'ಪ್ರಜಾಕೀಯ' ಉಪೇಂದ್ರ: ಎಲ್ಲಾ ಓಕೆ, ಬರೀ ಚಪ್ಪಾಳೆಯಷ್ಟೆ ಯಾಕೆ?
ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಭಿಪ್ರಾಯಗಳನ್ನೇ ಅಧಿಕೃತ ಎಂದು ತೀರ್ಮಾನಿಸುವ ಕಾಲಘಟ್ಟ ಇದು. ಯಾವುದೇ ಮಹತ್ವದ ಬೆಳವಣಿಗೆ ಇರಲಿ, ಸಾಮಾಜಿಕ ವಿಚಾರಗಳಿರಲಿ ಖ್ಯಾತನಾಮರು ಸೋಷಿಯಲ್ ನೆಟ್ವರ್ಕ್ ಮೂಲಕವೇ ಸ್ಪಂದಿಸುತ್ತಾರೆ, ಈ ಮೂಲಕ ತಮ್ಮ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಕೇಂದ್ರ ಸರಕಾರ ಜನರ ತಲೆಗೆ ಕಟ್ಟಿದ ದುಬಾರಿ ಟ್ರಾಫಿಕ್ ಫೈನ್.
ದೇಶಾದ್ಯಂತ ಇವತ್ತಿಗೂ ಸಂಚಾರಿ ಪೋಲಿಸರ 'ದುಬಾರಿ ದಂಡ ಸಂಹಿತೆ' ಭಾರಿ ಚರ್ಚೆಯಲ್ಲಿದೆ. ಸಂಚಾರಕ್ಕೆ ಅಗತ್ಯವಾಗಿರುವ ಮೂಲಸೌಕರ್ಯದ ಕಡೆ ಗಮನ ಕೊಡದೆ, ಹಣ ಸಂಗ್ರಹವೇ ಗುರಿಯನ್ನಾಗಿಸಿಕೊಂಡಂತೆ ಕಾಣಿಸುತ್ತಿರುವ ಹೊಸ ನಿಯಮವನ್ನು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಲ್ಲಿ ಸೆಲೆಬ್ರಿಟಿಗಳೂ ಸೇರಿದ್ದಾರೆ. ಅವರುಗಳ ಪೈಕಿ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು. ಹಾಗಂತ ನಾವು ಗಟ್ಟಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ!
ಗಮನಾರ್ಹ ಸಂಗತಿ ಏನೆಂದರೆ, ಉಪೇಂದ್ರ ಇವತ್ತಿಗೆ ಕೇವಲ ನಟ ಮಾತ್ರವಲ್ಲ, ರಾಜಕಾರಣಿ ಕೂಡ. ಪ್ರಜಾಕೀಯದ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಸಾಮಾಜಿಕ ಬದಲಾವಣೆಗೆ ಮಾರ್ಗ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಿಂಗಾಪೂರದಂತಹ ದೇಶಗಳಿಂದ ಸೆಲ್ಫಿ ವಿಡಿಯೋಗಳನ್ನು ಬಿಡಿಗಡೆ ಮಾಡಿ, ನಮ್ಮಲ್ಲೂ ಇಂತಹ ವ್ಯವಸ್ಥೆ ಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇಂತವರು ದುಬಾರಿ ಟ್ರಾಫಿಕ್ ಫೈನ್ ವಿಚಾರದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ನೋಡಿದರೆ ನಿರಾಸೆ ಮೂಡಿಸುವಷ್ಟು ಪೇವಲವಾಗಿದೆ.
Recommended Video
ಟ್ರಾಫಿಕ್ ನಿಯಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈವರೆಗೂ ನೇರವಾಗಿ ಹೇಳದ ಉಪೇಂದ್ರ ಬೇರೆಯವರ ಮಾತುಗಳಿಗೆ ಮಾತ್ರ 'ಎಮೋಜಿ' ಬೆಂಬಲ ನೀಡುತ್ತಾ ಬರುತ್ತಿದ್ದಾರೆ.

ಟ್ರೋಲ್ ಗೆ ಚಪ್ಪಾಳೆ ಹೊಡೆದ ಉಪ್ಪಿ
''ಗಾಡಿ ಮೇಲೆ 3 ಜನ ಹೋದರೆ ದಂಡ ಹಾಕುವ ಪೊಲೀಸರು, ಸರ್ಕಾರಿ ಬಸ್ ಹಾಗೂ ರೈಲುಗಳಲ್ಲಿ ಕುರಿ ರೀತಿ ತುಂಬಿಕೊಂಡು ಹೋಗುವವರಿಗೆ ಎಷ್ಟು ದಂಡ ಹಾಕುತ್ತೀರಿ?'' ಎನ್ನುವ ಒಂದು ಟ್ರೋಲ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮೀಮ್ನ್ನು ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಉಪೇಂದ್ರ ಅದಕ್ಕೆ ಚಪ್ಪಾಳೆ ಹೊಡೆದ ಚಿಹ್ನೆ ಹಾಕಿದ್ದಾರೆ.

ಸೋನು ಗೌಡ ಮಾತಿಗೂ ಇದೆ ಪ್ರತಿಕ್ರಿಯೆ
ಉಪೇಂದ್ರ ಜೊತೆಗೆ ಇತ್ತೀಚಿಗಷ್ಟೆ 'ಐ ಲವ್ ಯೂ' ಸಿನಿಮಾ ಮಾಡಿದ್ದ ಸೋನು ಗೌಡ ಈ ವಿಷಯದಲ್ಲಿ ಬಗ್ಗೆ ಇತ್ತೀಚಿಗಷ್ಟೆ ಟ್ವೀಟ್ ಮಾಡಿದ್ದರು. ರಸ್ತೆ ಗುಂಡಿಗಳಿಗೆ ನಾವೆಷ್ಟು ಫೈನ್ ಹಾಕಬೇಕು? ಎಂದು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಹಾಕಿದ್ದರು. ಈ ಸುದ್ದಿಯನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಉಪ್ಪಿ, ಅಲ್ಲಿಯೂ 'ಚಪ್ಪಾಳೆ' ಹೊಡೆದಿದ್ದಾರೆ.

ಹಾಗಾದ್ರೆ, ನಿಮ್ಮ ಅಭಿಪ್ರಾಯ ಏನು?
ಹೀಗೆ, ಗಂಭೀರ ಸಂಗತಿಯೊಂದು ಚರ್ಚೆಯಲ್ಲಿದ್ದಾಗ, ರಾಜಕಾರಣಕ್ಕೆ ಒಡ್ಡಿಕೊಂಡ ಉಪೇಂದ್ರ ಅವರ ಪ್ರತಿಕ್ರಿಯೆಯಲ್ಲಿ ಒಂದಷ್ಟಾದರೂ ಗಂಭೀರತೆ, ಪ್ರಬುದ್ಧತೆಯನ್ನು ಅವರ ಅಭಿಮಾನಿಗಳು ನಿರೀಕ್ಷೆ ಮಾಡುತ್ತಾರೆ. ನಾನಾ ದೇಶಗಳ ಪರಿಸರವನ್ನು ಜನರಿಗೆ ಪರಿಚಯಿಸಿ, ಇಲ್ಲಿಯೂ ಅಂತಹದೊಂದು ಸೃಷ್ಟಿಸುವ ಕನಸು ಕಾಣುತ್ತಿರುವವರು ಅವರು. ಅವರು ಸಮಗ್ರ ಸಂಚಾರಿ ಹಾಗೂ ಸಾರಿಗೆ ವ್ಯವಸ್ಥೆಯ ಬದಲಾವಣೆಗಳ ವಿಚಾರದಲ್ಲಿ ವಿವರವಾದ ಪ್ರತಿಕ್ರಿಯೆ ನೀಡುವುದು ಸಮಯದ ಅಗತ್ಯ ಕೂಡ.

ಸಂಪರ್ಕಕ್ಕೆ ಸಿಗದ ಉಪೇಂದ್ರ
ದುಬಾರಿ ಟ್ರಾಫಿಕ್ ಫೈನ್ ವಿಚಾರದಲ್ಲಿ ಚಪ್ಪಾಳೆ ಹೊರತಾಗಿಯೂ ಉಪೇಂದ್ರ ಅವರ ಅಭಿಪ್ರಾಯ ಏನಿರಬಹುದು? ಈ ಕುರಿತು ಪ್ರತಿಕ್ರಿಯೆಗಾಗಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಲಾಯಿತಾದರೂ ಕರೆಯನ್ನು ಅವರು ಸ್ವೀಕರಿಸಿಲ್ಲ. ಸಂದೇಶಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.


Click it and Unblock the Notifications











