ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರ
ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ಡೌನ್ ಹಿನ್ನೆಲೆ ಶೂಟಿಂಗ್ ರದ್ದಾಗಿದೆ. ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಕೆಲಸವಿಲ್ಲದೇ ಜೀವನ ಸಾಗಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Recommended Video
ಚಿತ್ರರಂಗಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಅಥವಾ ನೆರವು ಸಿಕ್ಕಿಲ್ಲ. ಇದೀಗ, ನಟ-ನಿರ್ದೇಶಕ ಉಪೇಂದ್ರ ಅವರು ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿರುವ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ ''ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ. ನಿಮ್ಮ ಉಪ್ಪಿ'' ಎಂದು ತಿಳಿಸಿದ್ದಾರೆ.
ಕೇವಲ ಸಿನಿಮಾ ಕಲಾವಿದರಿಗೆ ಮಾತ್ರವಲ್ಲ, ಕಿರುತೆರೆ ಕಾರ್ಮಿಕರಿಗೂ ಉಪೇಂದ್ರ ಸಹಾಯಹಸ್ತ ಚಾಚಿದ್ದಾರೆ. ''ಎಸ್. ಕೆ. ಸ್ಟೀಲ್ಸ್ ಕಂಪನಿಯ ವತಿಯಿಂದ ಐದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕರೋನದಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರು ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ. ಸಧ್ಯದಲ್ಲೇ ಸಂಘದ ಪದಾದಿಕಾರಿಗಳನ್ನು ಸಂಪರ್ಕಿಸುತ್ತೇನೆ'' ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಾರ್ಮಿಕರ ಸಂಘ, ಸಾಹಸ ಕಲಾವಿದರ ಸಂಘ, ನೃತ್ಯ ಸಂಯೋಜಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿವೆ.
ಉಪೇಂದ್ರ ಅವರನ್ನು ಹೊರತು ಪಡಿಸಿ ಚಿತ್ರರಂಗದಿಂದ ಇನ್ನು ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ನಟ ಭುವನ್ ಪೊನ್ನಣ್ಣ, ಕಿರುತೆರೆ ನಟ ಕಿರಣ್ ರಾಜ್, ಜಿಮ್ ರವಿ ಸೇರಿದಂತೆ ಹಲವರು ಹಲವು ರೀತಿಯಲ್ಲಿ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.


Click it and Unblock the Notifications











