ತರ್ಲೆ ನನ್ ಮಕ್ಳು ಚಿತ್ರದಲ್ಲೂ ಉಪೇಂದ್ರ ನೆರಳು
ಬುಧವಾರವಷ್ಟೇ (ಸೆ.18) ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ಬಗೆಗಿನ ಸುದ್ದಿಗಳು ಈಗ ದಿನ ಬೆಳಗಾದರೆ ಕೇಳಿಬರುತ್ತಿವೆ. ಈಗ ಲೇಟೆಸ್ಟ್ ಸಮಾಚಾರ ಏನೆಂದರೆ 'ತರ್ಲೆ ನನ್ ಮಕ್ಳು' ಚಿತ್ರದಲ್ಲೂ ಉಪೇಂದ್ರ ನೆರಳಿರುತ್ತದೆ.
1992 ರಲ್ಲಿ 'ತರ್ಲೆ ನನ್ ಮಗ' ಚಿತ್ರ ಉಪೇಂದ್ರ ನಿರ್ದೇಶನದಲ್ಲಿ ಹಾಗೂ ಜಗ್ಗೇಶ್ ಅವರ ನಟನೆಯಲ್ಲಿ ಮೂಡಿಬಂದಿತ್ತು. ಈಗ ಅದು 'ತರ್ಲೆ ನನ್ ಮಕ್ಳು' ಆಗಿದೆ. ಚಿತ್ರದ ಮೊದಲ ವಿಶೇಷ ಅಂದರೆ ಉಪೇಂದ್ರ ಹಾಗು ಜಗ್ಗೇಶ್ ಅವರು ಈ ಚಿತ್ರಕ್ಕೆ ತಲಾ ಒಂದು ಹಾಡನ್ನು ಹೇಳುತ್ತಿದ್ದಾರೆ. ಇದೆ ಅಲ್ಲದೆ ಐವರು ನಿರ್ದೇಶಕರು ಬರೆದ ಹಾಡನ್ನು ಐವರು ನಾಯಕರು ಹಾಡು ಹೇಳುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಕೆಲವು ದಿವಸಗಳ ಹಿಂದೆ ಈ ಚಿತ್ರದ ಹಾಡುಗಳ ಸಂಯೋಜನೆಗೆ ಚಾಲನೆ ಸಿಕ್ಕಿತ್ತು. ಅಂದಿನ ಮುಹೂರ್ತ ಕಾರ್ಯಕ್ರಮದಲ್ಲಿ ನವರಸ ನಾಯಕ ಜಗ್ಗೇಶ್, ನಿರ್ದೇಶಕ ನಟ ಪ್ರೇಮ್, ಲವ್ಲಿ ಸ್ಟಾರ್ ಪ್ರೇಂಕುಮಾರ್, ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ಅಜಯ್ ರಾವ್, ಕೋಮಲ್ ಕುಮಾರ್, ವಾಣಿಜ್ಯಮಂಡಲಿ ಅಧ್ಯಕ್ಷ ಬಿ ವಿಜಯಕುಮಾರ್, ಶಂಕರ್ ಹಾಗೂ ಇತರರು ಪಾಲ್ಗೊಂಡಿದ್ದರು.ನಿರ್ದೇಶಕರಾದ ವಿ ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಉಪೇಂದ್ರ , ಜಗ್ಗೇಶ್, ನೆನಪಿರಲಿ ಪ್ರೇಂಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಲಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರ ಪುತ್ರ ಯತಿರಾಜ್, ನಾಗಶೇಖರ್, ಹೊಸ ಹುಡುಗ ಪ್ರಜ್ವಲ್ ಹಾಗೂ ಅಂಜನಾ ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಅಂದಹಾಗೆ ಹೊಸ ಕನಸುಗಳನ್ನು ಹೊತ್ತು ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತ್ತಿದ್ದಾರೆ.
ಸಚ್ಚಿದಾನಂದ್ ಮತ್ತು ಸುರೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರುಗಳು. ಈ ಚಿತ್ರದ ಮುಖಾಂತರ ಡಿಜೆ ಸೂರ್ಯವಂಶಿ ಸಂಗೀತ ನಿರ್ದೇಶನಕ್ಕೆ ಆಗಮಿಸಿದ್ದಾರೆ. ಜೇರಾಲ್ಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. (ಏಜೆನ್ಸೀಸ್)


Click it and Unblock the Notifications












