ರಿಯಲ್ ಸ್ಟಾರ್ ಉಪೇಂದ್ರ ಮತ್ತು ಶಶಾಂಕ್ ಸಿನಿಮಾ ಕತೆ ಏನಾಯಿತು? ಇಲ್ಲಿದೆ ವಿವರ
ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಕಬ್ಜ ಭೂಗತ ಲೋಕದ ಕಥೆಯಾಗಿದ್ದು ರಿಯಲ್ ಸ್ಟಾರ್ ಲುಕ್ ಈಗಾಗಲೇ ಎಲ್ಲಾ ಕಡೆ ಹರಿದಾಡುತ್ತಿದೆ.
ಈ ಸಿನಿಮಾ ಜೊತೆಗೆ ಉಪೇಂದ್ರ ತೆಲುಗು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ ಗನಿ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಉಪೇಂದ್ರ ತೆಲುಗು ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದಾರೆ.
ಈ ನಡುವೆ ರಿಯಲ್ ಸ್ಟಾರ್ ಮತ್ತು ನಿರ್ದೇಶಕ ಶಶಾಂಕ್ ಸಿನಿಮಾ ಕತೆ ಏನಾಯಿತು ಎನ್ನುವ ಚರ್ಚೆ ಪ್ರಾರಂಭವಾಗಿದೆ. ನಿರ್ದೇಶಕ ಶಶಾಂಕ್, ಉಪೇಂದ್ರ ಜೊತೆ ಸಿನಿಮಾ ಅನೌನ್ಸ್ ಮಾಡಿ ಎರಡು ವರ್ಷದ ಮೇಲಾಗಿದೆ. ಆದರೆ ಇನ್ನು ಪ್ರಾರಂಭವಾಗಿಲ್ಲ. ಸಿನಿಮಾ ನಿಂತೋಯಿತು ಎನ್ನುವ ಮಾತುಗಳು ಕೇಳಿಬರುತ್ತಿದೆ.

ಆದರೀಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸದ್ಯದಲ್ಲಿ ಉಪೇಂದ್ರ, ಶಶಾಂಕ್ ಜೊತೆ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅನೇಕ ಕಾರಣಗಳಿಂದ ಸಿನಿಮಾ ತಡವಾಗುತ್ತಲೇ ಬಂದಿದ್ದು, ಈ ಬಾರಿ ಶೂಟಿಂಗ್ ಪ್ರಾರಂಭ ಆಗುವುದು ಪಕ್ಕಾ ಎನ್ನಲಾಗುತ್ತಿದೆ. ಕಬ್ಜ ಚಿತ್ರೀಕರಣ ಮುಗಿಯುತ್ತಿದ್ದಂತೆ ರಿಯಲ್ ಸ್ಟಾರ್ ಹೊಸ ಸಿನಿಮಾದ ಚಿತ್ರೀಕರಣ ಶುರು ಮಾಡಲಿದ್ದಾರಂತೆ.
ಈ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಈಗಾಗಲೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ನಿಶ್ವಿಕಾ ನಾಯ್ಡು ಮತ್ತು ರುಕ್ಮಿಣಿ ವಸಂತ್ ಇಬ್ಬರು ಆಯ್ಕೆಯಾಗಿದ್ದರು. ಆದರೆ ರುಕ್ಮಿಣಿ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಇದೀಗ ಸಿನಿಮಾತಂಡ ಹೊಸ ನಾಯಕಿಯರ ಹುಡುಕಾಟ ನಡೆಸುತ್ತಿದ್ದಾರಂತೆ.
ಏಪ್ರಿಲ್ ಕೊನೆಯಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಲಿರುವ ಚಿತ್ರತಂಡ ಮಾನ್ಸೂನ್ ಆರಂಭಕ್ಕೂ ಮೊದಲೇ ಮುಗಿಸುವ ನಿರ್ಧಾರ ಮಾಡಿದೆ. ಶಶಾಂಕ್ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.


Click it and Unblock the Notifications











