ಉಪೇಂದ್ರ ಮನಸ್ಸಿನಲ್ಲಿ ದೊಡ್ಡದೊಂದು ಪ್ರೊಜೆಕ್ಟ್ ಇದೆ.
ಎಂಟು- ಹತ್ತು ವರ್ಷಗಳ ಹಿಂದಷ್ಟೇ ಸ್ಕಿೃಪ್ಟನ್ನು ಹಿಡಿದು ಸಿನಿಮಾ ಮಂದಿಯ ಬೆನ್ನ ಹಿಂದೆ ಸುತ್ತಿ, ಛಲ ಬಿಡದೆ ಗೆದ್ದು ಗದ್ದುಗೆ ಏರಿದ ಉಪೇಂದ್ರ ಕಣ್ಣಲ್ಲಿ ಸಾಗರದಂಥ ಕನಸಿನ ಗೂಡು ಕಟ್ಟಿದೆ. ಕಾಶೀನಾಥ್ ಕೃಪಾ ಕಟಾಕ್ಷದಿಂದ ಮೇಲಕ್ಕೆ ಬಂದ ಚೂಸಿ ಉಪ್ಪಿ ಈಗ ಚರು-ಪಾ-ಗಿ ಬದಲಾಗಿರೋದು ಇದೇ ಕಾರಣಕ್ಕೇ.
ಪತ್ರಿಕೆಗಳ ಸಂದರ್ಶನದಲ್ಲಿ ಇವರು ಹೇಳುತ್ತಿರೋದು, 'ನನಗೆ ದುಡ್ಡು ಬೇಕಿದೆ. ಕಂಡಾಪಟ್ಟೆ ದುಡ್ಡು ! ನನ್ನ ಕನಸು ನನಸಾಗಬೇಕಾದರೆ ಅದು ಬೇಕೇ ಬೇಕು. ಹಾಗಂತ ಸಿಕ್ಕ ಸಿಕ್ಕ ಚಿತ್ರಗಳನ್ನೇನೂ ನಾನು ಒಪ್ಪಿಕೊಂಡಿಲ್ಲ. ಚೂಸಿತನವನ್ನು ಗಾಳಿಗೆ ತೂರಿಲ್ಲ".
ಅಲುಗಾಡುತ್ತಿರುವ 'ಹಾಲಿವುಡ್", ನಾಗತಿ ನಿರ್ದೇಶನದ 'ಸೂಪರ್ ಸ್ಟಾರ್" ಹಾಗೂ ಧನರಾಜ್ 'ನೀರು" ಪೈಪ್ಲೈನಿನಲ್ಲಿರುವಾಗಲೇ 'ನಿಂಗ್ಯಾಕೆ" ಕೂಡ ಸೆಟ್ಟೇರಿದೆ. ಶಿಫ್ಟುಗಳಲ್ಲಿ ಕೆಲಸ ಮಾಡುತ್ತಿರುವ ಉಪ್ಪಿ ಇದ್ದಕ್ಕಿದ್ದಂತೆ ಹರೀಬರಿಯಲ್ಲಿರಲು ಏಕೈಕ ಕಾರಣ ಅವರ ಕನಸು.
ಉಪ್ಪಿ ಮೊದಲಿನಿಂದಲೂ ಕನಸುಗಳ ಜೋಡಿಸುತ್ತಾ, ಅವನ್ನು ನನಸಾಗಿಸುತ್ತಾ ಬಂದವರು. ಕಾಲೇಜಿನ ದಿನಗಳಲ್ಲೇ ಸ್ಕಿೃಪ್ಟೊಂದನ್ನು ಬರೆದು, ಅದು ತೆಲುಗಿನ ಶಿವಾ ಚಿತ್ರಕತೆಯನ್ನೇ ಹೋಲುತ್ತಿ-ದ್ದು-ದರಿಂದ ಕತೆಯನ್ನು ಟ್ವಿಸ್ಟ್ ಮಾಡಿ ಗೆಳೆಯರಿಂದ ಶಹಭಾಸ್ಗಿರಿ ಪಡೆದವರು. ನಿರ್ದೇಶಕನಾದದ್ದು, ಯಶಸ್ವಿ ನಾಯಕನಾದದ್ದು ತನ್ನದೇ ಆದ ಹೊಸ ವೇಗದಿಂದ. ಆ ದಿನಗಳಿಂದಲೂ ಉಪ್ಪಿ ಮನದಲ್ಲಿ ಮಹತ್ವಾಕಾಂಕ್ಷೆಯಾಂದನ್ನು ಕಟ್ಟುತ್ತಾ ಬಂದವರು. ಈಗ ಇದು ಹಕೀಕತ್ತಾಗಲೇಬೇಕು ಅನ್ನೋದೇ ಅವರ ಛಲ.
ಸ್ಯಾಂಡಲ್ವುಡ್ನಲ್ಲಿ ಉಪ್ಪಿಯ ಈ ಕನಸನ್ನೇ ಎನ್ಕ್ಯಾಷ್ ಮಾಡಿಕೊಳ್ಳಲು ಕ್ಯೂ ಸಿದ್ಧವಾಗುತ್ತಿದೆ. ಉಪ್ಪಿ ಕತೆಯನ್ನೇನೂ ಅವರು ಕದಿಯಲು ಸಾಧ್ಯವಿಲ್ಲ. ಉಪ್ಪಿಗೆ ದುಡ್ಡು ಬೇಕು. ಇವರಿಗೆ ಉಪ್ಪಿ ಬೇಕು. ಥೈಲಿ ತಾನೇ ತಾನಾಗೇ ತುಂಬುತ್ತದೆ ಅನ್ನೋದೇ ಲೆಕ್ಕಾಚಾರ. ಅಲ್ಲಿಗೆ ಉಪ್ಪಿ ಯೋಚನೆಯಲ್ಲಿ ತಲ್ಲೀನರಾದರೆ, ಹಿಂಡುಗಟ್ಟಲೆ ನಿರ್ದೇಶಕರು ತಮ್ಮ ಕೆಲಸ ಸುಲಭವಾಗುತ್ತದೆ ಅನ್ನುವ ಹಾಗಿಲ್ಲ. ಸೂಪರ್ಸ್ಟಾರ್, ಎಚ್ಟುಓ, ಹಾಲಿವುಡ್ ಎಲ್ಲಾ ಕಾಸಿಗಾಗಿ, ಟಚ್ಗಾಗಿ, ತಾಲೀಮಿಗಾಗಿ ಅಷ್ಟೇ. ಕನಸನ್ನು ಕೆದಕಿದರೆ, ಉಪೇಂದ್ರ 'ನಿಂಗ್ಯಾಕೆ" ಅಂದರೂ ಅಚ್ಚರಿಯಿಲ್ಲ. ಆ ಕನಸು ಯಾವುದೂ ಅಂತ ನೀವು ಅಳೆಯಬಲ್ಲಿರಾ?


Click it and Unblock the Notifications