಮೇಲೆ 2007ರಲ್ಲಿ ವಿಜಯ್ ಗೆ ಶುಕ್ರದೆಸೆ ಆರಂಭವಾಯಿತು. ಆಗ ತೆರೆಕಂಡ ದುನಿಯಾ ಚಿತ್ರ ಅವರ ಬದುಕನ್ನೇ ಬದಲಾಯಿಸಿತು. ಈ ಚಿತ್ರವನ್ನು ಎರಡು ಸಲ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ಸಹ ವಿಜಯ್ ಬೆನ್ನುತಟ್ಟಿದ್ದರು. ಅಲ್ಲಿಂದ ವಿಜಯ್ ಅವರನ್ನು ಎಲ್ಲರೂ ಸ್ಯಾಂಡಲ್ ವುಡ್ ರಜನಿಕಾಂತ್ ಎಂದು ಕರೆಯಲು ಪ್ರಾರಂಭಿಸಿದರು. ಆಮೇಲೆ 'ರಜನಿಕಾಂತ್' ಚಿತ್ರ ಬಂದದ್ದು ಬೇರೆ ವಿಚಾರ.

ನಿರ್ದೇಶಕರಿಗೆ ಚಿರಋಣಿ ಎನ್ನುವ ವಿಜಿ
"ಇಂದು ನಾನು ಈ ಮಟ್ಟದಲ್ಲಿದ್ದೀನಿ ಎಂದರೆ ಅದಕ್ಕೆ ಕಾರಣ ನಿರ್ದೇಶಕರು. ಅವರ ಬುದ್ಧಿವಂತಿಕೆ ಹಾಗೂ ಶ್ರಮದಿಂದ ನನಗೆ ಒಳ್ಳೊಳ್ಳೆ ಪಾತ್ರಗಳನ್ನು ನೀಡಿ ಸ್ಟಾರ್ ಮಾಡಿದ್ದಾರೆ. ನಾನು ಎಂದಿಗೂ ನಿರ್ದೇಶಕರ ಕೆಲಸದಲ್ಲಿ ಮೂಗುತೂರಿಸಿದವನಲ್ಲ. ನಿರ್ದೇಶಕರಿಗೆ ನಾನು ಚಪ್ಪಲಿ ಇದ್ದಂತೆ. ಅವರು ನನ್ನನ್ನು ಹೇಗೆ ಬೇಕಿದ್ದರೂ ಬಳಸಿಕೊಳ್ಳಬಹುದು" ಎಂದು ಹೇಳುವಷ್ಟು ಮುಗ್ಧ ನಟ ವಿಜಯ್.

ಮಾನವೀಯತೆ ಮೆರೆಯುವ ದುನಿಯಾ ವಿಜಿ
ದುನಿಯಾ ವಿಜಯ್ ನೋಡಲು ಕಟು ಮನಸ್ಸಿನಂತೆ ಕಂಡರೂ ಸ್ನೇಹಕ್ಕೆ, ಪ್ರೀತಿಗೆ ಕರ್ಪೂರದಂತೆ ಕರಗಿಹೋಗುವ ಮನಸ್ಸು. ಯಾರೇ ಕಷ್ಟದಲ್ಲಿದ್ದಾರೆಂದರೆ ಮಾನವೀಯತೆ ಮೆರೆಯುತ್ತಾರೆ. ಇದುವರೆಗೂ ಲೆಕ್ಕವಿಲ್ಲದಷ್ಟು ಮಂದಿಗೆ ಅವರು ಆರ್ಥಿಕವಾಗಿ, ಮಾನಸಿಕವಾಗಿ ಸಹಾಯ ಮಾಡಿದ್ದಾರೆ.


Click it and Unblock the Notifications











