ಸೂಪರ್ ಸ್ಟಾರ್ ರಾಜಕೀಯ ಎಂಟ್ರಿ ಬಗ್ಗೆ ರಿಯಲ್ ಸ್ಟಾರ್ ಪ್ರತಿಕ್ರಿಯೆ
ನಟ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಇಂದು ಘೋಷಣೆ ಮಾಡಿದ್ದಾರೆ. ರಾಜಕೀಯಕ್ಕೆ ಕಾಲಿಟ್ಟಿರುವ ರಜನಿಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಈಗ ರಿಯಲ್ ಸ್ಟಾರ್ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ಕೂಡ ವಿಶ್ ಮಾಡಿದ್ದಾರೆ.
ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಜನಿಕಾಂತ್ ಅವರಿಗೆ ಶುಭ ಕೋರಿದ್ದಾರೆ. ''ಸುಸ್ವಾಗತ ರಜನಿ ಸರ್... ನಮ್ಮ ಎಲ್ಲ ಕನಸುಗಳನ್ನು ನೆರವೇರಿಸೋಣ. ತಮಿಳುನಾಡಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಬದಲಾವಣೆ ಆಗಲಿ ಎಂದು ನಾನು ಆಶಿಸುತ್ತೇನೆ. ಬೆಸ್ಟ್ ಆಫ್ ಲಕ್'' ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಉಪೇಂದ್ರ ಕೂಡ ಸಿನಿಮಾ ಬಿಟ್ಟು ಪ್ರಜಾಕೀಯ ಶುರು ಮಾಡಿದ್ದಾರೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಲು, ಪಾರದರ್ಶಕ ಸರ್ಕಾರ ಬರುವ ಉದ್ದೇಶದಿಂದ ಉಪ್ಪಿ ಹೊಸ ಪಕ್ಷ ಶುರು ಮಾಡಿದರು. ಇತ್ತ ರಜನಿಕಾಂತ್ ಕೂಡ ಅದೇ ರೀತಿ ತಮಿಳುನಾಡಿನಲ್ಲಿ ರಾಜಕೀಯ ಶುರು ಮಾಡಿದ್ದಾರೆ.
ಉಪೇಂದ್ರ ಮತ್ತು ರಜನಿ ಇಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಉಪ್ಪಿ ನಿರ್ದೇಶನದ 'ಸೂಪರ್' ಸಿನಿಮಾ ನೋಡಿದ ರಜನಿ ಅವರನ್ನು ಇಂಡಿಯಾದ ದೊಡ್ಡ ನಿರ್ದೇಶಕರಲ್ಲಿ ಒಬ್ಬರು ಎಂದು ಹೊಗಳಿದ್ದರು. ಅದರ ಜೊತೆಗೆ ಉಪೇಂದ್ರ ನಿರ್ದೇಶನದಲ್ಲಿ ರಜನಿಕಾಂತ್ ನಟನೆ ಮಾಡುತ್ತಾರೆ ಎಂಬ ಸುದ್ದಿ ಕೂಡ ಇತ್ತು. ಆದರೆ ಸದ್ಯ ಈ ಇಬ್ಬರು ಸೂಪರ್ ಸ್ಟಾರ್ ಗಳು ರಿಯಲ್ ರಾಜಕೀಯಕ್ಕೆ ಧುಮುಕಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.


Click it and Unblock the Notifications











