Upendra: "ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ" ಎನ್ನುವ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಆರಂಭಿಸಿದ ಪ್ರಜಾಕೀಯಕ್ಕೆ 6 ವರ್ಷಗಳ ಸಂಭ್ರಮ. 2017, ಆಗಸ್ಟ್ 12ರಂದು ಉಪ್ಪಿ ಪ್ರಜಾಕೀಯಕ್ಕೆ ಬುನಾದಿ ಹಾಕಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಪಕ್ಷ ಸ್ಪರ್ಧಿಸಿತ್ತು. ಇನ್ನು ಆಗಸ್ಟ್ 12ರಂದು ಪ್ರಜಾಕೀಯ ದಿನ ಎಂದು ರಿಯಲ್ ಸ್ಟಾರ್ ಹೇಳಿದ್ದಾರೆ. ಇದೇ ಸಂಭ್ರಮದಲ್ಲಿ ಸೋಶಿಯಲ್ ಮೀಡಿಯಾ ಲೈವ್ ಬಂದು ಉಪ್ಪಿ ಮಾತನಾಡಿದ್ದರು.
ಉತ್ತಮ ಪ್ರಜಾಕೀಯ ಪಕ್ಷವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗಬೇಕು? ಪಕ್ಷದ ರೂಪುರೇಷೆ ಕಾರ್ಯಚಟುವಟಿಕೆ ಹೇಗಿರಬೇಕು? ಎನ್ನುವುದರ ಬಗ್ಗೆ ಜನರ ಜೊತೆ ಚರ್ಚಿಸಲು ನಿನ್ನೆ(ಆಗಸ್ಟ್ 12) ಉಪೇಂದ್ರ ಇನ್ಸ್ಟಾ, ಫೇಸ್ಬುಕ್ ಲೈವ್ ಬಂದಿದ್ದರು. ಈ ವೇಳೆ ಮಾತನಾಡುತ್ತಾ 'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಎಂದು ಹೇಳಿದ್ದರು. ದಲಿತ ಸಮುದಾಯವನ್ನು ಅವಮಾನ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ದೀಪು ಗೌಡ ಎಂಬುವವರು ಉಪೇಂದ್ರ ಮಾತನಾಡಿದ್ದ ವೀಡಿಯೋ ತುಣುಕನ್ನು ಶೇರ್ ಮಾಡಿ "ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ:: ಉಪೇಂದ್ರ (ಪ್ರಜಾಕೀಯ). "ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು "ಹೊಲ್ಗೇರಿ"ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ..??" ಎಂದು ಬರೆದುಕೊಂಡಿದ್ದರು.
ಇನ್ನು ಕರ್ನಾಟಕ ರಾಜ್ಯ ಭೀಮ್ ಆರ್ಮಿ ಅಧ್ಯಕ್ಷರಾದ ರಾಜಗೋಪಾಲ್. ಡಿ ಪ್ರತಿಕ್ರಿಯಿಸಿ, ಉಪೇಂದ್ರ ಅವರೇ, "ಊರು ಅಂದರೆ ಹೋಲಗೇರಿ ಇರುತ್ತೆ" ಎಂದು ಹೇಳುವುದರ ಮೂಲಕ ನೀವು ದಲಿತರನ್ನು ಅಪಮಾನಿಸುತ್ತಾ ಇದ್ದಿರಿ... ಕೂಡಲೇ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೋಳ್ಳಬೇಕು ಮತ್ತೆ ಈ ದಲಿತ ಸಮಾಜಕ್ಕೆ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ದ ಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳಿಂದ ಹೋರಾಟ ಮಾಡಬೇಕಾಗುತ್ತದೆ ಮತ್ತೆ ದೌರ್ಜನ್ಯ ಕಾಯ್ದೆ ಅಡಿ ನಿಮ್ಮ ಮೇಲೆ ಕೇಸು ದಾಖಲಿಸಬೇಕಾಗುತ್ತದೆ." ಎಂದು ಫೇಸ್ಬುಕ್ನಲ್ಲಿ ಬರೆದಿದ್ದರು.
ಇನ್ನು ತಮ್ಮ ಹೇಳಿಕೆಗೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ "ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ" ಎಂದು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











