'ಕೆಪಿಜೆಪಿ' ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಅವರಲ್ಲ, ಮತ್ಯಾರು?
ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕಾರಣದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಸ್ವತಂತ್ರ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಅಕ್ಟೋಬರ್ 31 ರಂದು ತಮ್ಮ ಪಕ್ಷದ ಹೆಸರನ್ನ ಅಧಿಕೃತವಾಗಿ ಜನರ ಮುಂದೆ ಇಟ್ಟರು.
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)' ಉಪ್ಪಿಯ ಹೊಸ ಪಕ್ಷವಾಗಿ ಹೊರಹೊಮ್ಮಿದೆ. ಅಂದ್ಹಾಗೆ, 'ಕೆಪಿಜೆಪಿ' ಉಪೇಂದ್ರ ಅವರು ಹುಟ್ಟಿಹಾಕಿರುವ ಹೊಸ ಪಕ್ಷವೆಂದು ಅನೇಕರು ಅಂದುಕೊಂಡಿದ್ದಾರೆ. ವಾಸ್ತವ ಏನಪ್ಪಾ ಅಂದ್ರೆ, ಇದು ಉಪೇಂದ್ರ ಅವರು ಕಟ್ಟಿರುವ ಪಕ್ಷವಲ್ಲ. ಈ ಪಕ್ಷಕ್ಕೆ ಉಪೇಂದ್ರ ಸಾರಥಿಯಾಗಲಿದ್ದಾರೆ ಎನ್ನುವುದು ಮಾತ್ರ ವಿಶೇಷ.
ಹಾಗಿದ್ರೆ, 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)'ದ ಸಂಸ್ಥಾಪಕ ಯಾರು? ಈ ಪಕ್ಷ ಯಾವಾಗ ಸ್ಥಾಪನೆ ಆಯಿತು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)' ಸಂಸ್ಥಾಪಕ ಮಹೇಶ್ ಗೌಡ. ಕಾರ್ಖಾನೆಯೊಂದರ ಮಾಲೀಕರಾಗಿರುವ ಮಹೇಶ್ ಗೌಡ ಅವರು ಈ ಪಕ್ಷವನ್ನ ನೋಂದಣಿ ಮಾಡಿಸಿದ್ದಾರೆ. ಅಧಿಕೃತವಾಗಿ ಈ ಪಕ್ಷದ ಸಂಸ್ಥಾಪಕರು ಇವರೇ.

2015ರಲ್ಲಿ ಸ್ಥಾಪನೆಯಾದ ಕೆಪಿಜೆಪಿ ಪಕ್ಷ
ದಾಖಲೆಗಳ ಪ್ರಕಾರ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)' 2015ರಲ್ಲಿ ನೋಂದಾಣಿ ಆಗಿದೆ. 2015 ರಲ್ಲಿ ನಡೆದ ಬಿ.ಬಿ.ಎಂ.ಪಿ ಚುನಾವಣೆ ನಡೆದ ನಂತರ ಈ ಪಕ್ಷದ ಹೆಸರು ರಿಜಿಸ್ಟಾರ್ ಮಾಡಿಸಲಾಗಿದೆ. ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಅವರ ಪತ್ನಿ ಹೆಗ್ಗನಹಳ್ಳಿ ವಾರ್ಡ್ ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಪಕ್ಷಕ್ಕೆ ಸಾರಥಿಯಾದ ಉಪೇಂದ್ರ
ಈಗ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ)' ಸಾರಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಮೂಲಕ ಉಪ್ಪಿ ರಾಜಕಾರಣಕ್ಕೆ 'ಕೆಪಿಜೆಪಿ' ಕೈ ಜೋಡಿಸಿದೆ.

ಕೆಪಿಜೆಪಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ಕಾರಣವೇನು?
ಉಪೇಂದ್ರ ಅವರು ತಮ್ಮದೇ ಆದ ಉದ್ದೇಶ, ಗುರಿಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದ್ದರು. ಈ ವೇಳೆ ಉಪ್ಪಿ ಅವರ ಸಿದ್ದಾಂತವನ್ನ ಹೊಂದಿದ್ದ ಕೆಪಿಜೆಪಿ ಪಕ್ಷದ ಕಾರ್ಯಕರ್ತರು ಉಪ್ಪಿ ಜೊತೆ ಚರ್ಚಿಸಿ, ಪಕ್ಷವನ್ನ ಮುನ್ನಡೆಸಲು ಹೇಳಿದ್ದಾರೆ. ಮತ್ತೊಂದೆಡೆ ಚುನಾವಣೆಗೆ 6 ತಿಂಗಳು ಮಾತ್ರ ಬಾಕಿಯಿದ್ದು, ಉಪೇಂದ್ರ ಅವರಿಗೆ ಪಕ್ಷದ ನೋಂದಾಣಿ ಹಾಗೂ ಚಿಹ್ನೆ ಪಡೆಯುವ ಕೆಲಸ ವಿಳಂಬವಾಗುವ ನಿರೀಕ್ಷೆ ಇತ್ತು. ಹೀಗಾಗಿ, ಸಿದ್ಧಾಂತಗಳ ಹೊಂದಾಣಿಕೆಯಿಂದ ಪಕ್ಷದ ವಿಚಾರದಲ್ಲೂ ಉಪ್ಪಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಪಕ್ಷದ ಗೌರವಾಧ್ಯಕ್ಷ ಉಪೇಂದ್ರ
ಸದ್ಯ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿ ಮಹೇಶ್ ಗೌಡ ಅವರು ಕಾರ್ಯನಿರ್ವಹಸಲಿದ್ದು, ಈಗ ಉಪೇಂದ್ರ ಅವರು ಗೌರವ ಅಧ್ಯಕ್ಷರಾಗಿ ಪಕ್ಷವನ್ನ ಮುನ್ನಡೆಸಲಿದ್ದಾರೆ. ಇಲ್ಲಿ ಯಾವುದೇ ಲಿಖಿತ ರೂಪದ ವ್ಯವಹಾರ ನಡೆದಿಲ್ಲ. ನಂಬಿಕೆ ಮೇಲೆ ಪಕ್ಷದ ವಿಚಾರದಲ್ಲೂ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಪಕ್ಷದಲ್ಲಿ ಯಾರಿಗೆ ಯಾವ ಸ್ಥಾನ?
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಗೌರವ ಅಧ್ಯಕ್ಷರಾಗಿ ಉಪೇಂದ್ರ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಪ್ಪಿ ಸಹೋದರ ಸುಧೀರ್ ಅವರು ಕೂಡ ಪಕ್ಷದ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಪಕ್ಷದ ಖಜಾಂಚಿಯಾಗಿದ್ದಾರೆ ಎಂಬ ಮಾಹಿತಿಯನ್ನ ಸ್ವತಃ ಮಹೇಶ್ ಗೌಡ ಅವರೇ ತಿಳಿಸಿದ್ದಾರೆ.


Click it and Unblock the Notifications











