ಮಂಡ್ಯ ಎಲೆಕ್ಷನ್ ಬಗ್ಗೆ ಕೇಳಿದ್ದಕ್ಕೆ ಉಪೇಂದ್ರ ಹೇಳೋದೆ ಬೇರೆ
ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಆದ್ರೆ, ಕರ್ನಾಟಕದ ಪಾಲಿಗೆ ಮಂಡ್ಯ ಕ್ಷೇತ್ರವೇ ಅತಿ ಸೂಕ್ಷ್ಮವಾದ ಕ್ಷೇತ್ರ ಎನಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಮಂಡ್ಯ ಅಖಾಡ ಬಿಸಿ ಮುಟ್ಟಿಸಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಭಾರಿ ಪೈಪೋಟಿ ನೀಡುತ್ತಿದ್ದಾರೆ.
ಸುಮಲತಾಗಾಗಿ ದರ್ಶನ್, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಅಂತಹ ಕಲಾವಿದರು ಪ್ರಚಾರ ಮಾಡ್ತಿರೋದು ಸ್ಯಾಂಡಲ್ ವುಡ್ ಇಂಡಸ್ಟ್ರಿಗೂ ಬಿಸಿ ತಟ್ಟಿದೆ. ಹಾಗಾಗಿ, ಎಲ್ಲೇ ಹೋದ್ರು ಬಂದ್ರು ಮಂಡ್ಯ ಎಲೆಕ್ಷನ್ ಬಗ್ಗೆ ನೀವೇನು ಹೇಳ್ತೀರಾ ಎಂಬ ಪ್ರಶ್ನೆಗಳು ಸಿನಿಮಾ ನಟರಿಗೆ, ರಾಜಕೀಯ ನಾಯಕರಿಗೆ ಎದುರಾಗುತ್ತಿದೆ.
ಈ ಬಗ್ಗೆ ನಟ ಉಪೇಂದ್ರ ಅವರನ್ನ ಕೇಳಿದ್ರೆ ಬೇರೇಯದ್ದೇ ಹೇಳ್ತಾರೆ. ಇಂದು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನ ಅಧಿಕೃತವಾಗಿ ಘೋಷಣೆ ಮಾಡಿದ ಉಪೇಂದ್ರ, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತೀನಿ ಎಂದರು.

ಇದೇ ವೇಳೆ ಮಂಡ್ಯ ಚುನಾವಣೆ ಬಗ್ಗೆ ಏನ್ ಹೇಳ್ತೀರಾ ಅಂದಿದ್ದಕ್ಕೆ, 'ಎಲೆಕ್ಷನ್ ಎಲ್ಲ ಕಡೆಯೂ ನಡೆಯುತ್ತಿದೆ, ಬರಿ ಮಂಡ್ಯ ಮಾತ್ರವಲ್ಲ ಬಿಡಿ' ಎಂದರು. ದರ್ಶನ್, ಯಶ್, ಸುಮಲತಾ ಪ್ರಚಾರ ಮಾಡ್ತಾರೆ, ನಿಮ್ಮ ಅಭ್ಯರ್ಥಿಯೂ ಅಲ್ಲಿದ್ದಾರೆ, ಎಂದು ಕೇಳಿದ್ದಕ್ಕೆ ''ವಿಚಾರಗಳಿಗೆ ಎಲ್ಲಿ ಬೆಲೆ ಸಿಗುತ್ತೋ ಅಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ. ನಾವು ಮಾತಾಡಬೇಕಾಗಿರುವುದು ಬೇಕಾದಷ್ಟಿದೆ'' ಎಂದು ಪ್ರತಿಕ್ರಿಯಿಸಿದರು.
ಏಪ್ರಿಲ್ 1 ರಿಂದ ಉಪೇಂದ್ರ ಅವರು ರಾಜ್ಯಾದ್ಯಂತ ಪ್ರಚಾರ ಮಾಡಲಿದ್ದಾರೆ. ಎಲ್ಲಾ 28 ಕ್ಷೇತ್ರದಲ್ಲೂ ಯುಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವುದು ಮತ್ತು ಇನ್ನಿತರ ತಯಾರಿ ಮಾಡುವ ಕೆಲಸ ಹೆಚ್ಚಿದ್ದರಿಂದ ತಾವು ಸ್ಪರ್ಧೆ ಮಾಡಿಲ್ಲ ಎಂದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











