'ಅಪ್ಪು ಪಪ್ಪು' ಸ್ನೇಹಿತ್ ವಿವಾದ: ಸ್ನೇಹಿತ್ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸಿದ ಉಪೇಂದ್ರ ಮತ್ತು ಪ್ರೇಮ್
ಅಪ್ಪು ಪಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ನೇಹಿತ್ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸ್ನೇಹಿತ್ ನಂತರ ಯಾವುದೇ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿರುವ ಸ್ನೇಹಿತ್ ಸದ್ಯ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ವಿವಾದಗಳಲ್ಲಿ ಸ್ನೇಹಿತ್ ಹೆಸರು ಕೇಳಿಬಂದಿದೆ.
ಈ ಹಿಂದೆ ನೆರೆ ಮನೆಯ ನಿವಾಸಿಗಳ ಜತೆ ಸ್ನೇಹಿತ್ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪ ಕೇಳಿಬಂದಿತ್ತು ಮತ್ತು ಇದು ತುಸು ದೊಡ್ಡ ಸುದ್ದಿಯಾಗಿತ್ತು. ಆದರೆ ಕೆಲ ದಿನಗಳ ನಂತರ ಆರೋಪ ಮಾಡಿದ್ದವರೇ ಸ್ನೇಹಿತ್ ಅವರಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಅಚ್ಚರಿ ಮೂಡಿಸಿದ್ದರು.
ಇದೀಗ ಮತ್ತೆ ಅಂಥದ್ದೇ ರೀತಿಯ ವಿವಾದದಲ್ಲಿ ಸ್ನೇಹಿತ್ ಹೆಸರು ತಳುಕು ಹಾಕಿಕೊಂಡಿದ್ದು, ಸ್ನೇಹಿತ್ ಅವರ ಮನೆಯ ಎದುರಿಗಿನ ಮಹಿಳೆ ಹಾಗೂ ಆಕೆಯ ಗಂಡ ಸ್ನೇಹಿತ್ ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ತಮ್ಮ ಮಗನ ವಿರುದ್ಧ ಮಾಡುತ್ತಿರುವ ಈ ಆರೋಪವನ್ನು ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ಶ್ರೀಮತಿ ರೇಖಾ ತಳ್ಳಿ ಹಾಕಿದ್ದು ಪತ್ರಿಕಾಗೋಷ್ಠಿಯನ್ನು ನಡೆಸಿ ತಮ್ಮ ಮಗ ಒಳ್ಳೆಯವನು ಎಂದು ಮಗನ ಪರ ನಿಂತಿದ್ದರು. ಇದೀಗ ಚಂದನವನದ ಕೆಲ ತಾರೆಯರು ಕೂಡ ಸ್ನೇಹಿತ್ ವಿವಾದದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ.

ಸ್ನೇಹಿತ್ ವಿನಯವಂತ ಎಂದ 'ಬುದ್ದಿವಂತ'
ಸ್ನೇಹಿತ್ ವಿವಾದ ದೊಡ್ಡದಾಗುತ್ತಿದ್ದಂತೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ನೇಹಿತ್ ಜತೆಗಿನ ಫೋಟೋ ಹಂಚಿಕೊಳ್ಳುವುದರ ಮೂಲಕ ಉಪೇಂದ್ರ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ. ಉಪೇಂದ್ರ ಸ್ನೇಹಿತ ಕುರಿತಾಗಿ ಮಾಡಿರುವ ಫೇಸ್ಬುಕ್ ಪೋಸ್ಟ್ ಹೀಗಿದೆ: "ಸೌಂದರ್ಯ ಜಗದೀಶ್ ಹಾಗೂ ನನ್ನ ಪರಿಚಯ, ಸ್ನೇಹ ಸುಮಾರು ೨೫ ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ನಾನು ಕಂಡಂತೆ ಜಗದೀಶ್ ತುಂಬಾ ಮ್ರದು ಸ್ವಭಾವದವರು, ಸ್ನೇಹ ಜೀವಿ ಅವರ ಶ್ರೀಮತಿ ರೇಖಾ ಮಗ ಸ್ನೇಹಿತ್ ಮಗಳು ಸೌಂದರ್ಯ ಕೂಡಾ ನಮ್ಮ ಕುಟುಂಬಕ್ಕೆ ಪರಿಚಯ. ಇತ್ತೀಚೆಗೆ ಸ್ನೇಹಿತ್ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಕೇಳಿ ಧಿಗ್ಭ್ರಮೆಯಾಯಿತು. ನಾನು ಕಂಡಂತೆ ಈತ ತುಂಬಾ ವಿನಯವಂತ, ಬೆಳೆಯುತ್ತಿರುವ ಹುಡುಗ, ಏಕೆ ಈ ರೀತಿ ಆರೋಪ ಮಾಡಿದ್ದಾರೆ ಎಂದು ನನಗೆ ತಿಳಿಯದು. ಏನಾದರೂ ಭಿನ್ನಾಬಿಪ್ರಾಯಗಳಿದ್ದರೆ ಸಮಾದಾನದಿಂದ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಒಂದಂತೂ ಎಲ್ಲರಿಗೂ ಅನ್ವಯಿಸುವ ಸತ್ಯ...
ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಶ, ದ್ವೇಶದ ಫಲ ಸರ್ವನಾಶ."

ನೆನಪಿರಲಿ ಪ್ರೇಮ್ ಕೂಡ ಸ್ನೇಹಿತ್ ಪರ ಬ್ಯಾಟಿಂಗ್
ನೆನಪಿರಲಿ ಪ್ರೇಮ್ ಕೂಡ ವಿಶೇಷ ವಿಡಿಯೋವೊಂದನ್ನು ಮಾಡುವುದರ ಮೂಲಕ ಸ್ನೇಹಿತ್ ಪರ ಬ್ಯಾಟ್ ಬೀಸಿದ್ದಾರೆ. ಸೌಂದರ್ಯ ಜಗದೀಶ್ ಹಾಗೂ ರೇಖಾ ಅವರು ಎಷ್ಟು ಶ್ರೀಮಂತರೋ ಅಷ್ಟೇ ಹೃದಯ ಶ್ರೀಮಂತರು ಕೂಡ ಹೌದು ಎಂದಿರುವ ನೆನಪಿರಲಿ ಪ್ರೇಮ್ ಅವರು ಮಕ್ಕಳನ್ನು ಸಹ ಒಳ್ಳೆಯ ರೀತಿಯಲ್ಲಿ ಬೆಳೆಸಿದ್ದಾರೆ ಎಂದಿದ್ದಾರೆ. ಹಾಗೂ ಆತ ಏನೆಂಬುದು ಎಲ್ಲರಿಗೂ ತಿಳಿದಿದೆ ಆತನ ವಿರುದ್ಧ ಹರಿದಾಡುತ್ತಿರುವ ಆರೋಪಗಳ ಕುರಿತು ಯಾವುದೇ ರೀತಿಯ ಸಾಕ್ಷಿಗಳಿಲ್ಲ ಎಂದು ನೆನಪಿರಲಿ ಪ್ರೇಮ್ ಹೇಳಿದ್ದಾರೆ. ವಿಡಿಯೋ ಅಂತ್ಯದಲ್ಲಿ ಬೆಳೆಯಬೇಕೆನ್ನುವ ಹುಡುಗನ ಕುರಿತು ನಿಮ್ಮ ಪ್ರೀತಿ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿನಿಮಾರಂಗ ಪ್ರವೇಶಿಸುವತ್ತ ಸ್ನೇಹಿತ್ ಚಿತ್ತ
ಇನ್ನು ಸ್ನೇಹಿತ್ ಚಿತ್ರರಂಗ ಪ್ರವೇಶಿಸುವ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ವಿದ್ಯಾಭ್ಯಾಸದ ನಡುವೆಯೇ ಸ್ನೇಹಿತ್ ಮತ್ತೊಮ್ಮೆ ಬಣ್ಣ ಹಚ್ಚಿ ಪ್ರೇಕ್ಷಕರ ಎದುರು ಬರಲು ಬೇಕಾದ ತಯಾರಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಆದರೆ ಪದೇ ಪದೇ ಸ್ನೇಹಿತ್ ಹೆಸರು ಈ ರೀತಿಯ ವಿವಾದಗಳಲ್ಲಿ ಕೇಳಿಬರುತ್ತಿರುವುದರಿಂದ ಮುಂದೊಂದು ದಿನ ಆತನಿನೆ ಹಿನ್ನಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











