ಬಳಗದ ಗೆಳೆಯನಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸುತ್ತಿದೆ 'ಉಸಿರು' ತಂಡ
ಸಂಚಾರಿ ವಿಜಯ್ ಅದ್ಭುತ ನಟರಾಗಿದ್ದ ಜೊತೆಗೆ ಅತ್ಯದ್ಭುತ ವ್ಯಕ್ತಿಯಾಗಿದ್ದರು. ಸೇವೆ, ಜನಸಹಾಯಗಳಲ್ಲಿ ಸದಾ ಮುಂದಿರುತ್ತಿದ್ದರು ನಟ ಸಂಚಾರಿ ವಿಜಯ್.
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜನ ಆಮ್ಲಜನಕದ ಕೊರತೆಯಿಂದ ಒದ್ದಾಡುತ್ತಿರಬೇಕಾದರೆ ಚಿತ್ರ ಸಾಹಿತಿ ಕವಿರಾಜ್ ಹಾಗೂ ಸಮಾನ ಮನಸ್ಕ ಗೆಳೆಯರು ಸೇರಿ 'ಉಸಿರು' ಬಳಗ ಕಟ್ಟಿಕೊಂಡು ಜನರ ಹಾಗೂ ಕೋವಿಡ್ ರೋಗಿಗಳ ನೆರವಿಗೆ ನಿಂತರು.
ಸೇವೆ ಮಾಡಬೇಕೆಂಬ ಸ್ವಯಂ ಪ್ರೇರಣೆಯಿಂದ ಸಂಚಾರಿ ವಿಜಯ್ 'ಉಸಿರು' ಬಳಗ ಸೇರಿಕೊಂಡು ಹಲವರಿಗೆ ಸಹಾಯ ಮಾಡಿದ್ದರು. ಒಬ್ಬ ಮಾನವೀಯ ವ್ಯಕ್ತಿಯಾಗಿ 'ಉಸಿರು' ಬಳಗದಲ್ಲಿ ಗುರುತಿಸಿಕೊಂಡಿದ್ದರು.
ಈಗ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ವಿಜಯ್ ಮಾಡಬೇಕು ಎಂದುಕೊಂಡಿದ್ದ ಅನೇಕ ಸೇವಾ ಕಾರ್ಯಗಳು ಬಾಕಿ ಇವೆ. ಆ ಕೆಲಸಗಳಲ್ಲಿ ಕೆಲವನ್ನಾದರೂ ಪೂರ್ತಿ ಮಾಡಿ ಅಗಲಿದ ಬಳಗದ ಗೆಳೆಯನಿಗೆ ಸೂಕ್ತ ಶ್ರದ್ಧಾಂಜಲಿಯನ್ನು ಅರ್ಪಿಸಲು 'ಉಸಿರು' ಬಳಗ ನಿರ್ಧರಿಸಿದೆ. ಈ ಬಗ್ಗೆ ಕವಿರಾಜ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.

ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗೆ ಕಾಯಕಲ್ಪ
''ಉಸಿರು ಬಳಗ ಸಂಚಾರಿ ವಿಜಯ್ ಅವರ ಸಾಮಾಜಿಕ ಕಳಕಳಿಯ ಅಪೂರ್ಣ ಆಸೆಗಳನ್ನ ಪೂರೈಸಲು ಹೊರಟಿದೆ. ಎಚ್.ಡಿ.ಕೋಟೆ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ವಿಚಾರವಾಗಿ ವಿಜಯ್ ನಮ್ಮ ಬಳಗದಲ್ಲಿ ಬಹಳ ಆಸಕ್ತಿ ವಹಿಸಿದ್ದರು'' ಎಂದಿದ್ದಾರೆ ಕವಿರಾಜ್.

ಎರಡೂ ಕಾರ್ಯಗಳನ್ನು ಮಾಡುತ್ತೇವೆ: ಉಸಿರು ಬಳಗ
''ಅಷ್ಟೇ ಅಲ್ಲದೆ ಗುಲ್ಬರ್ಗಾ ಜಿಲ್ಲೆಯ ಕಡುಬಡತನದ ಕುಟುಂಬವೊಂದರ ನಾಲ್ಕು ವರ್ಷದ ಹೆಣ್ಣು ಮಗುವೊಂದರ ಹೃದಯ ಚಿಕಿತ್ಸೆಗೆ ನೆರವಾಗಲು ವಿಜಯ್ ಮುಂದಾಗಿದ್ದರು . ಸದ್ಯ ತಿಳಿದು ಬಂದ ಮಾಹಿತಿಯಂತೆ ಆ ಮಗು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಸುಧಾರಿಸಿದ ನಂತರ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಇವೆರೆಡೂ ಕಾರ್ಯಗಳನ್ನು ಪೂರೈಸುವ ಮೂಲಕ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ವಿಜಯ್ ಸಾರ್ ನಿಮ್ಮೊಂದಿಗೆ ಸದಾ ನಮ್ಮ 'ಉಸಿರು'' ಎಂದಿದ್ದಾರೆ ಕವಿರಾಜ್.

ವಾಟ್ಸ್ಆಪ್ ಚಾಟ್ ಹಂಚಿಕೊಂಡಿದ್ದ ಕವಿರಾಜ್
'ಉಸಿರು' ಬಳಗದಲ್ಲಿ ಬಹಳ ಸಕ್ರಿಯರಾಗಿದ್ದ ಸಂಚಾರಿ ವಿಜಯ್ ತಂಡ ಮಾಡುವ ಕೆಲಸಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು. ಕೆಲವು ದಿನಗಳ ಹಿಂದಷ್ಟೆ ತಂಡವು ಕೊಡುತ್ತಿರುವ ಕಿಟ್ಗಳು ಹಾಗೂ ಇತರ ನೆರವು ಹೆಚ್ಚು ಅವಶ್ಯಕತೆ ಇರುವವರಿಗೆ ತಲುಪುತ್ತಿಲ್ಲ. ಅವಶ್ಯಕತೆ ಇರುವವರಿಗಷ್ಟೆ ತಲುಪಿಸಲು ಏನು ಮಾಡಬೇಕು ಎಂಬುದನ್ನು 'ಉಸಿರು' ಬಳಗದ ವಾಟ್ಸ್ಆಪ್ ಗ್ರೂಫ್ನಲ್ಲಿ ಹಂಚಿಕೊಂಡಿದ್ದರು. ಆ ವಾಟ್ಸ್ಅಪ್ ಸಂದೇಶವನ್ನು ಸಹ ಕವಿರಾಜ್ ಹಂಚಿಕೊಂಡಿದ್ದರು.
Recommended Video

ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದ ವಿಜಯ್
ಮಗುವೊಂದನ್ನು ಉಳಿಸಿಕೊಳ್ಳಲು ಎರಡು ವಾರ ಕಷ್ಟಪಟ್ಟಿದ್ದ ಕೊನೆಗೆ ಮಗು ಉಳಿಯದಿದ್ದಾಗ ತಂಡದ ಮೀಟಿಂಗ್ನಲ್ಲಿಯೇ ವಿಜಯ್ ಕಣ್ಣೀರು ಹಾಕಿದ್ದನ್ನು 'ಉಸಿರು' ತಂಡದ ಸದಸ್ಯರೊಬ್ಬರು ಮಾಧ್ಯಮದೊಟ್ಟಿಗೆ ಮಾತನಾಡುವಾಗ ನೆನಪಿಸಿಕೊಂಡಿದ್ದರು. ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಜೂನ್ 15 ರಂದು ಮೃತರಾದರು.


Click it and Unblock the Notifications











