ಉಪೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ.? ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬಂದಾಯ್ತು. ಇಂದು (ಅಕ್ಟೋಬರ್ 31) ತಮ್ಮ ಹೊಸ ಪಕ್ಷದ ಹೆಸರನ್ನ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಕೂಡ ಘೋಷಣೆ ಮಾಡಲಾಯಿತು.
ಸ್ವತಃ ಉಪೇಂದ್ರ ಅವರೇ ಹೇಳುವಾಗೆ, 2018ರ ವಿಧಾನಸಭೆ ಚುನಾವಣೆಗೆ 224 ಕ್ಷೇತ್ರಗಳಲ್ಲೂ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಅಭ್ಯರ್ಥಿಗಳನ್ನ ನಿಲ್ಲಿಸುವ ಯೋಚನೆ ಮಾಡಿಕೊಂಡಿದ್ದಾರಂತೆ.
ಆದ್ರೆ, ಉಪೇಂದ್ರ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರೇ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಉಪ್ಪಿಯ ಉತ್ತರವೇ ಬೇರೆ ಇದೆ. ಈ ಪ್ರಶ್ನೆಗೆ ಉಪ್ಪಿ ಏನಂದ್ರು ಮುಂದೆ ಓದಿ......

ಸ್ಪರ್ಧಿಸುವ ಬಗ್ಗೆ ನಿರ್ಧಾರ ಆಗಿಲ್ಲ
''ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. ಇನ್ನು ಜನರು ಬರ್ತಿದ್ದಾರೆ. ಅವರ ಜೊತೆ ಚರ್ಚೆ ಮಾಡ್ತಿದ್ದೀವಿ. ಪ್ರತಿಯೊಂದನ್ನ ಸೂಕ್ಷ್ಮವಾಗಿ ಚರ್ಚಿಸಿ ಜನರ ಮುಂದೆ ಇಡಬೇಕು. ಈಗಾಗಲೇ 50-60 ಅಭ್ಯರ್ಥಿಗಳು ನಮ್ಮ ಪಕ್ಷದ ಪರ ಸ್ಪರ್ಧಿಸಲು ಸಿದ್ದರಿದ್ದಾರೆ. ಆದ್ರೆ, 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡ್ತೀವಿ'' ಎಂದು ಹೇಳುವ ಮೂಲಕ ಉಪ್ಪಿ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಲಿಲ್ಲ.

ಉಪೇಂದ್ರನನ್ನ ನಂಬಬೇಡಿ, ಕಾನ್ಸೆಪ್ಟ್ ನಂಬಿ
''ಇಲ್ಲಿ ಉಪೇಂದ್ರನನ್ನು ನಂಬಬೇಕಿಲ್ಲ, ಕಾನ್ಸೆಪ್ಟ್, ವಿಷಯವನ್ನ ನಂಬಿ ಸಾಕು. ನಮ್ಮ ಸ್ಪರ್ಧಿಗಳು ತಪ್ಪು ಮಾಡಿದರೇ ಜನರೇ ಅವರನ್ನ ಗಮನಿಸಿಕೊಳ್ಳಲಿ. ನನ್ನನ್ನು ಕೂಡ ಅವರೇ ವಿಚಾರಿಸಿಕೊಳ್ಳಲಿ'' ಎಂಬ ಧ್ಯೇಯ ಹೊಂದಿದ್ದಾರೆ.

ನಾನು ಉಪೇಂದ್ರ ಆಗ್ತೀನಿ
ಚಿರಂಜೀವಿ, ಪವನ್ ಕಲ್ಯಾಣ್ ಪಕ್ಷ ಸ್ಥಾಪನೆ ಮಾಡಿ ಸೋಲು ಕಂಡರು. ಅದೇ ರೀತಿ ಉಪೇಂದ್ರ ಅವರು ಆಗ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ಉಪ್ಪಿ ''ನಾನು ಎಂ.ಜಿ.ಆರ್, ಎನ್.ಟಿ.ಆರ್, ಚಿರಂಜೀವಿ, ಪವನ್ ಕಲ್ಯಾಣ್ ಆಗಲ್ಲ, ನಾನು ಉಪೇಂದ್ರ ಆಗಿಯೇ ಇರುತ್ತೇನೆ'' ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಜೆಪಿ ಸ್ಥಾಪನೆ ಮಾಡಿದ ಉಪೇಂದ್ರ : ಯಾರು, ಏನು ಹೇಳಿದರು?

ನನಗೆ ಸರಿ ಅನ್ನಿಸಲ್ಲ ಅಂದ್ರೆ ನಿಲ್ಲಿಸಲ್ಲ
''ಸ್ಪರ್ಧಿಗಳು ತರುವ ಕಾನ್ಸೆಪ್ಟ್ ಇಷ್ಟ ಆಗಲಿಲ್ಲ ಎಂದರೆ, ನನಗೆ ಸಮಾಧಾನ ಆಗಲಿಲ್ಲ ಎಂದರೆ ಚುನಾವಣೆಗೆ ನಿಲ್ಲಿಸಲ್ಲ. ಈ ಸಲ ಅಧಿಕಾರಕ್ಕೆ ಬಂದಿಲ್ಲ ಅಂದ್ರೂ, ಇನ್ನು ಐದು ವರ್ಷ ಕಾಯಲು ಸಿದ್ದ. ಒಂದು ಸೋಲಿಗೆ ನಿರಾಸೆಯಾಗಲ್ಲ, ಸಾಯೋ ತನಕ ಕಾಯುತ್ತೇನೆ'' ಎಂದರು.

ಸ್ಪರ್ಧಿಗಳಿಗೆ ನಾನೇ ಅಂಬಾಸಿಡರ್
''ನಮಗೆ ಹಣ ಬೇಡ, ನಿಮಗೆ ಐಡಿಯಾ ಇದ್ದರೆ ಬನ್ನಿ, ಜನ ನಿಮ್ಮನ್ನು ಗೆಲ್ಲಲಿದ್ದಾರೆ. ನೀವು ಮನೆಯಲ್ಲಿದ್ದೇ ಗೆಲ್ಲಬಹುದು. ನಾನೇ ನಿಮಗೆ ಬ್ರಾಂಡ್ ಅಂಬಾಸಿಡರ್, ನಾನೇ ನಿಮ್ಮ ಪರ ಪ್ರಚಾರ ಮಾಡುತ್ತೇನೆ'' ಎಂದು ಕರೆ ನೀಡಿದರು.

ಪಕ್ಷ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಯಾರು?
ಒಂದು ವೇಳೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ ''ನನಗಿಂತ ಯೋಗ್ಯತೆ ಇದ್ದವರು ಇದ್ರೆ, ಖಂಡಿತಾ ಅವರೇ ಆಗಲಿ. ಅದರಲ್ಲಿ ಯಾವುದೇ ಗೊಂದಲ ಇಲ್ಲ'' ಎಂದರು.


Click it and Unblock the Notifications











