ದೆಹಲಿಯಲ್ಲಿ ಉಪೇಂದ್ರ : 'ಉತ್ತಮ ಪ್ರಜಾಕೀಯ ಪಾರ್ಟಿ' ನೋಂದಣಿ ಪ್ರಕ್ರಿಯೆ
ನಟ ಉಪೇಂದ್ರ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಥೆ ಮಾಡುತ್ತಿಲ್ಲ ಎಂದು ಕೆಲ ದಿನಗಳ ಹಿಂದೆ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದರು. ಕೆ.ಪಿ.ಜೆ.ಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) ಪಕ್ಷದಿಂದ ಹೊರ ಬಂದ ಮೇಲೆ ಇದೇ ಚುನಾವಣೆಗೆ ಹೊಸ ಪಕ್ಷವನ್ನು ಕಟ್ಟಲು ಸಮಯ ಸಾಕಾಗುತ್ತಿಲ್ಲ ಎಂದು ಉಪ್ಪಿ ತಿಳಿಸಿದ್ದರು. ಇದೀಗ ತಮ್ಮ ಹೊಸ ಪಕ್ಷದ ನೋಂದಣೆ ಕೆಲಸದಲ್ಲಿ ಉಪೇಂದ್ರ ತೋಡಗಿದ್ದಾರೆ.
ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹೊಸ ಪಕ್ಷದ ಬಗ್ಗೆ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗಕ್ಕೆ ಹೋಗಿರುವ ಉಪೇಂದ್ರ ಹೊಸ ಪಕ್ಷವನ್ನು ನೋಂದಣಿ ಮಾಡುತ್ತಿದ್ದಾರೆ. 'ಉತ್ತಮ ಪ್ರಜಾಕೀಯ ಪಾರ್ಟಿ' ಹೆಸರಿನಲ್ಲಿ ತಮ್ಮ ಪಕ್ಷದ ಹೆಸರನ್ನು ಉಪೇಂದ್ರ ನೋಂದಣಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಪಕ್ಷದವರೂ ಪ್ರಚಾರ, ನಾಮಪತ್ರ ಸಲ್ಲಿಕೆ, ಟಿಕೆಟ್, ಬಿ ಫಾರಂ ಅಂತ ಬಿಜಿ ಇದ್ದರೆ, ಉಪೇಂದ್ರ ತಮ್ಮ ಹೊಸ ಪಕ್ಷಕ್ಕೆ ನಂದಿ ಹಾಡಿದ್ದಾರೆ.
ಕೆ.ಪಿ.ಜೆ.ಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) ಪಕ್ಷಕ್ಕೆ ಸೇರುವ ಮುಂಚೆ ಉಪೇಂದ್ರ ಪ್ರಜಾಕೀಯ ಶುರು ಮಾಡುವುದಾಗಿ ಘೋಷಣೆ ಮಾಡಿದಾಗಲೇ 'ಉತ್ತಮ ಪ್ರಜಾಕೀಯ ಪಾರ್ಟಿ' (UPP) ಎಂಬ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು. ಅವರ ಅನೇಕ ಅಭಿಮಾನಿಗಳು ಈ ಹೆಸರನ್ನು ಇಷ್ಟ ಪಟ್ಟಿದ್ದರು. ಆದರೆ ಉಪೇಂದ್ರ ತಡ ಮಾಡದೆ ಕೆ.ಪಿ.ಜೆ.ಪಿ ಪಕ್ಷ ಸೇರಿದ್ದರು. ಆದರೆ ಈಗ ಅಂತಿಮವಾಗಿ ಉಪ್ಪಿ ಮತ್ತೆ ಉತ್ತಮ ಪ್ರಜಾಕೀಯ ಪಾರ್ಟಿ' ಹೆಸರಿನ ಪಕ್ಷ ಶುರು ಮಾಡಿದ್ದಾರೆ.
ಇನ್ನು ಇತ್ತೀಚಿಗಷ್ಟೆ ನಡೆದ ಪತ್ರಿಕಾ ಸಂದರ್ಶನದಲ್ಲಿ ಮಾತನಾಡಿರುವ ಉಪೇಂದ್ರ ''ನಿಜ ಹೇಳಬೇಕು ಅಂದರೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' ಎಂಬ ಹೆಸರು ನನಗೆ ಒಪ್ಪಿಗೆಯೇ ಆಗಿರಲಿಲ್ಲ. ಆ ಹೆಸರು ಸರಿಯಾಗಿ ನನ್ನ ಬಾಯಿಗೇ ಬರುತ್ತಿರಲಿಲ್ಲ'' ಎಂದು ಹೇಳಿದ್ದಾರೆ.


Click it and Unblock the Notifications











