Gabru Sathya Teaser: ಚಡ್ಡಿಯಲ್ಲಿ ಕೂರಿಸಿದ್ದಕ್ಕೆ ಸ್ಟೇಷನ್ಗೆ ಬಾಂಬ್ ಇಟ್ಟ ಗಬ್ರು ಸತ್ಯ: ಫುಲ್ ಸೈಕ್ 'ಉತ್ತರಕಾಂಡ'
ನಟ ರಾಕ್ಷಸ ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಡಗರ ಹೆಚ್ಚಿಸೋಕೆ 'ಉತ್ತರಕಾಂಡ' ಚಿತ್ರದ ಗಬ್ರು ಸತ್ಯ ಕ್ಯಾರೆಕ್ಟರ್ ಇಂಟ್ರೊಡಕ್ಷನ್ ಟೀಸರ್ ರಿಲೀಸ್ ಆಗಿದೆ. ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೀತು. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಿನಿಮಾ ಇದು ಅನ್ನೋದು ಟೀಸರ್ನಲ್ಲೇ ಗೊತ್ತಾಗ್ತಿದೆ.
ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ 'ಉತ್ತರಕಾಂಡ' ಸಿನಿಮಾ ನಿರ್ಮಾಣವಾಗ್ತಿದೆ. ರತ್ನನ್ಪ್ರಪಂಚ ಖ್ಯಾತಿಯ ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೋಹಕ ತಾರೆ ರಮ್ಯ ಚಿತ್ರದಲ್ಲಿ ಡಾಲಿಗೆ ಜೊತೆಯಾಗಿದ್ದಾರೆ. 'ಇನ್ ಮ್ಯಾಲಿಂದ ಫುಲ್ ಗುದ್ದಾಂಗುದ್ದಿ' ಅಂತ ಸಿನಿಮಾ ಸೆಟ್ಟೇರಿದ ದಿನವೇ ಚಿತ್ರತಂಡ ನಿರೀಕ್ಷೆ ಹುಟ್ಟಿಸಿತ್ತು. ಅದಕ್ಕೆ ತಕ್ಕಂತೆ ಗಬ್ರು ಸತ್ಯ ರಿಲೀಜ್ ಟೀಸರ್ ಸದ್ದು ಮಾಡ್ತಿದೆ. ಮೊದಲ ನೋಟದಲ್ಲೇ ಸ್ಯಾಂಪಲ್ ಗಮನ ಸೆಳೆಯುತ್ತಿದೆ.

ಪಕ್ಕಾ ಪೋಲಿ, ಪರೋಡಿ, ಚಾಲಾಕಿ ಗಬ್ರು ಸತ್ಯನ ಪಾತ್ರದಲ್ಲಿ ಧನಂಜಯ್ ಮೋಡಿ ಮಾಡಿದ್ದಾರೆ. ಪೊಲೀಸ್ ಸ್ಟೇಷನ್ನಿಂದ ರಿಲೀಜ್ ಆಗಿ ಹೊರ ಬರುವ ಸತ್ಯ ಪೊಲೀಸರಿಗೆ ಹಾವಳಿ ಇಡುವ ಸಣ್ಣ ಝಲಕ್ ಅನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಆ ಮೂಲಕ ಚಿತ್ರದಲ್ಲಿ ಡಾಲಿ ಪಾತ್ರ ಹೇಗಿರುತ್ತದೆ ಅನ್ನೋದರ ಪರಿಚಯ ಮಾಡಿಸಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸಂಭಾಷಣೆ ಕಿಕ್ ಕೊಡುವಂತಿದೆ.
ವಿಜಯಪುರ ಜಿಲ್ಲೆಯ ಚಮದ್ಪುರ ಪೊಲೀಸ್ ಸ್ಟೇಷನ್ನಲ್ಲಿ ಗಬ್ರು ಸತ್ಯನನ್ನು ಬರೀ ಚಡ್ಡಿಯಲ್ಲಿ ಕೂರಿಸಲಾಗಿರುತ್ತದೆ. ಅಲ್ಲಿಂದಲೇ ಟೀಸರ್ ಶುರುವಾಗುತ್ತದೆ. ಎನ್ಕೌಂಟರ್ ಆಗಿಬಿಡ್ತೀಯಾ ಹುಷಾರು ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಚ್ಚರಿಕೆ ಕೊಟ್ಟು ಬಿಟ್ಟು ಕಳುಹಿಸುತ್ತಾರೆ. ಅಲ್ಲಿಂದ ಹೊರ ಬರುವ ಗಬ್ರು ಸತ್ಯ, ಹ್ಯಾಪಿ ಬರ್ತ್ಡೇ ಟು ಮಿ ಎಂದು ಹೇಳಿ ಇನ್ಸ್ಪೆಕ್ಟರ್ಗೆ ಬಾದೂಷ ಬಾಕ್ಸ್ ತಂದುಕೊಡುತ್ತಾನೆ.
ಸತ್ಯ ಸ್ಟೇಷನ್ನಿಂದ ಹೊರ ಬಂದಮೇಲೆ ಅದು ಬಾದೂಷ ಬಾಕ್ಸ್ ಅಲ್ಲ, ಅದರಲ್ಲಿ ಬಾಂಬ್ ಇದೆ ಅನ್ನೋದು ಗೊತ್ತಾಗುತ್ತದೆ. ಬಾಂಬ್ ಸ್ಫೋಟಗೊಳ್ಳುತ್ತದ್ದಂತೆ ಸಿಗರೇಟ್ ಸೇದುತ್ತಾ ಸತ್ಯ 'ಕರ್ನಾಟಕದ್ ಮನಿ ಮಗ' ಯಾರ್ಲಾ ಎನ್ನುವ ಡೈಲಾಗ್ ಮಜವಾಗಿದೆ. ಟೀಸರ್ ನೋಡಿದವರು ಗಬ್ರು ಸತ್ಯನ ಪಾತ್ರ ಸಖತ್ ಸೈಕ್ ಆಗಿದೆ ಎನ್ನುತ್ತಿದ್ದಾರೆ.
ಚರಣ್ ರಾಜ್ ಮ್ಯೂಸಿಕ್ ಗಬ್ರು ಸತ್ಯನ ಹಾವಳಿಗೆ ಮತ್ತಷ್ಟು ಖದರ್ ತಂದು ಕೊಟ್ಟಿದೆ. 'ರತ್ನನ್ ಪ್ರಪಂಚ' ಚಿತ್ರದಲ್ಲಿ ಉಡಾಳ್ ಬಾಬು ರಾವ್ ಎಪಿಸೋಡ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಪ್ರಮೋದ್ ಆ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಅದೇ ಕಾರಣಕ್ಕೋ ಏನೋ ಈ ಬಾರಿ ಸಂಪೂರ್ಣ ಚಿತ್ರವನ್ನು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ರೋಹಿತ್ ಪದಕಿ ಕಟ್ಟಿಕೊಡುತ್ತಿದ್ದಾರೆ. 'ಟಗರು' ಚಿತ್ರದ ಡಾಲಿಯನ್ನು ಮೀರಿಸುವಂತೆ ಗಬ್ರು ಸತ್ಯನ ಪಾತ್ರವನ್ನು ಡಿಸೈನ್ ಮಾಡಿರುವಂತೆ ಕಾಣುತ್ತಿದೆ.
ಧನಂಜಯ್ ನಟನೆಯ 'ಗುರುದೇವ್ ಹೊಯ್ಸಳ' ಕಥೆ ಕೂಡ ಉತ್ತರ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಮಾಡಲಾಗಿತ್ತು. ಆ ಸಿನಿಮಾದಲ್ಲಿ ಖಾಕಿ ತೊಟ್ಟು ಅಬ್ಬರಿಸಿದ್ದ ಡಾಲಿ ಈಗ ರೌಡಿ ಗಬ್ರು ಸತ್ಯನಾಗಿ ನಟಿಸುತ್ತಿದ್ದಾರೆ. ಧನಂಜಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ಟೀಸರ್ ರಿಲೀಸ್ ಆಗಿದೆ. ಅಸಲಿ ಸಿನಿಮಾ ಚಿತ್ರೀಕರಣ ಇನ್ನಷ್ಟೆ ಶುರುವಾಗಬೇಕಿದೆ.
ಬಹಳ ವರ್ಷಗಳ ನಂತರ ನಟಿ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಈಗಾಗಲೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಉತ್ತರಕಾಂಡ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಉತ್ತರ ಕರ್ನಾಟಕ ಹಿನ್ನೆಲೆಯ ಕಥೆಯಲ್ಲಿ ರಮ್ಯಾ ಪಾತ್ರವೂ ಕುತೂಹಲ ಮೂಡಿಸಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ಸದ್ದು ಮಾಡ್ತಿದ್ದು ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. 'ರತ್ನನ್ ಪ್ರಪಂಚ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಶ್ರಮಿಸುತ್ತಿದೆ.


Click it and Unblock the Notifications











