ಬಜೆಟ್ ಮ್ಯಾಟರ್ ಅಲ್ಲ.. ಕನ್ನಡ ಸಿನಿಮಾ ಪವರ್ ಬಗ್ಗೆ ಉಪೇಂದ್ರ ಖಡಕ್ ಮಾತು ವೈರಲ್
ರಿಯಲ್ ಸ್ಟಾರ್ ಉಪೇಂದ್ರ ಸದ್ಯ ತಮ್ಮ ಹೊಸ ತೆಲುಗು ಚಿತ್ರ 'ಆಂಧ್ರಕಿಂಗ್ ತಾಲೂಕ' ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಂಬಂಧ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕೇಳಿದ ಪ್ರಶ್ನೆಗೆ ಉಪೇಂದ್ರ ಉತ್ತರ ಈಗ ವೈರಲ್ ಆಗಿದೆ. ಕನ್ನಡ ಸಿನಿಪ್ರೇಮಿಗಳು ಜೈಕಾರ ಹಾಕುತ್ತಿದ್ದಾರೆ.
ತೆಲುಗು ಸಂದರ್ಶಕರೊಬ್ಬರು ಕನ್ನಡ ಸಿನಿಮಾಗಳ ಬಜೆಟ್ ಬಗ್ಗೆ ವಿವಾದಾತ್ಮಕ ಪ್ರಶ್ನೆಯನ್ನು ಮುಂದಿಟ್ಟರು. "ಒಂದು ಕಾಲದಲ್ಲಿ ತೆಲುಗು ಹೀರೋಗೆ ಕೊಡುವ ಸಂಭಾವನೆಯಲ್ಲಿ ಒಂದು ಕನ್ನಡ ಸಿನಿಮಾ ನಿರ್ಮಾಣ ಮಾಡಿಬಿಡಬಹುದಿತ್ತು. 'ಕೆಜಿಎಫ್', 'ಕಾಂತಾರ' ಬಳಿಕ ಬದಲಾಗಿದೆ ಎಂದು ನಿರೂಪಕ ಕನ್ನಡ ಚಿತ್ರರಂಗವನ್ನು ಕೀಳಾಗಿ ನೋಡುವ ಪ್ರಯತ್ನ ಮಾಡಿದ್ದರು.

ರಿಯಲ್ ಸ್ಟಾರ್ ಉಪೇಂದ್ರ ಇದಕ್ಕೆ ತಕ್ಷಣವೇ ಖಡಕ್ ಉತ್ತರ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಉದ್ಯಮದ ಸಾಮರ್ಥ್ಯದ ಬಗ್ಗೆ ಸಂದರ್ಶಕನಿಗೆ ಶಾಕ್ ಕೊಟ್ಟಿದ್ದು ಉಪೇಂದ್ರ ಮಾತುಗಳು ಈಗ ಸದ್ದು ಮಾಡುತ್ತಿವೆ. ಸಂದರ್ಶಕ ಇಂದಿನ ಪ್ಯಾನ್ ಇಂಡಿಯಾ ಯುಗಕ್ಕೆ ಹೋಲಿಸಿ ಪ್ರಶ್ನೆ ಕೇಳಿದ್ದರು. ಆಗ ಉಪೇಂದ್ರ ಈ ವಾದವನ್ನು ನೇರವಾಗಿ ತಿರಸ್ಕರಿಸಿದ್ದಾರೆ. "ಈಗಿನ ಜನರೇಶನ್ ಆ ರೀತಿ ಹೇಳುತ್ತದೆ. ಆದರೆ ಆ ಕಾಲದಲ್ಲಿ ಕೂಡ ಕನ್ನಡದಲ್ಲಿ ಸೆನ್ಸೇಷನ್ ಸಿನಿಮಾಗಳನ್ನು ಮಾಡಲಾಗಿದೆ" ಎಂದು ಉಪೇಂದ್ರ ತಿರುಗೇಟು ನೀಡಿದ್ದಾರೆ.
ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಷ್ ಅವರ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದ್ದವು. 'ಸನಾದಿ ಅಪ್ಪಣ್ಣ'ದಂತಹ ಸಿನಿಮಾಗಳು ಆ ಕಾಲದಲ್ಲಿ ದೊಡ್ಡ ದಾಖಲೆ ಮಾಡಿದ್ದವು ಎಂದು ಉಪ್ಪಿ ಉದಾಹರಣೆ ನೀಡಿದರು. ಬ್ಲಾಕ್ಬಸ್ಟರ್ ಆಗಿದ್ದರೂ ಬಜೆಟ್ ಚಿಕ್ಕದಿತ್ತು ಎಂಬ ಸಂದರ್ಶಕನ ಕೌಂಟರ್ಗೆ ಮತ್ತೆ ಉಪೇಂದ್ರ ಉತ್ತರ ಶಾಕ್ ನೀಡಿತು. ಅಂದಿನ ಕಾಲದಲ್ಲಿ 'ರಾಜಾ ಕುಳ್ಳ' ಹೆಸರಿನ ಸಿನಿಮಾ ಬಂತು. ಆಗಿನ ಕಾಲದಲ್ಲೇ ಆ ಚಿತ್ರವನ್ನು ಸಿಂಗಾಪುರದಲ್ಲಿ ಶೂಟ್ ಮಾಡಲಾಗಿತ್ತು ಎಂದು ಉಪೇಂದ್ರ ವಿವರಿಸಿದ್ದಾರೆ.
ಆ ಸಮಯದಲ್ಲೂ ಕನ್ನಡದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಇದ್ದವು. ಆದರೆ ಈ ವಿಷಯ ಪರಭಾಷೆಯವರಿಗೆ ತಿಳಿದಿರಲಿಲ್ಲ ಅಷ್ಟೇ ಎಂದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. ಕನ್ನಡದ ಅದ್ಧೂರಿ ಸಿನಿಮಾಗಳು ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದ್ದವು. ಹಾಗಾಗಿ ಈ ಇತಿಹಾಸ ಹೊರಗಿನವರಿಗೆ ಗೊತ್ತಾಗಲಿಲ್ಲ ಎಂದು ಉಪ್ಪಿ ಹೇಳಿದರು.
ಇದೇ ವಿಚಾರವಾಗಿ ಉಪೇಂದ್ರ ಮತ್ತೊಂದು ಪ್ರಮುಖ ಅಂಶವನ್ನು ಹೇಳಿದ್ದಾರೆ. ಈಗಿನ ಜನರೇಶನ್ 'ಕೆಜಿಎಫ್' ಮತ್ತು 'ಕಾಂತಾರ'ದಂತಹ ಚಿತ್ರಗಳನ್ನು ದೊಡ್ಡ ಬಜೆಟ್ ಸಿನಿಮಾ ಎನ್ನುತ್ತಾರೆ. ಇದು ಅವರ ತಪ್ಪಲ್ಲ. ಹಿಂದಿನ ಅದ್ಭುತಗಳ ಬಗ್ಗೆ ಅವರಿಗೆ ಮಾಹಿತಿ ಇಲ್ಲ. 'ಕೆಜಿಎಫ್' ಮತ್ತು 'ಕಾಂತಾರ'ಕ್ಕೂ ಮೊದಲೇ ದೊಡ್ಡ ದೊಡ್ಡ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗಿದೆ. ಪುಟ್ಟಣ್ಣ ಕಣಗಾಲ್, ರವಿಚಂದ್ರನ್ ಭಾರೀ ಸಿನಿಮಾಗಳನ್ನು ನಿರ್ಮಿಸಿದ್ದರು ಎಂದುನಿರೂಪಕನಿಗೆ ಮನವರಿಕೆ ಮಾಡಿಕೊಟ್ಟದ್ದಾರೆ.
ದೊಡ್ಡ ಬಜೆಟ್ ಸಿನಿಮಾಗಳು ಮೊದಲು ಬರುತ್ತಿದ್ದವು ನಿಜ. ಆದರೆ ಮಧ್ಯದಲ್ಲಿ ಗ್ಯಾಪ್ ಇತ್ತು ಎಂದು ಸಂದರ್ಶಕ ಮತ್ತೆ ಕೇಳಿದ್ದಾರೆ. ಆಗ ಉಪೇಂದ್ರ ಮತ್ತೆ ಖಡಕ್ ಆಗಿ ಉತ್ತರಿಸಿದ್ದು "ಇಲ್ಲ, ಆ ಸಿನಿಮಾಗಳು ತೆಲುಗು ರಾಜ್ಯಗಳಿಗೆ ಬಂದಿರಲಿಲ್ಲ ಅಷ್ಟೇ. ಹಾಗಾಗಿ ನಿಮಗೆ ಗೊತ್ತಾಗಿಲ್ಲ" ಎಂದು ಹೇಳಿದರು. ಉಪೇಂದ್ರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











