'ಉರಿಗೌಡ- ನಂಜೇಗೌಡ' ಸಿನಿಮಾ ವಿಚಾರ: ಮುನಿರತ್ನ ಭೇಟಿಗೆ ಆದಿಚುಂಚನಗಿರಿ ಶ್ರೀ ಬುಲಾವ್: ಭೇಟಿ ರಹಸ್ಯ ಏನು?
ಟಿಪ್ಪು ಸುಲ್ತಾನ್ನನ್ನು ಕೊಂದರು ಎಂದು ಹೇಳಲಾಗುತ್ತಿರುವ ಉರಿಗೌಡ ಹಾಗೂ ನಂಜೇಗೌಡರ ಕುರಿತು ಸ್ಯಾಂಡಲ್ವುಡ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ ಫಿಲ್ಮ್ ಛೇಂಬರ್ನಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿರುವ ನಿರ್ಮಾಪಕ ಮುನಿರತ್ನ ಮೇ 18ರಂದು ಸಿನಿಮಾ ಮುಹೂರ್ತ ಮಾಡುವುದಾಗಿ ಘೋಷಿಸಿದ್ದಾರೆ. ಅಚ್ಚರಿ ಎಂದರೆ ಈ ಚಿತ್ರಕ್ಕೆ ಸಚಿವರಾದ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಚಿತ್ರಕಥೆ ಬರೆಯುತ್ತಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೊಸ ಹೊಸ ವಿಚಾರಗಳು ರಾಜಕಾರಣದಲ್ಲಿ ಚರ್ಚೆಗೆ ಬರ್ತಿವೆ. ಇತ್ತೀಚೆಗೆ ಬೆಂಗಳೂರು- ಮೈಸೂರು ಹೆದ್ದಾರಿ ಲೋಕಾರ್ಪಣೆಗೆ ಆಗಮಿಸಿದ್ದ ಪ್ರಧಾನಿಗಳ ಸ್ವಾಗತ ಕಮಾನಿಗೆ ಉರಿಗೌಡ - ನಂಜೇಗೌಡರ ಹೆಸರುಗಳನ್ನು ಇಡಲಾಗಿತ್ತು. ನಂತರ ಇದನ್ನು ತರೆವುಗೊಳಿಸಲಾಗಿತ್ತು. ಅಲ್ಲಿಂದ ಮುಂದೆ ಉರಿಗೌಡ - ನಂಜೇಗೌಡರ ಕುರಿತು ಬಿಜೆಪಿ ನಾಯಕರು ಮಾತನಾಡಲು ಆರಂಭಿಸಿದರು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಉರಿಗೌಡ - ನಂಜೇಗೌಡ ಎರಡು ಕಲ್ಪಿತ ಪಾತ್ರಗಳು ಎಂದು ಸುಖಾ ಸುಮ್ಮನೆ ಬಿಜೆಪಿ ಕಥೆ ಕಟ್ಟುತ್ತಿದೆ ಎಂದು ವಾದಿಸುತ್ತಿದ್ದಾರೆ. ಇತಿಹಾಸ ತಜ್ಞರು ಕೂಡ ಇವೆರಡು ಕಲ್ಪಿತ ಪಾತ್ರಗಳು ಎನ್ನುತ್ತಿದ್ದಾರೆ.

ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗಲೇ ಸಚಿವರಾದ ಮುನಿರತ್ನ ಉರಿಗೌಡ - ನಂಜೇಗೌಡರ ಕುರಿತು ಐತಿಹಾಸಿಕ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಫಿಲ್ಮ್ ಛೇಂಬರ್ನಲ್ಲಿ ಟೈಟಲ್ ರಿಜಿಸ್ಟರ್ ನಂತರ ಮೇ18ಕ್ಕೆ ಸಿನಿಮಾ ಮುಹೂರ್ತ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಮೇತ ಘೋಷಿಸಿದ್ದಾರೆ. ಆರ್. ಎಸ್ ಗೌಡ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಸಚಿವರಾದ ಆರ್. ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಚಿತ್ರವನ್ನು ಪ್ರೇಕ್ಷಕರಿಗೆ ಅರ್ಪಿಸಲಿದ್ದಾರೆ. 'ರಕ್ತಕಣ್ಣೀರು', 'ಕುರುಕ್ಷೇತ್ರ' ಹಲವು ಸಿನಿಮಾಗಳನ್ನು ನಿರ್ಮಿಸಿರುವ ಮುನಿರತ್ನ ತಮ್ಮದೇ ವೃಷಬಾದ್ರಿ ಪ್ರೊಡಕ್ಷನ್ ಬ್ಯಾನರ್ನಲ್ಲಿ 'ಉರಿಗೌಡ - ನಂಜೇಗೌಡ' ಟೈಟಲ್ನಲ್ಲೇ ಸಿನಿಮಾ ನಿರ್ಮಿಸುತ್ತಿದ್ದಾರೆ.
'ಉರಿಗೌಡ - ನಂಜೇಗೌಡ' ಸಿನಿಮಾ ಕುರಿತು ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ನಿರ್ಮಾಪಕರಾದ ಮುನಿರತ್ನ "ಕಾಲ್ಪನಿಕ ಕಥೆಗಳನ್ನು ಯಾರು ಹುಟ್ಟುಹಾಕುವುದಿಲ್ಲ. 1950-50ಗೂ ಹಿಂದಿನಿಂದಲೂ ಉರಿಗೌಡ್ರು, ನಂಜೇಗೌಡರ ಕುರಿತು ಲಾವಣಿ ಹಾಡುಗಳಿವೆ. ಲಾವಣಿ ಹಾಡುಗಳ ಆಧಾರದಲ್ಲಿ ಇವರಿಬ್ಬರು ಸತ್ಯ. ಮೈಸೂರು ಸಂಸ್ಥಾನದ ಪರವಾಗಿ ಕೆಲಸ ಮಾಡಿದ್ದು ನಿಜ. ಅದಕ್ಕೆ ಸಾಕ್ಷ್ಯಾಧಾರ ಇದೆ. ಅಶ್ವಥ್ ನಾರಾಯಣ ಅವರು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಿನಿಮಾ ಕುರಿತು ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿ ಆಗುವಂತೆ ಹೇಳಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಕೆಲ ಒಕ್ಕಲಿಗ ನಾಯಕರೇ ಉರಿಗೌಡ ಹಾಗೂ ನಂಜೇಗೌಡ ಕೇವಲ ಕಾಲ್ಪನಿಕ ಪಾತ್ರಗಳು ಎಂದು ಹೇಳುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ "ಬಿಜೆಪಿ ನಾಯಕರು 'ಉರಿಗೌಡ - ನಂಜೇಗೌಡ' ಎನ್ನುವ ಕಾಲ್ಪನಿಕ ಪಾತ್ರಗಳ ಕುರಿತು ಸಿನಿಮಾ ಮಾಡಲು ಹೊರಟು ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ" ಎಂದು ಹೇಳಿದ್ದಾರೆ. ಇನ್ನು ಡಾ. ಸಿ. ಎನ್ ಅಶ್ವಥ್ ನಾರಾಯಣ್ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಹಾಗಾಗಿ ನಿರ್ಮಾಪಕರಾದ ಮುನಿರತ್ನ ಆದಿಚುಂಚನಗಿರಿ ಶ್ರೀಗಳ ಭೇಟಿ ನಂತರ 'ಉರಿಗೌಡ - ನಂಜೇಗೌಡ' ಸಿನಿಮಾ ಮಾಡುವ ವಿಚಾರವನ್ನು ಕೈ ಬಿಡುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.
1750ರಿಂದ 1799ರ ವರೆಗಿನ ಕಥೆ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ. ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ ಎಂದು ತಿಳಿಸಲಾಗಿದೆ. ಅಚ್ಚರಿ ಎಂದರೆ 'ಉರಿಗೌಡ - ನಂಜೇಗೌಡ' ಚಿತ್ರಕ್ಕೆ ಸಚಿವರಾದ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಚಿತ್ರಕಥೆ ಹೆಣೆಯುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಅವರು ಸಂಶೋಧನೆ ಮಾಡುತ್ತಿದ್ದಾರೆ ಎಂದು ಮುನಿರತ್ನ ಅವರು ತಿಳಿಸಿದ್ದಾರೆ. ಒಂದ್ಕಡೆ ವಿರೋಧ ಪಕ್ಷಗಳು 'ಉರಿಗೌಡ - ನಂಜೇಗೌಡ' ಕೇವಲ ಕಾಲ್ಪನಿಕ ಪಾತ್ರಗಳು ಎಂದು ಹೇಳುತ್ತಿದ್ದರೆ ಬಿಜೆಪಿ ಮಾತ್ರ ಒಕ್ಕಲಿಗ ವೀರರು ಎಂದು ಹೇಳಿ ಅವರ ಕುರಿತು ಸಿನಿಮಾ ಮಾಡಲು ಹೊರಟಿದೆ.


Click it and Unblock the Notifications











