ಪುನೀತ್ ರಾಜ್ಕುಮಾರ್ಗೆ ದೊಡ್ಡ ಯೋಜನೆ ಹಾಕಿಕೊಂಡಿದ್ದರು ಉಪೇಂದ್ರ
ಪುನೀತ್ ರಾಜ್ಕುಮಾರ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಭರ ಸಿಡಿಲಿನಂತೆ ಬಡಿದಿದೆ. ಪುನೀತ್ ಅಜಾತ ಶತ್ರು ಇಡೀಯ ಚಿತ್ರರಂಗದಲ್ಲಿ ಅವರಿಗೆ ಯಾರೂ ವಿರೋಧಿಗಳೇ ಇರಲಿಲ್ಲ. ಸ್ಟಾರ್ ನಟ, ನಿರ್ದೇಶಕರೆಲ್ಲರೂ ಪುನೀತ್ಗೆ ಆತ್ಮೀಯರೆ.
ಪುನೀತ್ ಅಗಲಿಕೆಗೆ ನಟ ಸುದೀಪ್, ಗಣೇಶ್, ದರ್ಶನ್ ಇನ್ನೂ ಹಲವು ಖ್ಯಾತ ನಾಮ ನಟರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪುನೀತ್ ಜೊತೆ ಹಾಗೂ ದೊಡ್ಮನೆಯೊಂದಿಗೆ ಆತ್ಮೀಯ ಬಂಧ ಹೊಂದಿದ್ದ ಉಪೇಂದ್ರ ಸಹ ಪುನೀತ್ ಅಗಲಿಕೆ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿದ್ದು, ತಾವು ದೊಡ್ಡ ಯೋಜನೆಯೊಂದನ್ನು ಪುನೀತ್ಗಾಗಿ ಹಾಕಿಕೊಂಡಿದ್ದೆ ಆದರೆ ಅದು ಈಡೇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸ್ವತಃ ಪುನೀತ್ ರಾಜ್ಕುಮಾರ್ ಅವರಿಗೆ ಉಪೇಂದ್ರ ಎಂದರೆ ಬಹಳ ಮೆಚ್ಚುಗೆ ಅವರ ಓಂ ಸಿನಿಮಾವನ್ನು ಬಹಳ ಬಾರಿ ಪುನೀತ್ ನೋಡಿದ್ದರು, ಹಲವು ಸಂದರ್ಶಗಳಲ್ಲಿ ಅದರ ಉಲ್ಲೇಖ ಮಾಡಿದ್ದರು. ಆದರೆ ಉಪೇಂದ್ರಗೆ 'ಓಂ'ಗಿಂತಲೂ ಗಟ್ಟಿಯಾದ ವಿಷಯ ಹೊಂದಿರುವ ಸಿನಿಮಾವನ್ನು ಪುನೀತ್ಗಾಗಿ ಮಾಡುವ ಆಸೆಯಿತ್ತಂತೆ, ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.

''ಕೆಲವು ದಿನಗಳ ಹಿಂದೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಹಲವು ವಿಷಯ ನಾವು ಮಾತನಾಡಿಕೊಂಡೆವು. ಹಲವು ಆಸೆಗಳು ಅವರಿಗೆ ಇತ್ತು. ವೆಬ್ ಸರಣಿ ಮಾಡಬೇಕು ಎಂದರು. ಹಲವು ಹೊಸಬರಿಗೆ ಅವಕಾಶ ಕೊಡಬೇಕು, ಸಿನಿಮಾ ಮಾಡಿಸಬೇಕು ಎಂದರು. ತಾವು ಮಾಡುತ್ತಿರುವ ಸಿನಿಮಾಗಳ ಬಗ್ಗೆ ಹೇಳಿಕೊಂಡರು. ನಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಕೇಳಿ ಪಡೆದುಕೊಂಡರು. ನಾವು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೆವು. 'ಓಂ'ಗಿಂತಲೂ ಒಳ್ಳೆಯ ವಿಷಯವುಳ್ಳ, ಗಟ್ಟಿ ವಿಷಯವುಳ್ಳ ಸಿನಿಮಾವನ್ನು ಅವರಿಗಾಗಿ ಮಾಡಬೇಕು ಎಂಬ ಆಸೆ ನನಗಿತ್ತು. ಆದರೆ ಅದು ಆಸೆಯಾಗಿಯೇ ಉಳಿಯಿತು'' ಎಂದಿದ್ದಾರೆ ಉಪೇಂದ್ರ.
''ನಾನು ಹೈದರಾಬಾದ್ನಲ್ಲಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದೆ. ಪುನೀತ್ ಅಗಲಿಕೆಯ ಸುದ್ದಿ ಬರುವ ಕೆಲವು ಗಂಟೆಗಳ ಮುಂಚೆ ನಾನು ಪುನೀತ್ ಜೊತೆ ಮಾತನಾಡಿದ್ದೆ. ಗುರುಕಿರಣ್ ಹುಟ್ಟುಹಬ್ಬದ ಪಾರ್ಟಿಗೆ ನನ್ನ ಮಕ್ಕಳು ಹೋಗಿದ್ದರು. ಗುರುಕಿರಣ್ಗೆ ವಿಶ್ ಮಾಡಬೇಕು ವಿಡಿಯೋ ಕಾಲ್ ಮಾಡಿಕೊಡಿ ಎಂದು ಮಕ್ಕಳಿಗೆ ಹೇಳಿದ್ದೆ. ಅವರು ಕಾಲ್ ಮಾಡಿಕೊಟ್ಟರು. ಅಲ್ಲಿಯೇ ಪುನೀತ್ ಇದ್ದಾರೆ ಎಂದು ಅವರಿಗೂ ಫೋನ್ ನೀಡಿದರು. ನಾನು ಕೆಲ ಸಮಯ ಮಾತನಾಡಿ ಕಾಲ್ ಕಟ್ ಮಾಡಿದೆ. ಆದರೆ ಬೆಳಿಗ್ಗೆ ಸೆಟ್ಗೆ ಹೋದ ಕೂಡಲೇ ಪುನೀತ್ ನಿಧನದ ಸುದ್ದಿ ಬಂತು ನನಗೆ ನಿಂತ ನೆಲವೇ ಕುಸಿದಂತಾಯಿತು'' ಎಂದು ಈಗಲೂ ದಿಗ್ಭ್ರಮೆಯಿಂದಲೇ ಹೇಳಿದರು ಉಪೇಂದ್ರ.
''ಹೈದರಾಬಾದ್ನಿಂದ ಶೀಘ್ರವೇ ಹೊರಟು ಬೆಂಗಳೂರಿಗೆ ಬಂದೆ. ಸುದೀಪ್ ಸಹ ಜೊತೆಗೆ ಬಂದರು. ಸದಾಶಿವನಗರ ಮನೆಗೆ ಹೋದೆವು. ಅಲ್ಲಿ ನನ್ನ ಜೀವಮಾನದಲ್ಲಿ ಮರೆಯಲಾರದ ದೃಶ್ಯ ನೋಡಿದೆ. ಅಪ್ಪುವನ್ನು ಅಲ್ಲಿ ಮಲಗಿಸಲಾಗಿತ್ತು, ಶಿವಣ್ಣ ಕಣ್ಣೀರು ಹಾಕುತ್ತಾ ನಿಂತಿದ್ದರು. ಆ ದೃಶ್ಯ ನನ್ನ ಜೀವಮಾನದಲ್ಲಿ ಮರೆಯುವುದಿಲ್ಲ. ಕೆಲವು ಗಂಟೆಗಳ ಹಿಂದೆಯಷ್ಟೆ ಮಾತನಾಡಿದ್ದ ವ್ಯಕ್ತಿ ಈಗಿಲ್ಲವೆಂದರೆ ಹೇಗಾಗಬೇಡ. ಗುರುಕಿರಣ್ಗೆ ಹೇಗಾಗಬೇಡ, ನನ್ನ ಮಕ್ಕಳಿಗೆ ಹೇಗನ್ನಿಸಿರಬೇಡ'' ಎಂದು ಮತ್ತೆ ಮರುಗಿದರು ಉಪೇಂದ್ರ.

ಮೊದಲ ಬಾರಿಗೆ ಅಪ್ಪುವನ್ನು ನೋಡಿದ ಘಳಿಗೆಯನ್ನು ನೆನಪಿಸಿಕೊಂಡ ಉಪೇಂದ್ರ, ''ಒಮ್ಮೆ ಒಂದು ಪಾರ್ಟಿಗೆ ಹೋಗಿದ್ದೆ. ಅಲ್ಲಿ ಶಿವಣ್ಣ ಇದ್ದರು. ನನ್ನನ್ನು ಕರೆದು ಯಾವಾಗಲೂ ನನ್ನ ಡ್ಯಾನ್ಸ್ ಸೂಪರ್ ಅನ್ನುತ್ತೀಯಲ್ಲ ಅಪ್ಪು ಡ್ಯಾನ್ಸ್ ಮಾಡುವುದು ನೋಡಿದ್ದೀಯ? ಎಂದು ಕೇಳಿದರು. ಅಲ್ಲಿಯೇ ಇದ್ದ ಅಪ್ಪುಗೆ ಡ್ಯಾನ್ಸ್ ಮಾಡು ಎಂದರು. ಕೂಡಲೇ ಅಪ್ಪು ವೇದಿಕೆ ಏರಿ ಡ್ಯಾನ್ಸ್ ಮಾಡಿದ ನನಗೆ ಆಶ್ಚರ್ಯ ಆಗಿಬಿಡ್ತು. ಏನಪ್ಪ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ ಎಂದು. ಅಂದೇ ಅನಿಸಿತ್ತು. ಈತ ಸ್ಟಾರ್ ಆಗುತ್ತಾನೆ ಎಂದು. ನನ್ನ ಅದೃಷ್ಟಕ್ಕೆ ಅಪ್ಪುವಿನ ಮೊದಲ ಸಿನಿಮಾಕ್ಕೆ ಹಾಡು ಬರೆಯುವ ಅದೃಷ್ಟ ನನಗೆ ದೊರಕಿತು'' ಎಂದರು ಉಪೇಂದ್ರ.


Click it and Unblock the Notifications











