"ಅವತ್ತು ತಟ್ಟೆ ಹಿಡಿದ್ರೆ ಆತ ಊಟ ಹಾಕಲಿಲ್ಲ, ಆಮೇಲೇನಾಯ್ತು ಅಂದ್ರೆ".. : "ನನ್ನ ಅಲ್ಟಿಮೇಟ್ ಗುರಿ ಸಿನಿಮಾ ಅಲ್ಲ"!
ಸ್ಯಾಂಡಲ್ವುಡ್ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಕತ್ರಿಗುಪ್ಪೆಯ ಉಪ್ಪಿ ನಿವಾಸದ ಮುಂದೆ ಜಮಾಯಿಸಿ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಶುಭಾಶಯ ಕೋರಿದ್ದಾರೆ. ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಉಪ್ಪು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. 'ಕಬ್ಜ' ಹಾಗೂ 'ಯುಐ' ಚಿತ್ರತಂಡಗಳಿಂದ ವಿಶೇಷ ಉಡುಗೊರೆ ಕೂಡ ಸಿಕ್ಕಿದೆ.
ರಿಯಲ್ ಸ್ಟಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಹಿಂದೆ ಅವರು ಮಾತನಾಡಿದ್ದ ಎರಡು ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಅಂದಿನ ಸೂಪರ್ ಸ್ಟಾರ್ ಮಾತುಗಳನ್ನು ಕೇಳಿ ಫಿದಾ ಆಗಿದ್ದಾರೆ. ಇನ್ನು ಉಪೇಂದ್ರ ನಟನೆಯ ಕೆಲ ಸೂಪರ್ ಹಿಟ್ ಸಿನಿಮಾ ದೃಶ್ಯಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ವಿಭಿನ್ನ ಚಿಂತಕ ಹಾಗೂ ವಿಭಿನ್ನ ಮುಖ, ನಿಲುವುಗಳ ನಟ ಉಪೇಂದ್ರ. ವಿಭಿನ್ನ ಪ್ರಯೋಗಗಳ ಮೂಲಕ ಬಣ್ಣದಲೋಕದಲ್ಲಿ ಯಶಸ್ವಿಯಾದರು. ಆದರೆ ಉಪೇಂದ್ರ ಅವರ ಅಂತಿಮ ಗುರಿ ಸಿನಿಮಾ ಅಲ್ಲವಂತೆ. ಈ ಮಾತುಗಳನ್ನು ಕೇಳಿದರೆ ಪ್ರಜಾಕೀಯದ ಕಲ್ಪನೆ ದಶಕಗಳ ಹಿಂದೆಯೇ ಅವರಲ್ಲಿತ್ತು ಅನ್ನುವುದು ಗೊತ್ತಾಗುತ್ತದೆ.

ನನ್ನ ಅಲ್ಟಿಮೇಟ್ ಗುರಿ ಸಿನಿಮಾ ಅಲ್ಲ
ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದಶಕಗಳ ಹಿಂದೆ ಉಪೇಂದ್ರ ಮಾತನಾಡಿದ್ದಾರೆ. "ನಾನು ನಿಮ್ಮ ಮುಂದೆ ಇವತ್ತು ಓಪನ್ ಆಗಿ ಹೇಳ್ತೀನಿ. ಸಿನಿಮಾಗಳಲ್ಲಿ ನಾನು ಇಷ್ಟೊತ್ತಿಗೆ ವೆಲ್ ಸೆಟಲ್ಡ್. ನನಗೇನು ಯೋಚನೆ ಇಲ್ಲ. ಆರಾಮಾಗಿ ಬದುಕಬಹುದು. ಊಟ ತಿಂಡಿಗೆ ಯೋಚನೆ ಇಲ್ಲ. ನನಗೆ ಈ ಕಷ್ಟ ಬೇಕಾಗಿಲ್ಲ. ಯಾಕೆ ತಿಂಗಳಗಳ ಕಾಲ ಸ್ಕ್ರಿಪ್ಟ್ ಮಾಡಿ ಯಾಕೆ ಒದ್ದಾಡಬೇಕು. ಅಂತೆಲ್ಲಾ ಅನ್ನಿಸುತ್ತೆ. ಆದರೆ ನನ್ನ ಒದ್ದಾಟಕ್ಕೆ ಒಂದು ಕಾರಣ ಇದೆ. ನನ್ನ ಗುರಿ ಸಿನಿಮಾದಲ್ಲಿ ಇಲ್ಲ. ಸಿನಿಮಾ ಹೊರತಾಗಿ ಇದೆ. ಅದಕ್ಕೋಸ್ಕರ ಸಿನಿಮಾ ಮಾಡ್ತಿದ್ದೀನಿ. ಸಿನಿಮಾದಲ್ಲಿ ಗುರಿ ಇದ್ದಿದ್ದರೆ ಹಿಟ್, ಫ್ಲಾಪ್ ಬಗ್ಗೆ ಯೋಚಿಸುತ್ತಿದ್ದೆ. ಒಂದು ಸಿನಿಮಾ ಮಾಡಲು 2 ವರ್ಷ ಕಾಯಬೇಕಿರಲಿಲ್ಲ. ನನ್ನ ಪ್ರತಿ ಚಿತ್ರದಲ್ಲಿ ಏನೋ ಹೇಳಬೇಕು, ಏನೋ ಮಾಡಬೇಕು ಎಂದು ಇಷ್ಡಪಡುತ್ತೀನಿ. ಅದರಿಂದ ಏನೋ ಒಂದು ದಾರಿ ಹುಡುಕುತ್ತಿದ್ದೀನಿ. ಸಿನಿಮಾ ನನ್ನ ದಾರಿ ಅಷ್ಟೇ. ಅಂತಿಮ ಗುರಿ ಅಲ್ಲ"

ನನಗೂ ಪ್ಯಾಂಟ್ ಹಾಕಿಕೊಳ್ಳು ಗತಿ ಇರಲಿಲ್ಲ
"ನನಗೆ ಗೊತ್ತ ಇದರಿಂದ ಏನ್ ಸಾಧ್ಯ ಅಂತ. 50 ಸಾವಿರ ಜನ ಓಹ್ ಅಂತಾರೆ, ಕಿರುಚ್ತಾರೆ. ಆಮೇಲೆ ನಾನು ಉಪೇಂದ್ರ ಅಷ್ಟೆ. ಇದೇ ಶರ್ಟ್, ಪ್ಯಾಂಟ್ ಹಾಕಬೇಕು. ಬೇರೆ ಏನು ಮಾಡಲು ಸಾಧ್ಯವಿಲ್ಲ. ನನಗೆ ಬೇಕಾಗಿರುವುದು ಈ ಪ್ರೀತಿ. ಈ ಗುಂಗು. ಇದರಿಂದ ನಾನು ಏನಾದರೂ ಮಾಡಬೇಕು. ಮಾಡಿದರೆ ವ್ಯವಸ್ಥಿತವಾಗಿ ಮಾಡಬೇಕು. ನಿಮ್ಮ ಕಣ್ಣಿಗೆ ಮಣ್ಣು ಎರಚುವುದು ಸುಲಭ. ಆದರೆ ನಾನು ಅದನ್ನು ಮಾಡಲ್ಲ. ನನ್ನ ಆತ್ಮಕ್ಕೆ ನಾನು ಸರಿ ಇದ್ದರೆ ಸಾಕು. ಅದಕ್ಕೆ ಕರೆಕ್ಟ್ ಇದ್ದೀನಿ, ನಾನು ಇರ್ತೀನಿ ನಾನು. ಇಲ್ಲಿ ಎಷ್ಟು ಜನ ಬಡವರಿದ್ದೀರಾ. ನಾನು ಕೂಡ ಬಡವ. ಒಂದು ಪ್ಯಾಂಟ್ ಹಾಕಲು ನನಗೂ ಗತಿ ಇರಲಿಲ್ಲ. ನಾನು ಕೂಡ ಊಟಕ್ಕಾಗಿ, 5-10 ರೂಪಾಯಿಗಾಗಿ ಒದ್ದಾಡಿದ್ದೀನಿ. ಅದಕ್ಕೆ 5 ಕೋಟಿ ಕೊಡ್ತೀನಿ ಅಂದರೂ ನಾನು ಯಾವುದೇ ಚಿತ್ರಕ್ಕೂ ಸಹಿ ಹಾಕ್ತಿಲ್ಲ. ನನಗೆ ಬೇಕಾಗಿರುವುದು ಜನರ ಪ್ರೀತಿ, ಅದಕ್ಕೆ ನಾನು ಕಷ್ಟಪಡ್ತೀನಿ. ಎಲ್ಲರೂ ಕೇಳ್ತಾರೆ 2 ವರ್ಷಕ್ಕೆ ಒಂದು ಸಿನಿಮಾ ಯಾಕೆ ಮಾಡಲ್ಲ ಸರ್, ಬೇಡ. ನೀವು ನನ್ನ ಮರಯೋದಿಲ್ಲ ಎಂದು ಗೊತ್ತು. ಯಾವಾಗ ಮರೀತಾರೆ ಅಂದರೆ ನಾನು ದುಡ್ಡಿಗೆ ಆಸೆ ಬಿದ್ದು ಸಿನಿಮಾ ಮಾಡಿದ್ದಾಗ ಮರೀತಿರಾ" ಎಂದು ಅಂದೇ ತಮ್ಮ ರಾಜಕೀಯದ ಕನಸಿನ ಬಗ್ಗೆ ಉಪೇಂದ್ರ ಮಾತನಾಡಿದ್ದರು.

ಅವತ್ತು ತಟ್ಟೆ ಹಿಡಿದ್ರೆ ಆತ ಊಟ ಹಾಕಲಿಲ್ಲ
ಇನ್ನು 'ಸೂಪರ್' ಸಿನಿಮಾ ರಿಲೀಸ್ ಸಮಯದಲ್ಲಿ ಉಪೇಂದ್ರ ತೆಲುಗು ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದರು. ಆ ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ನೀವು ಬಹಳ ಕಷ್ಟಪಟ್ಟೆ ಮೇಲೆ ಬಂದಿದ್ದೀರಾ ಎಂದು ಕೇಳಿದ್ದೀವಿ ಎಂದು ನಿರೂಪಕಿ ಹೇಳಿದಾಗ "ಇಲ್ಲ ನಾನು ಇಷ್ಟಪಟ್ಟು ಮೇಲೆ ಬಂದಿದ್ದೇನೆ. ಝೀರೋ ಇಂದ ಶುರು ಮಾಡಿದೆ. ನಾನು ಕಳೆದುಕೊಳ್ಳು ಏನು ಇರಲಿಲ್ಲ. ಅಂದರೆ ಏನೇ ಬಂದರೂ ಪ್ಲಸ್ ನನಗೆ. ಅದು ಬಹಳ ಅದೃಷ್ಟ ನನಗೆ. ನಾನು ಒಮ್ಮೆ ಸಹ ನಿರ್ದೇಶಕನಾಗಿದ್ದಾಗ ಶೂಟಿಂಗ್ಗೆ ಹೋಗಿದ್ದೆ. ನಾನು ತಟ್ಟೆ ಎತ್ತಿಕೊಂಡು ಹೋಗಿ ಪ್ರೊಡಕ್ಷನ್ ಬಾಯ್ ಮುಂದೆ ಹಿಡಿದೆ. ಆತ ಏಯ್ ಹೋಗೋ ಊಟ ಇಲ್ಲ ಅಂದ. ಅದೇ ಪ್ರೊಡಕ್ಷನ್ ಬಾಯ್, ನಾನು ಹೀರೊ ಆದಮೇಲೆ ನನ್ನ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಾನು ಆಗ ಅವರಿಗೆ ಅದೇ ರೆಸ್ಪೆಕ್ಟ್ ಕೊಟ್ಟೆ. ಯಾಕಂದ್ರೆ ಅಂದು ನನ್ನ ಪರಿಸ್ಥಿತಿ ಹಾಗಿತ್ತು. ಅದಕ್ಕೆ ಆತ ಆ ರೀತಿ ಹೇಳಿದ್ದ. ಅದು ಅವನ ತಪ್ಪಲ್ಲ. ನೀನು ಅಂದು ಹಾಗೆ ಮಾಡ್ಡೆ ಅಂತ ನಾನು ಈಗ ಮಾಡ್ತೀನಿ ಅನ್ನೋದು ತಪ್ಪಾಗುತ್ತದೆ".

'ಅನಂತನ ಅವಾಂತರ' ಚಿತ್ರದಲ್ಲಿ ಏನಾಗಿತ್ತು ಅಂದ್ರೆ?
"ನನ್ನ ಮೊದಲ ಚಿತ್ರದಲ್ಲಿ ಟೈಟಲ್ ಕಾರ್ಡ್ ಬರಲಿಲ್ಲ. ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಆ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಬೇರೆ ಎಲ್ಲಾ ಸಹ ನಿರ್ದೇಶಕರುಗಳು ಇದ್ದರು. ನಾನು ನಿರ್ದೇಶಕರಿಗೆ ಬಹಳ ಆಪ್ತ ಎಂದು ಎಲ್ಲ ಅಂದುಕೊಂಡಿದ್ದರು. ಪ್ರೊಫೆಷನಲ್ ಜೆಸಲಿ ಅಂತಾರಲ್ಲ ಅದು ಇತ್ತು. ಎಲ್ಲರ ಟೈಟಲ್ ಹಾಕಿದ್ರು, ನನ್ನದು ಹಾಕಿರಲಿಲ್ಲ. ನಾನು ಆ ಚಿತ್ರಕ್ಕೆ ಹಾಡು ಬರೆದಿದ್ದು, ಪುಟ್ಟ ಪಾತ್ರ ಮಾಡಿದ್ದೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. ಆದರೂ ಹೆಸರು ಹಾಕಿಲಿಲ್ಲ. ಒಳಗೆ ಹೇಳಬೇಕು ಅನ್ನಿಸ್ತಿತ್ತು. ಹೆಸರು ಹಾಕಿ ಅಂತ. ಆದರೆ ನನ್ನ ಹೆಸರು ಯಾಕೆ. ಉಪೇಂದ್ರ ಯಾರಿಗೆ ಗೊತ್ತು ಅಂದುಕೊಂಡಿದ್ದೆ. ಯೂಸ್ಲೆಸ್ ಅನ್ಕೊಂಡೆ. ಆದರೆ ಈ ವಿಚಾರ ನಿರ್ದೇಶಕರಿಗೆ ಗೊತ್ತಾಗಿ ನನಗೆ ಪ್ರತ್ಯೇಕವಾಗಿ ಒಂದು ಕಾರ್ಡ್ ಟೈಟಲ್ ಬಿತ್ತು. ನಾನು ಬೇಡ ಅಂದುಕೊಂಡಿದ್ದಕ್ಕೆ ಪ್ರತ್ಯೇಕವಾಗಿ ಕಾರ್ಡ್ ಸಿಕ್ತು" ಅಂದರೆ ಸಿಗಬೇಕು ಅಂತ ಇದ್ದರೆ ಸಿಕ್ಕೇಸಿಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.


Click it and Unblock the Notifications











