2040ರಲ್ಲಿ ಪ್ರಪಂಚ ಹೇಗಿರುತ್ತೆ? ಜಾತಿ, ಮೊಬೈಲ್, ಹಸಿವು, ಯುದ್ಧ; 'UI' ಕರಾಳ ಸತ್ಯ ಬಿಚ್ಚಿಟ್ಟ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ 'UI' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇದಕ್ಕೆ 'UI' ವಾರ್ನರ್ ಎಂದು ಹೆಸರು ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ತಮ್ಮದೇ ಶೈಲಿಯಲ್ಲಿ ಮತ್ತೊಂದು ವಿಭಿನ್ನ ಕಥೆ ಹೇಳೊಕೆ ಬರ್ತಿದ್ದಾರೆ.
14 ವರ್ಷ ಹಿಂದೆ ಬಂದಿದ್ದ 'ಸೂಪರ್' ಚಿತ್ರದಲ್ಲಿ ಭವಿಷ್ಯದ ಭಾರತ ಹೇಗಿದ್ದರೆ ಚಂದ, ಹೇಗಿರಬೇಕು? ಅದಕ್ಕೆ ಏನೆಲ್ಲಾ ಬದಲಾವಣೆ ಆಗಬೇಕು? ಎನ್ನುವ ಬಗ್ಗೆ ಉಪೇಂದ್ರ ಕಥೆ ಮಾಡಿದ್ದರು. ರಿಯಲ್ ಸ್ಟಾರ್ ವಿಭಿನ್ನ ಆಲೋಚನೆಗೆ ಸಿನಿರಸಿಕರು ತಲೆದೂಗಿದ್ದರು. ಆದರೆ ಈ ಬಾರಿ ಅದಕ್ಕೆ ವಿರುದ್ಧ ಎನ್ನುವಂತಹ ಕತೆಯನ್ನು 'UI' ಚಿತ್ರದಲ್ಲಿ ಹೇಳಲು ಹೊರಟಿರುವುದು ಗೊತ್ತಾಗುತ್ತಿದೆ.

ಬಹಳ ವರ್ಷಗಳ ಬಳಿಕ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಎಂದಿನಂತೆ ಮಾಮೂಲಿ ಕಥೆಯನ್ನು ಬಿಟ್ಟು ತಮ್ಮ ವಿಚಿತ್ರ ಆಲೋಚನೆಯನ್ನು ತೆರೆಗೆ ತರಲು ಮುಂದಾಗಿದ್ದಾರೆ. ಜಗತ್ತು ವೇಗವಾಗಿ ಬೆಳೆಯುವ ಹಾದಿಯಲ್ಲಿ ಏನೆಲ್ಲಾ ಅನರ್ಥಗಳಾಗುತ್ತಿದೆ. ಮನುಷ್ಯನಿಗೆ ನಿಜವಾಗಿ ಏನು ಬೇಕು? ಆದರೆ ಆತ ಮಾಡುತ್ತಿರುವುದು ಏನು? ಮುಂದೆ ಇದರಿಂದ ಏನೆಲ್ಲಾ ಆಗಬಹುದು ಎನ್ನುವುದನ್ನು ತಮ್ಮದೇ ಶೈಲಿಯಲ್ಲಿ ಹೇಳಲು ಬರ್ತಿದ್ದಾರೆ.
'ಸೂಪರ್' ಚಿತ್ರದಲ್ಲಿ ಉಪೇಂದ್ರ 2030ರ ತಮ್ಮ ಕನಸಿನ ಭಾರತವನ್ನು ತೆರೆದಿಟ್ಟಿದ್ದರು. ಆದರೆ 'UI' ಚಿತ್ರದಲ್ಲಿ 2040ರ ವರ್ಷದಲ್ಲಿ ದೇಶ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ಕಥೆ ಮಾಡಿದ್ದಾರೆ. ಪ್ರಪಂಚದ ನಾಯಕರು ನಮಗೆ, ನನಗೆ ಈ ಪ್ರಪಂಚವನ್ನು ಗ್ಲೋಬಲ್ ವಾರ್ಮಿಂಗ್, ಕೋವಿಡ್ 19, ಹಣದುಬ್ಬರ, ಎಐ ತಂತ್ರಜ್ಞಾನ, ನಿರೋದ್ಯೋಗ, ಯುದ್ಧಗಳ ಜೊತೆ ಕೊಟ್ಟಿದ್ದಾರೆ. ಹಾಗಿದ್ರೆ 2040ರಲ್ಲಿ ಪ್ರಪಂಚ ಹೇಗಿರುತ್ತದೆ ಗೊತ್ತಾ? ಎಂದು ಪ್ರಶ್ನೆ ಹಾಕಿದ್ದಾರೆ.
ನಾವು ನೀವು ಎಲ್ಲರೂ ನಿಜವಾಗಿ ಬೇಕಾದ್ದನ್ನು ಬಿಟ್ಟು ಬೇಡದೇ ಇರುವು ವಿಷಯಗಳ ಹಿಂದೆ ಬಿದ್ದಿದ್ದೇವೆ, ಇದರಿಂದ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು 'ಯುಐ' ಚಿತ್ರದಲ್ಲಿ ಉಪೇಂದ್ರ ಹೇಳಲು ಬರ್ತಿದ್ದಾರೆ. ಇನ್ನು 15 ವರ್ಷಗಳಲ್ಲಿ ಪ್ರಪಂಚ ವಿನಾಶದತ್ತು ಹೊರಳುತ್ತದೆ. ನಾವು ನೀವು ಇನ್ನು ಜಾತಿ, ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೀವಿ ಎಂದು ಉಪ್ಪಿ ಚರ್ಚೆ ಹುಟ್ಟಾಕಿದ್ದಾರೆ.
ಮುಂದೆ ಯುದ್ಧ ಸೇರಿದಂತೆ ವಿವಿಧ ವಿಪತ್ತುಗಳಿಂದ ಪ್ರಪಂಚ ಬರಡಾಗುತ್ತದೆ. ಅಳಿದುಳಿದ ಅವವೇಶಗಳ ಪ್ರಪಂಚದಲ್ಲಿ ಉಳಿದ ಅಲ್ಪಸ್ವಲ್ಪ ಜನ ಕೂಡ ಹಸಿವಿನಿಂದ ಬಳಲುತ್ತಾರೆ. ಆಗ ಕೂಡ ಜಾತಿ ಹೆಸರಿನಲ್ಲಿ ಕಿತ್ತಾಡುತ್ತಾರೆ, ಮೊಬೈಲ್ನಲ್ಲಿ ಜನ ಮುಳುಗಿ ಹೋಗುತ್ತಾರೆ. ಆಗ ಅಧಿಕಾರದಲ್ಲಿರುವವರು ಅಸಹಾಯರನ್ನು ಮೆಟ್ಟಿ ಮೆರೆಯುತ್ತಾರೆ ಎಂದು ಟೀಸರ್ನಲ್ಲಿ ತೋರಿಸಲಾಗಿದೆ.
"ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ" ಎನ್ನುವ ಒಂದೇ ಒಂದು ಡೈಲಾಗ್ ಹೊಡೆದು ಟೀಸಸ್ ಮುಗಿಸಿದ್ದಾರೆ. ನಾವು ನೀವು ಬದಲಾಗದೇ ಇದ್ದರೆ ಅಧಿಕಾರದಲ್ಲಿ ಇರುವವರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇರುತ್ತಾರೆ ಎನ್ನುವುದನ್ನು ಈ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚಿದೆ. ಅದೇ ಕಾರಣಕ್ಕೆ ಸಿನಿಮಾ ರಿಲೀಸ್ ತಡವಾಯಿತು.
ಇತ್ತೀಚೆಗೆ ನಿಧನರಾದ ನಿರ್ದೇಶಕ ಗುರುಪ್ರಸಾದ್ ನಟನೆಯ ಕೊನೆಯ ಸಿನಿಮಾ 'ಯುಐ'. ಟೀಸರ್ನಲ್ಲಿ ಅವರ ಪಾತ್ರ ಹೈಲೆಟ್ ಆಗಿದೆ. ಉಪೇಂದ್ರ ಮತ್ತೊಮ್ಮೆ ತಮ್ಮ ಡಿಫ್ರೆಂಟ್ ಕಾರ್ಡ್ ಬಳಸಿ 'ಯುಐ' ಆಟ ಆಡೋಕೆ ಬರ್ತಿದ್ದಾರೆ. ಅದು ಟೀಸರ್ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ 'ಯುಐ' ಚಿತ್ರ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾತ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಉಪೇಂದ್ರ ಜೊತೆ ಸಾಧುಕೋಕಿಲ, ಆರ್ಮುಗ ರವಿಶಂಕರ್ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











