ಯಶ್ ಇಂಡಿಯಾ ಬಾಕ್ಸ್ ಆಫೀಸ್ ಗೆದ್ರು, ಕಿಚ್ಚ ವಿಶ್ವದ ಬಾಕ್ಸ್ ಆಫೀಸ್ ಗೆಲ್ತಾರೆ: ಉಪ್ಪಿ ಭವಿಷ್ಯ
''ಯಶ್ ಹೇಳಿದ್ರು ಕನ್ನಡಿಗರು ಯಾರಿಗೂ ಕಮ್ಮಿ ಇಲ್ಲ ಅಂತ, ಅವರು ಇಂಡಿಯಾದ ಬಾಕ್ಸ್ ಆಫೀಸ್ ಹೊಡೆದ್ರು, ನಾವು ವರ್ಲ್ಡ್ ಬಾಕ್ಸ್ ಆಫೀಸ್ ಹೊಡೀತೀವಿ'' ಎಂದು ಉಪೇಂದ್ರ ಭವಿಷ್ಯ ನುಡಿದರು.
ನಗರದ ಲುಲು ಮಾಲ್ನಲ್ಲಿ ಇಂದು (ಜುಲೈ 26) ಅದ್ಧೂರಿಯಾಗಿ ಆಯೋಜಿಸಿದ್ದ 'ವಿಕ್ರಾಂತ್ ರೋಣ' ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
''ಈ ಸಿನಿಮಾದ ಹಲವು ತುಣುಕುಗಳನ್ನು ನಾನು ಈಗಾಗಲೇ ನೋಡಿದ್ದೇನೆ. ಸುದೀಪ್ ಹಾಗೂ ನಿರ್ದೇಶಕರು ನನಗೆ ಕೆಲವು ದೃಶ್ಯಗಳನ್ನು ಈಗಾಗಲೇ ತೋರಿಸಿದ್ದಾರೆ. ಸಿನಿಮಾ ಅತ್ಯದ್ಭುತವಾಗಿದೆ. ನೋಡಿದ ಪ್ರೇಕ್ಷಕರು ಥ್ರಿಲ್ ಆಗುವುದು ಖಂಡಿತ'' ಎಂದರು ಉಪೇಂದ್ರ.
''ನಿರ್ದೇಶಕರ ಮೂರು ವರ್ಷದ ಶ್ರಮ ಇದು' ಎಂದ ಉಪೇಂದ್ರ ನಿರ್ದೇಶಕ ಅನುಪ್ ಭಂಡಾರಿಗೆ ಧನ್ಯವಾದ ಅರ್ಪಿಸಿದರು. ''ಇದು ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ. ಇದು ಬರೀಯ 'ವಿಕ್ರಾಂತ್ ರೋಣ' ಅಲ್ಲ ಇದು 'ವಿಕ್ಟರಿ ರೋಣ' ಸಿನಿಮಾ ಈಗಾಗಲೇ ಗೆದ್ದಾಗಿದೆ, ಚಿತ್ರತಂಡದವರು ಬೇಗ ಪಾರ್ಟಿ ಕೊಡಲಿ'' ಎಂದರು.

'ವಿಕ್ರಾಂತ್ ರೋಣ' ಸಿನಿಮಾಕ್ಕೆ ಕಳೆ ಬಂದಿದೆ: ಉಪೇಂದ್ರ
''ಕೆಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಸುದೀಪ್ ಜೊತೆಗೆ ಕೂತಿದ್ದಾಗ ಹೇಳಿದ್ದೇನೆ, ಏನಿದು ವಾತಾವರಣ ಡಲ್ ಆಗಿದೆ ಎಂದು. ಆದರೆ ಈ ಸಿನಿಮಾದ ಅಬ್ಬರ ಬೇರೆ ಮಾದರಿಯಲ್ಲಿದೆ. ಇಲ್ಲಿ ಗೆಲುವಿನ ಕಳೆ ಇದೆ. ಇಲ್ಲಿ ವೇದಿಕೆ ನೋಡಿಯೇ ಸುದೀಪ್ಗೆ ಹೇಳಿದೆ, ನಿಮ್ಮ ಸಿನಿಮಾಕ್ಕೆ ಕಳೆ ಬಂದಿದೆ. ಸಿನಿಮಾ ಕಾರ್ಯಕ್ರಮವೆಂದರೆ ಅಭಿಮಾನಿಗಳು ತುಂಬಿರಬೇಕು, ಕೂಗಾಟ ಇರಬೇಕು, ಜಯಕಾರಗಳಿರಬೇಕು ಅದು ಮಜಾ ಕೊಡುತ್ತೆ, ಅದು ಸಿನಿಮಾ ಸಂಭ್ರಮಿಸುವ ರೀತಿ'' ಎಂದರು ಉಪೇಂದ್ರ.

''ಮೊದಲ ದಿನ ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಿಸುತ್ತೇನೆ''
''ನಾನು ಈ ಸಿನಿಮಾವನ್ನು ಜನರೊಟ್ಟಿಗೆ ಕೂತು ನೋಡುವ ನಿರ್ಧಾರ ಮಾಡಿದ್ದೇನೆ. ಪ್ರೀಮಿಯರ್ ಶೋ ಆಯೋಜಿಸುವಂತೆ ಸುದೀಪ್ಗೆ ಕೇಳಿದ್ದೆ. ಆದರೆ ಅಭಿಮಾನಿಗಳ ಜೋಶ್ ನೋಡಿ ನಾನೂ ಸಹ ಅವರೊಟ್ಟಿಗೆ ಕೂತು ಮೊದಲ ದಿನವೇ ಸಿನಿಮಾ ನೋಡುವ ಮನಸ್ಸಾಗಿದೆ. ಮೊದಲ ಸಿನಿಮಾ ಟಿಕೆಟ್ ಖರೀದಿಸಿ ಅಭಿಮಾನಿಗಳೊಟ್ಟಿಗೆ ಕೂತು ಸಿನಿಮಾ ನೋಡಿ ಕರೆ ಮಾಡಿ ನನ್ನ ಅಭಿಪ್ರಾಯ ತಿಳಿಸುವೆ'' ಎಂದು ನಿರ್ದೇಶಕ ಅನುಪ್ ಭಂಡಾರಿಗೆ ಹೇಳಿದರು ಉಪೇಂದ್ರ.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್
ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿದ್ದ ಸುದೀಪ್, ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಒಂದೊಳ್ಳೆ ಸಿನಿಮಾ ಅನುಭವವನ್ನು ಅಭಿಮಾನಿಗಳಿಗಾಗಿ ಹೊತ್ತು ತಂದಿರುವುದಾಗಿ ಹೇಳಿದರು. ಈ ಸಿನಿಮಾಕ್ಕೆ ಸಹಕಾರ ನೀಡಿದ ನಿರ್ಮಾಪಕ ಜಾಕ್ ಮಂಜು, ಸಹ ನಿರ್ಮಾಪಕ ಅಲಂಕಾರ್ ಪಾಂಡ್ಯನ್, ನಿರ್ದೇಶಕ ಅನುಪ್ ಭಂಡಾರಿ, ತಂತ್ರಜ್ಞರಾದ ಅಜನೀಶ್ ಲೋಕನಾಥ್, ಜಾನಿ ಮಾಸ್ಟರ್ ಇನ್ನೂ ಹಲವರಿಗೆ ವಿಶೇಷವಾಗಿ ಧನ್ಯವಾದ ಹೇಳಿದರು ಸುದೀಪ್.

ಜುಲೈ 28ಕ್ಕೆ ಸಿನಿಮಾ ಬಿಡುಗಡೆ
'ವಿಕ್ರಾಂತ್ ರೋಣ' ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ, ನಟ ನಿರೂಪ್ ಭಂಡಾರಿ, ನಟಿ ನೀತಾ ಅಶೋಕ್, ನಿರ್ಮಾಪಕ ಜಾಕ್ ಮಂಜು, ಅಲಂಕಾರ್ ಪಾಂಡ್ಯನ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಡ್ಯಾನ್ಸ್ ಮಾಸ್ಟರ್ ಜಾನಿ ಮಾಸ್ಟರ್, ಸುದೀಪ್ ಕುಟುಂಬ ವರ್ಗ ಇನ್ನೂ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 'ವಿಕ್ರಾಂತ್ ರೋಣ' ಸಿನಿಮಾವು ಇದೇ ಜುಲೈ 28 ಕ್ಕೆ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ವಿಶೇಷ.


Click it and Unblock the Notifications











