ಹೊಸ ಪಕ್ಷದೊಂದಿಗೆ ರಾಜಕೀಯ ರಣರಂಗಕ್ಕೆ ಎಂಟ್ರಿ ಕೊಡ್ತಾರಾ ರಿಯಲ್ ಸ್ಟಾರ್..?
ನಟ ರಿಯಲ್ ಸ್ಟಾರ್ ಉಪೇಂದ್ರ ರವರ ರಾಜಕೀಯ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಬಿಸಿ ಬಿಸಿ ಸುದ್ದಿ ಇಂದು ಬೆಳಗ್ಗೆಯಿಂದ ಹರಿದಾಡುತ್ತಿದೆ. ಇದರ ಹಿಂದೆಯೇ ಈಗ ಉಪೇಂದ್ರ ರಾಜಕೀಯದ ಬಗ್ಗೆ ಅನೇಕ ಸ್ವಾರಸ್ಯಕರ ವಿಷಯಗಳು ಕೇಳಿ ಬರುತ್ತಿದೆ.
ಉಪೇಂದ್ರ ರಾಜಕೀಯಕ್ಕೆ ಧುಮುಕುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ನಾಳೆ ಪತ್ರಿಕಾಗೋಷ್ಠಿ ನಡೆಸಲಿದ್ದಾರಂತೆ. ಅಲ್ಲದೆ ಉಪೇಂದ್ರ ತಮ್ಮ ಸ್ವಂತ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಮುಂದೆ ಓದಿ...

ಉಪೇಂದ್ರ ಮ್ಯಾನೇಜರ್ ಸ್ಟಪ್ಟನೆ
ಉಪೇಂದ್ರ ರಾಜಕೀಯ ವಿಷಯದ ಬಗ್ಗೆ ನಾಳೆ ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಈ ವಿಷಯವನ್ನು ಸ್ವತಃ ಉಪೇಂದ್ರ ಅವರ ಮ್ಯಾನೇಜರ್ ಶ್ರೀರಾಮ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸ್ಪಷ್ಟ ಪಡಿಸಿದ್ದಾರೆ.

ಹೊಸ ಪಕ್ಷ
ಉಪೇಂದ್ರ ತಮ್ಮ ಹೊಸ ಚಿಂತನೆಯ ಹೊಸ ಪಕ್ಷವನ್ನು ಶುರು ಮಾಡುತ್ತಾರೆ ಎಂಬ ಸುದ್ದಿ ಕೂಡ ಇದೆ. ಅಲ್ಲದೆ ನಾಳೆ ಪತ್ರಿಕಾಗೋಷ್ಠಿಯಲ್ಲಿ ಉಪ್ಪಿ ಅವರ ಹೊಸ ಪಕ್ಷಕ್ಕೆ ಚಾಲನೆ ಸಿಗಲಿದೆ ಅಂತ ಹೇಳಲಾಗುತ್ತಿದೆ.

ಬಿಜೆಪಿ ಸೇರುತ್ತಾರಾ .?
ಉಪೇಂದ್ರ ಅವರಿಗೆ ಮೋದಿ ಅವರ ಮೇಲೆ ದೊಡ್ಡ ಅಭಿಮಾನ ಇದೆ. ಅದನ್ನು ಅವರೇ ಎಷ್ಟು ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ ನಾಳೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಾ ಇದ್ದಾರೆ. ಇದೆಲ್ಲವನ್ನು ನೋಡಿದರೆ ಉಪ್ಪಿ ಬಿಜೆಪಿ ಪಕ್ಷ ಸೇರುತ್ತಾರಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ

ಮಾತುಕತೆ ಆಗಿಲ್ಲ
ಉಪೇಂದ್ರ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಇದ್ದರೂ, ಇದುವರೆಗೂ ರಾಜ್ಯ ಬಿಜೆಪಿ ನಾಯಕರು ಉಪೇಂದ್ರ ಅವರ ಜೊತೆ ಯಾವುದೇ ಮಾತುಕತೆ ನಡೆಸಿಲ್ಲವಂತೆ.

'ಅದಕ್ಕೆ ಸರಿಯಾದ ಟೈಂ ಬರಬೇಕು..'
ಇಷ್ಟು ದಿನ 'ರಾಜಕೀಯಕ್ಕೆ ಬನ್ನಿ..' ಅಂದರೆ 'ಅದಕ್ಕೆ ಸರಿಯಾದ ಟೈಂ ಬರಬೇಕು..' ಅಂತ ಹೇಳುತ್ತಿದ್ದ ಉಪೇಂದ್ರ ಈ ಬಾರಿಯ ಚುನಾವಣೆಯ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಮನಸು ಮಾಡಿದ್ದಾರಂತೆ.

ಆಪ್ತರ ಜೊತೆ ಚಿಂತನೆ
ಉಪೇಂದ್ರ ರಾಜಕೀಯಕ್ಕೆ ಬರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರಂತೆ. ತಮ್ಮ ಆಪ್ತರ ಜೊತೆ ಉಪೇಂದ್ರ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಟ್ವಿಟ್ಟರ್ ನಲ್ಲಿ ಉಪ್ಪಿ
ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಐಟಿ ರೈಡ್, ಜಿ.ಎಸ್.ಟಿ, ನೋಟ್ ಬ್ಯಾನ್ ವಿಷಯಕ್ಕೆ ಉಪೇಂದ್ರ ಟ್ವೀಟ್ ಮಾಡಿದ್ದು ರಾಜಕೀಯ ಎಂಟ್ರಿಯ ಮುನ್ನುಡಿ ಇರಬಹುದಾ ಎಂಬ ಪ್ರಶ್ನೆ ಮೂಡಿದೆ.

ಹೋರಾಟಗಳಲ್ಲಿ ಭಾಗಿ
ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕ್ ಪಾಲ್ ಮಸೂದೆ ಜಾರಿಗೆ ದೇಶಾದ್ಯಂತ ನಡೆದ ಹೋರಾಟದಲ್ಲಿ ನಟ ಉಪೇಂದ್ರ ಭಾಗಿಯಾಗಿದ್ದರು. ಅಲ್ಲದೆ ಕಳೆದ ವರ್ಷ ನಡೆದ ಕಾವೇರಿ ಹೋರಾಟದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉಪ್ಪಿ CM ಆಗಬೇಕು ಅಂತ ಅನೇಕರು ಮಾತನಾಡಿದ್ದರು.

ಸೂಪರ್ CM
ಉಪೇಂದ್ರ ಅವರ ಪ್ರತಿ ಸಿನಿಮಾದಲ್ಲಿಯೂ ರಾಜಕೀಯದ ಒಂದು ಡೈಲಾಗ್ ಇದ್ದೇ ಇರುತ್ತದೆ. ಅಲ್ಲದೆ 'ಸೂಪರ್' ಸಿನಿಮಾದಲ್ಲಿ CM ಆಗಿದ್ದ ಉಪೇಂದ್ರ ನವ ಭಾರತದ ಕಲ್ಪನೆಯನ್ನು ಅದ್ಭುತವಾಗಿ ತೋರಿಸಿದ್ದರು.

ನಾಳೆ ಉತ್ತರ
ಉಪೇಂದ್ರ ಅವರು ನಿಜಕ್ಕೂ ರಾಜಕೀಯಕ್ಕೆ ಬರುತ್ತಾರಾ?, ಅವರ ಹೊಸ ಪಕ್ಷ ಹೇಗಿರುತ್ತದೆ?, ಅವರ ಪಕ್ಷದ ಚಿಹ್ನೆ ಯಾವುದು?, ಅಥಾವ ಈಗ ಇರುವ ಹಳೆ ಪಕ್ಷಕ್ಕೆ ಉಪ್ಪಿ ಸೇರುತ್ತಾರಾ? ಎಂಬ ಎಲ್ಲ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.


Click it and Unblock the Notifications











