"ಪುಷ್ಪಾ ಸಿನ್ಮಾ 10 ಕೋಟಿ ಗಳಿಸ್ತು, ಕನ್ನಡದಲ್ಲಿ ಡಬ್ ಮಾಡಿ, ಆ ಭಾಷೆಗೆ ಗೌರವ ಕೊಡಿ"; ಉಪೇಂದ್ರ
ಪರಭಾಷಾ ಸಿನಿಮಾಗಳನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡಬೇಕು ಎನ್ನುವ ಆಗ್ರಹ ಬಹಳ ದಿನಗಳಿಂದ ಕೇಳಿಬರ್ತಿದೆ. ಕೆಲವರು ಇವತ್ತಿಗೂ ಡಬ್ ಮಾಡಿ ಇಲ್ಲಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಪರಭಾಷಾ ಸಿನಿಮಾಗಳ ಬಿಡುಗಡೆ ವೇಳೆ ಚಿತ್ರಮಂದಿರಗಳ ಆವರಣದಲ್ಲಿ ಡಿಜೆ ಹಾಕಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತವಾಗ್ತಿದೆ.
ಡಿಜೆ ಹಾಕಿ ಸಂಭ್ರಮಾಚರಣೆ ಮಾಡಲು ಅವಕಾಶ ಇಲ್ಲದೇ ಇದ್ದರೂ ಪವನ್ ಕಲ್ಯಾಣ್ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದರು. ತೆಲುಗು ಭಾಷೆಯ ಬ್ಯಾನರ್ ಹಾಕಿದ್ದಕ್ಕೆ ಕೂಡ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲವೆಡೆ ಲಾಂಗ್ ಹಿಡಿದು ಅಭಿಮಾನಿಗಳು ಮಿತಿಮೀರಿದ ವರ್ತನೆ ತೋರಿದ್ದರು. ಇದೇ ಕಾರಣಕ್ಕೆ ಕನ್ನಡಪರ ಸಂಘಟನೆಗಳು ತೆಲುಗು ಬ್ಯಾನರ್ ಹರಿದು, ಡಿಜೆಗೆ ಕೂಡ ಅವಕಾಶ ಕೊಟ್ಟಿರಲಿಲ್ಲ. ಆದರೆ ತೆಲುಗು ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡ್ತಿಲ್ಲ, ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಅರ್ಥದಲ್ಲಿ ತಪ್ಪಾಗಿ ಬಿಂಬಿಸಲಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವೀಡಿಯೋಗಳನ್ನು ನೋಡಿ ಕರ್ನಾಟಕದಲ್ಲಿ ತೆಲುಗು ಸಿನಿಮಾ ಬಿಡುಗಡೆ ಬಿಡ್ತಿಲ್ಲ, ಬ್ಯಾನರ್ ಹರಿದು ಸಮಸ್ಯೆ ಕೊಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಆಂಧ್ರ, ತೆಲಂಗಾಣ ಸಿನಿರಸಿಕರು ಭಾವಿಸಿದ್ದಾರೆ. ಇದೇ ವಿಚಾರದ ಬಗ್ಗೆ ಇತ್ತೀಚೆಗೆ ನಟ ಉಪೇಂದ್ರ ಬಳಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡದಲ್ಲಿ ಸಿನಿಮಾಗಳನ್ನು ಡಬ್ ಮಾಡಿ ಬಿಡಬೇಕು ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ನಟನೆಯ ತೆಲುಗು ಸಿನಿಮಾ 'ಆಂಧ್ರಕಿಂಗ್ ತಾಲೂಕ' ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರಕ್ಕಾಗಿ ತೆಲುಗು ವಾಹಿನಿ ಸಂದರ್ಶನಗಳಲ್ಲಿ ಉಪೇಂದ್ರ ಮಾತನಾಡುತ್ತಿದ್ದಾರೆ. ABN ನ್ಯೂಸ್ ಸಂದರ್ಶನದಲ್ಲಿ "ತೆಲುಗು ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಡ್ಡಿಯಾಗ್ತಿದೆ. ಕನ್ನಡದಲ್ಲೇ ಪೋಸ್ಟರ್ ಹಾಕಬೇಕು ಎನ್ನುತ್ತಾರೆ, ಇದು ನಿಮ್ಮ ಗಮನಕ್ಕೆ ಬಂದಿದ್ಯಾ? ಎನ್ನುವ ಪ್ರಶ್ನೆಗೆ ಉಪ್ಪಿ ಮಾತನಾಡಿ "ತಪ್ಪೇನಿದೆ. ಎಲ್ಲಾ ಭಾಷೆಗೆ ಡಬ್ ಮಾಡ್ತೀರಾ, ಕನ್ನಡಕ್ಕೂ ಡಬ್ ಮಾಡಿ ಎನ್ನುತ್ತಿದ್ದಾರೆ. ಪುಷ್ಪ-2 ಕನ್ನಡ ವರ್ಷನ್ 10 ಕೋಟಿ ಕಲೆಕ್ಷನ್ ಮಾಡಿತ್ತು. ಕನ್ನಡದಲ್ಲಿ ಡಬ್ ಮಾಡ್ಬೇಕು, ಆ ಭಾಷೆಗೆ ಗೌರವ ಕೊಡಬೇಕಲ್ವಾ? ತಪ್ಪೇನಿದೆ" ಎಂದಿದ್ದಾರೆ.
ಕನ್ನಡ ಡಬ್ಬಿಂಗ್ ಅಲ್ಲ, ತೆಲುಗು ಸಿನಿಮಾ ಬಿಡುಗಡೆ ವೇಳೆ ಪೋಸ್ಟರ್ ಹರಿದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಕ್ಕೆ ಇಲ್ಲ, "ಆ ತರ ಅಲ್ಲ, ಡಬ್ ಮಾಡುವಂತೆ ಕೇಳುತ್ತಿದ್ದಾರೆ ಅಷ್ಟೇ" ಎಂದು ಉಪೇಂದ್ರ ಹೇಳಿದ್ದಾರೆ. ನಿರೂಪಕಿ ಕೇಳಿದ ಪ್ರಶ್ನೆ ಸರಿಯಾಗಿ ಉಪೇಂದ್ರ ಅವರಿಗೂ ಗೊತ್ತಾಗಲಿಲ್ಲ. ಅದನ್ನು ಅರ್ಥ ಮಾಡಿಸಲು ನಿರೂಪಕನಿಗೆ ಸಾಧ್ಯವಾಗಿಲ್ಲ. ಅದೆಲ್ಲಾ ಏನೇ ಇದ್ದರೂ ಡಬ್ಬಿಂಗ್ ಪರ ಉಪೇಂದ್ರ ಮಾತನಾಡಿರುವುದಕ್ಕೆ ಕನ್ನಡ ಸಿನಿರಸಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.
ರಾಮ್ ಪೋತಿನೇನಿ ಹೀರೊ ಆಗಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಚಿತ್ರದ ಟೈಟಲ್ ರೋಲ್ನಲ್ಲಿ ಉಪ್ಪಿ ಮಿಂಚಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ತೆರೆಗೆ ಬರ್ತಿದೆ. ಇನ್ನು ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಬಳಿಕ 'ಭಾರ್ಗವ' ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಯುಐ' ಬಳಿಕ ಮುಂದೆ ಮತ್ತೆ ಸಿನಿಮಾ ನಿರ್ದೇಶನ ಮಾಡುವುದಾಗಿ ಉಪ್ಪಿ ಹೇಳಿದ್ದಾರೆ. ಈ ಬಾರಿ ಎಲ್ಲಾ ಪ್ರೇಕ್ಷಕರನ್ನು ರಂಜಿಸುವ ಕಮರ್ಷಿಯಲ್ ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಕಳೆದ ವರ್ಷ ಡಿಸೆಂಬರ್ ಕೊನೆಗೆ ಬಂದಿದ್ದ 'ಯುಐ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.


Click it and Unblock the Notifications











