'ಡೆವಿಲ್', 'ಮಾರ್ಟಿನ್', 'ಕೆಡಿ' ಅಪ್ಡೇಟ್ ಬಳಿಕ ಧುತ್ತನೆ ಎದ್ದು ನಿಂತ್ರು 'ಭೀಮ', 'ಕಲ್ಕಿ'
5 ತಿಂಗಳಿಂದ ಸಂಕಷ್ಟ ಎದುರಿಸುತ್ತಿದ್ದ ಕನ್ನಡ ಚಿತ್ರರಂಗ ಮತ್ತೆ ಎದ್ದು ನಿಲ್ಲುವ ತವಕದಲ್ಲಿದೆ. ಐಪಿಎಲ್ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಲ್ಲಿಗೆ ಚಿತ್ರರಂಗಕ್ಕೆ ಎದುರಾಗಿದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಇದರ ಬೆನ್ನಲ್ಲೇ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ.
ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರದೇ ಬಹಳ ಸಮಯವಾಯಿತು. ಕೊನೆಯದಾಗಿ ದರ್ಶನ್ ನಟನೆಯ 'ಕಾಟೇರ' ತೆರೆಗಪ್ಪಳಿಸಿ ಧೂಳೆಬ್ಬಿಸಿತ್ತು. 'ಮಾರ್ಟಿನ್', 'ಡೆವಿಲ್', 'ಯುಐ', 'ಭೀಮ', 'ಮ್ಯಾಕ್ಸ್', 'ಕೆಡಿ' ಹೀಗೆ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿವೆ. ಇದರಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಇವೆ. ಈಗಾಗಲೇ 3 ಸಿನಿಮಾಗಳ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ದರ್ಶನ್ ನಟನೆಯ 'ಡೆವಿಲ್' ಚಿತ್ರವನ್ನು ಕ್ರಿಸ್ಮಸ್ ಸಂಭ್ರಮದಲ್ಲಿ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ದಸರಾ ಸಡಗರದಲ್ಲಿ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ತೆರೆಗಪ್ಪಳಿಸಲಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಡಿಸೆಂಬರ್ ತಿಂಗಳಲ್ಲೇ ಪ್ರೇಮ್- ಧ್ರುವ ಜೋಡಿಯ 'ಕೆಡಿ' ಸಿನಿಮಾ ಕೂಡ ಬರಲಿದೆ.
3 ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ಇನ್ನುಳಿದ ಸಿನಿಮಾಗಳ ಕಥೆಯೇನು? ಎಂದು ಸಿನಿರಸಿಕರು ಕೇಳಲು ಆರಂಭಿಸಿದ್ದರು. ಇನ್ನು 6 ತಿಂಗಳಲ್ಲಿ 10ಕ್ಕೂ ಅಧಿಕ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿವೆ. ಶಿವಣ್ಣ- ನರ್ತನ್ ಕಾಂಬಿನೇಷನ್ 'ಬೈರತಿ ರಣಗಲ್' ಚಿತ್ರದ ಆಗಸ್ಟ್ 15ಕ್ಕೆ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಅಲ್ಲಿಗೆ ಉಳಿದಿರುವುದು 'ಯುಐ', 'ಭೀಮ', 'ಮ್ಯಾಕ್ಸ್' ಸಿನಿಮಾಗಳು ಮಾತ್ರ.
ಇದೀಗ 'ಭೀಮ' ಹಾಗೂ 'ಯುಐ' ಸಿನಿಮಾಗಳ ಬಗ್ಗೆ ಅಪ್ಡೇಟ್ ಸಿಗುವ ಸುಳಿವು ಸಿಕ್ಕಿದೆ. ಆದಷ್ಟು ಬೇಗ 'ಭೀಮ' ಸಿನಿಮಾ ಅನೌನ್ಸ್ಮೆಂಟ್ ಎಂದು ಹೇಳಲಾಗುತ್ತಿದೆ. ಜೂನ್ 10ಕ್ಕೆ 'ಯುಐ' ಸಿನಿಮಾ ಅಪ್ಡೇಟ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಎಲೆಕ್ಷನ್ ಭರಾಟೆ ಮುಗಿಯುತ್ತಿರುವುದರಿಂದ ಶೀಘ್ರದಲ್ಲೇ ಎರಡೂ ಚಿತ್ರಗಳ ರಿಲೀಸ್ ಡೇಟ್ ಘೋಷಣೆ ಆಗಲಿದೆ.

ಬಹಳ ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಬಂದು ಹೈಪ್ ಕ್ರಿಯೇಟ್ ಮಾಡಿದೆ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಇತ್ತೀಚೆಗೆ ಉಪ್ಪಿ, ಅಜನೀಶ್ ವಿದೇಶಕ್ಕೆ ತೆರಳಿ ಚಿತ್ರದ ರೀ-ರೆಕಾರ್ಡಿಂಗ್ ಮಾಡಿಕೊಂಡು ಬಂದಿದ್ದರು.
ಜುಲೈನಲ್ಲೇ 'ಯುಐ' ಚಿತ್ರ ತೆರೆಗಪ್ಪಳಿಸುವ ಸಾಧ್ಯತೆಯಿದೆ. ತಪ್ಪಿದರೆ ಸೆಪ್ಟೆಂಬರ್ನಲ್ಲಿ ರಿಲೀಸ್ ಫಿಕ್ಸ್ ಎನ್ನಲಾಗ್ತಿದೆ. ಇನ್ನು ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ. ಈ ಹಿಂದೆ 'ಸಲಗ' ಸಿನಿಮಾ ನಿರ್ದೇಶಿಸಿ, ನಟಿಸಿ ವಿಜಿ ಗೆದ್ದಿದ್ದರು. ಹಾಗಾಗಿ ಈ ಸಿನಿಮಾ ಕೂಡ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.
ಮತ್ತೊಮ್ಮೆ ದೇಹ ದಂಡಿಸಿ ವಿಜಯ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಟೀಸರ್ ಜೊತೆಗೆ 2 ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದೆ. ಕಳೆದ ವರ್ಷವೇ 'ಭೀಮ'ನ ಆರ್ಭಟ ಶುರುವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗ್ತಿದೆ.


Click it and Unblock the Notifications











