ಸಂಚಾರಿ ವಿಜಯ್ರ ಅಪೂರ್ಣ ಆಸೆ ಈಡೇರಿಸಿದ 'ಉಸಿರು' ತಂಡ
ದಿವಂಗತ ನಟ ಸಂಚಾರಿ ವಿಜಯ್ ಆಸೆಯನ್ನು 'ಉಸಿರು' ತಂಡ ಪೂರೈಸಿದೆ. ಕೊರೊನಾ ಎರಡನೇ ಅಲೆ ಸಮಯ ಸಂಕಷ್ಟದಲ್ಲಿರುವವರಿಗೆ ಆಮ್ಲಜನಕ ಪೂರೈಕೆ ಸೇರಿದಂತೆ ಇತರ ಬಹು ಮುಖ್ಯ ನೆರವು ನೀಡಲು ಸ್ಥಾಪಿತವಾದ 'ಉಸಿರು' ತಂಡದಲ್ಲಿ ನಟ ಸಂಚಾರಿ ವಿಜಯ್ ಸಹ ಇದ್ದರು.
'ಉಸಿರು' ತಂಡದ ಸಭೆಯೊಂದರಲ್ಲಿ ಮಾತನಾಡಿದ್ದ ಸಂಚಾರಿ ವಿಜಯ್, ನಾಗರಹೊಳೆ ಅಭಯಾರಣ್ಯದ ಬುಡಕಟ್ಟು ಜನಗಳ ಗುಡಿಸಲುಗಳ ಮೇಲ್ಛಾವಣಿಗೆ ಹಾಕಲಾಗಿರುವ ಟಾರ್ಪನಿಲ್ ಹರಿದು ಹೋಗಿದೆ. ಅವರಿಗೆ ಹೊಸ ಟಾರ್ಪಲಿನ್ ಹಾಕಿಕೊಡಬೇಕು ಎಂದಿದ್ದರು. ಆದರೆ ಆ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನವೇ ಅಪಘಾತದಲ್ಲಿ ನಿಧನವಾದರು.
ಹಾಗಾಗಿ, ತಮ್ಮ ಗೆಳೆಯನ, ತಂಡದ ಸದಸ್ಯನ ಅಪೂರ್ಣ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ 'ಉಸಿರು' ತಂಡವು ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿ ಆನೆಮಾಳ ಬುಡಕಟ್ಟು ಜನಾಂಗದ ಗುಡಿಸಲುಗಳ ಅಳತೆಯನ್ನು ಮೂರು ವಾರದ ಹಿಂದೆಯೇ ತೆಗೆದುಕೊಂಡಿತ್ತು. ಕೆಲವು ದಿನಗಳ ಹಿಂದೆ ಮತ್ತೆ ಹಾಡಿಗೆ ಭೇಟಿ ನೀಡಿದ ತಂಡದ ಎಲ್ಲ ಸದಸ್ಯರು, ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳ ನೆರವಿನಿಂದ ಗುಡಿಸಲುಗಳಿಗೆ ಹೊಸ ಟಾರ್ಪಲಿನ್ ಹೊದಿಕೆ ಹಾಕಿದ್ದಾರೆ. ಆ ಮೂಲಕ ವಿಜಯ್ ಆಸೆಯನ್ನು ಪೂರೈಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ 'ಉಸಿರು' ಸಂಸ್ಥಾಪಕ ಸದಸ್ಯ ಚಿತ್ರ ಸಾಹಿತಿ ಕವಿರಾಜ್, ''ಸಂಚಾರಿ ವಿಜಯ್ ನಮ್ಮ ಬಳಗದ ಸಕ್ರಿಯ ಸದಸ್ಯರಾಗಿದ್ದರು. ನಾಗರಹೊಳೆ ಕಾಡಿನ ಬುಡಕಟ್ಟು ಜನಾಂಗದ ಹಾಡಿಗಳಿಗೆ ಟಾರ್ಪಲಿನ್ ಹೊದಿಕೆ ಹೊದಿಸಬೇಕು ಎಂಬುದು ಅವರ ಅಪೂರ್ಣ ಆಸೆಯಾಗಿತ್ತು. ಅದನ್ನು ಇಂದು ನಾವು ಪೂರೈಸಿದ್ದೇವೆ. ವಿಜಯ್ ಸರ್, ಎಂದೂ ನಮ್ಮ ಮನಗಳಲ್ಲಿ ಅಚಲವಾಗಿ ಉಳಿಯಲಿದ್ದಾರೆ'' ಎಂದರು. ನಟಿ ನೀತು ಶೆಟ್ಟಿ ಹಾಗೂ ಇತರ ಉಸಿರು ತಂಡದ ಸದಸ್ಯರು ಸ್ಥಳದಲ್ಲಿ ಹಾಜರಿದ್ದರು.
ನಟ ಸಂಚಾರಿ ವಿಜಯ್ 'ಉಸಿರು' ಬಳಗದ ಸಕ್ರಿಯ ಸದಸ್ಯರಾಗಿದ್ದರು. ಕವಿರಾಜ್ 'ಉಸಿರು' ಬಳಗ ಪ್ರಾರಂಭಿಸಿದಾಗ ಸ್ವಯಂಪ್ರೇರಣೆಯಿಂದ 'ಉಸಿರು' ತಂಡ ಸೇರಿದ್ದರು. ಹಾಗೂ ಬಹಳ ಸಕ್ರಿಯರಾಗಿ ತಂಡದಲ್ಲಿ ಕೆಲಸ ಮಾಡುತ್ತಿದ್ದರು.
Recommended Video
ಇಂದಿಗೆ ಒಂದು ತಿಂಗಳ ಹಿಂದೆ (ಜೂನ್ 12) ರಂದು ರಾತ್ರಿ ದ್ವಿಚಕ್ರ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವಿಜಯ್ ಅವರನ್ನು ಜೂನ್ 15ರಂದು ಮೃತ ಎಂದು ಘೋಷಿಸಲಾಯಿತು.


Click it and Unblock the Notifications











