Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಾಂತಿ-ಕ್ರಾಂತಿ' ಸಿನಿಮಾಕ್ಕೆ ಚಿತ್ರೋದ್ಯಮ ಕೊಟ್ಟ ಕಷ್ಟಗಳನ್ನು ನೆನಪಿಸಿಕೊಂಡ ರವಿಚಂದ್ರನ್
ನಟ ವಿ.ರವಿಚಂದ್ರನ್ ಅನುಭವಗಳ ಮೂಟೆ. ಅವರ ಅನುಭವದ ಮೂಸೆಯಲ್ಲಿ ಬಗೆದಷ್ಟೂ ಜೀವನ ಕತೆಗಳಿವೆ. ಹಲವರು ಕನಸು ಕಾಣಲು ಸಹ ಹೆದರುತ್ತಿದ್ದಂಥಹಾ ಕತೆಗಳನ್ನೆಲ್ಲ ಸಿನಿಮಾ ಮಾಡಿ ಮುಗಿಸಿದ 'ರಣಧೀರ' ಅವರು. ಅವರ ಹುಚ್ಚುತನಗಳಿಗಾಗಿಯೇ ಅವರನ್ನು 'ಕ್ರೇಜಿಸ್ಟಾರ್' ಎನ್ನುವುದು.
ರವಿಚಂದ್ರನ್ ಸಿನಿಮಾ ಜೀವನದ ದೊಡ್ಡ ಕ್ರೇಜಿತನವೆಂದರೆ ಅದು 'ಶಾಂತಿ ಕ್ರಾಂತಿ' ಹಾಗೂ 'ಏಕಾಂಗಿ' ಸಿನಿಮಾಗಳು. ಅದರಲ್ಲಿಯೂ ತಂತ್ರಜ್ಞಾನ, ಬಜೆಟ್, ತಾಂತ್ರಿಕತೆ ಎಲ್ಲವೂ ಸೀಮಿತವಾಗಿದ್ದ 1990 ರ ದಶಕದಲ್ಲಿ ಮಾಡಿದ 'ಶಾಂತಿ ಕ್ರಾಂತಿ' ರವಿಚಂದ್ರನ್ರ ಅತಿದೊಡ್ಡ ಕ್ರೇಜಿತನವೆಂದೇ ಹೇಳಬೇಕು.
ರವಿಚಂದ್ರನ್ ಬರ್ತ್ಡೇಗೆ ಪುತ್ರ 'ತ್ರಿ'ವಿಕ್ರಮನ ಸಾಂಗ್ ರಿಲೀಸ್ : ಶಿವಣ್ಣ ಸಾಥ್
Recommended Video
ಭಾರಿ ದೊಡ್ಡ ಅನುಭವವನ್ನು ರವಿಚಂದ್ರನ್ ಪಾಲಿಗೆ ಕೊಟ್ಟಿದ್ದ ಆ ಸಿನಿಮಾ ರವಿ ಅವರನ್ನು ಆರ್ಥಿಕವಾಗಿ ಪಾತಾಳಕ್ಕೆ ತಳ್ಳಿತ್ತು. ವಾಸವಿದ್ದ ಮನೆಯನ್ನೂ ಕಳೆದುಕೊಳ್ಳುವಂತೆ ಮಾಡಿತ್ತು. ಈಗ ನಿಂತು ನೋಡಿದರೆ ಅದೊಂದು ಅದ್ಭುತ ಸಿನಿಮಾ, ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಆದರೆ ಆಗ ಆ ಸಿನಿಮಾವನ್ನು ಕೆಳಕ್ಕೆ ಎಳೆಯಲು ಚಿತ್ರೋದ್ಯಮ ಮಾಡಿದ್ದ ಪ್ರಯತ್ನಗಳು ವಾಕರಿಕೆ ಹುಟ್ಟಿಸುವಂತಹವು. ತಮ್ಮದೇ ಚಿತ್ರೋದ್ಯಮದವರು 'ಶಾಂತಿ-ಕ್ರಾಂತಿ' ಸಿನಿಮಾಕ್ಕೆ ಕೊಟ್ಟ ಸಮಸ್ಯೆಗಳನ್ನು, ನಿರೂಪಕಿ ಅನುಶ್ರೀ ಅವರೊಟ್ಟಿಗೆ 'ಆಂಕರ್ ಅನುಶ್ರೀ' ಯೂಟ್ಯೂಬ್ ಚಾನೆಲ್ನ 'ಅಪೂರ್ವ ಸಂಗಮ' ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ ರವಿಚಂದ್ರನ್.
ಇಂಡಸ್ಟ್ರಿಯವರು ಕೊಟ್ಟ ತೊಂದರೆ ಅಷ್ಟಿಷ್ಟಲ್ಲ: ರವಿಚಂದ್ರನ್ ನೆನಪು
''ಇಂಡಸ್ಟ್ರಿಯಲ್ಲಿ ಎಷ್ಟು ತೊಂದರೆ 'ಶಾಂತಿ-ಕ್ರಾಂತಿ' ಸಿನಿಮಾಕ್ಕೆಂದರೆ ಅದನ್ನು ಹೇಳಿಕೊಂಡರೆ ಈಗ ಅತಿ ಎಂದುಕೊಳ್ಳುತ್ತಾರೆ. ನಾವು ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದೆವು. ಆದರೆ ಏನಾದರೂ ಮಾಡಿ ನಮಗೆ ತೊಂದರೆ ಕೊಡಲೆಂದು ಕೆಲವರು ಇದ್ದರು. ಚಿತ್ರೀಕರಣ ನಡೆಸುವ ವೇಳೆಗೆ ಸರಿಯಾಗಿ ಪ್ರತಿಭಟನೆ ಶುರು ಮಾಡಿಬಿಟ್ಟರು. ನಾವು ಹೋಗಿ ಕೇಳಿಕೊಂಡೆವು, ನಾಲ್ಕು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೇವೆ. ನೀವು ಪ್ರತಿಭಟನೆ ಮಾಡಿದರೆ ನಮಗೆ ಕಷ್ಟ ಆಗುತ್ತದೆ ಎಂದು ಕೇಳಿಕೊಂಡರೂ ಕೇಳಲಿಲ್ಲ. ಸ್ವಲ್ಪ ಕರುಣೆಯನ್ನೂ ತೋರಿಸಲಿಲ್ಲ. ಸತ್ತರೆ ಸಾಯಲಿ ಎಂಬ ಉದ್ದೇಶ ಅವರಿಗಿತ್ತು'' ಎಂದು ನೆನಪು ಮಾಡಿಕೊಂಡರು ರವಿಚಂದ್ರನ್.
''ಒಂದು ದಿನ ಸಮಸ್ಯೆ ಕೊಟ್ಟರೆ, ಒಂದು ವರ್ಷ ತಡವಾಗುತ್ತಿತ್ತು''
''ನಮ್ಮ ಸಿನಿಮಾಕ್ಕೆ ಒಂದು ದಿನ ತೊಂದರೆ ಕೊಟ್ಟುಬಿಟ್ಟರೆ ಸಾಕು, ಸಿನಿಮಾ ಒಂದು ವರ್ಷ ತಡವಾಗಿಬಿಡುತ್ತಿತ್ತು. ನಾನು ಮತ್ತೆ ರಜನೀಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ ಇವರುಗಳ ಡೇಟ್ಸ್ಗಳನ್ನೆಲ್ಲ ತೆಗೆದುಕೊಂಡು ಮತ್ತೆ ಚಿತ್ರೀಕರಣ ಮಾಡಬೇಕಿತ್ತು. ಇಂಡಸ್ಟ್ರಿಯವರಿಂದ ಅನುಭವಿಸಿದ ಆ ಸಿನಿಮಾಕ್ಕೆ ಅನುಭವಿಸಿದ ಕಷ್ಟ-ಅಷ್ಟಿಷ್ಟಲ್ಲ. ಪ್ರತಿ ಹೆಜ್ಜೆಯಲ್ಲೂ ಅಸಹಕಾರ ಮಾಡಿದರು. ಯಾರು ಏನು ತೊಂದರೆ ಕೊಟ್ಟರು ಎಂಬುದು ನನಗೆ ಗೊತ್ತಿದೆ'' ಎಂದರು ರವಿಚಂದ್ರನ್.
ಟಿಕೆಟ್ ದರ ಹೆಚ್ಚಳಕ್ಕೂ ಅನುಮತಿ ಕೊಡಲಿಲ್ಲ: ರವಿಚಂದ್ರನ್
''ಶಾಂತಿ-ಕ್ರಾಂತಿ' ಸಿನಿಮಾದ ಟಿಕೆಟ್ ಅನ್ನು ಮೂರು ರುಪಾಯಿ ಹೆಚ್ಚು ಮಾಡಿ ಐದು ರುಪಾಯಿ ಟಿಕೆಟ್ಗೆ ಮಾರುತ್ತೇನೆ ಎಂದು ಕೇಳಿಕೊಂಡೆ ಆಗಲೂ ಒಪ್ಪಲಿಲ್ಲ. ಒಬ್ಬ ವ್ಯಕ್ತಿ 10 ಲಕ್ಷ ಹಾಕಿ ಸಿನಿಮಾ ಮಾಡಿರುತ್ತಾನೆ, ಅದನ್ನು ಎರಡು ರುಪಾಯಿಗೆ ಸಿನಿಮಾ ತೋರಿಸುತ್ತಾರೆ. ನಾನು ಹತ್ತು ಕೋಟಿ ಹಾಕಿ ಸಿನಿಮಾ ಮಾಡಿರುತ್ತೇನೆ, ನನ್ನ ಸಿನಿಮಾವನ್ನು ಎರಡು ರೂಪಾಯಿಗೆ ತೋರಿಸಿದರು. ಇದನ್ನು ನಾನು ಪ್ರಶ್ನೆ ಮಾಡಿದೆ ಆದರೆ ಯಾರೂ ಒಪ್ಪಲಿಲ್ಲ. ಅಂದು ಅವರು ಒಪ್ಪಿದ್ದಿದ್ದರೆ, 'ಶಾಂತಿ-ಕ್ರಾಂತಿ' ಸಿನಿಮಾದ ಸಾಲವನ್ನು ಇನ್ನೊಂದು ಐದು ವರ್ಷ ಬೇಗ ತೀರಿಸುತ್ತಿದ್ದೆ'' ಎಂದಿದ್ದಾರೆ ರವಿಚಂದ್ರನ್.
ಸಿನಿಮಾ ನಿಲ್ಲಿಸುವುದು ಬೇಡ ಎಂದಿದ್ದ ತಂದೆ ವೀರಾಸ್ವಾಮಿ
'ಶಾಂತಿ-ಕ್ರಾಂತಿ' ಸಿನಿಮಾದ ಅನೇಕ ವಿಷಯಗಳನ್ನು ನಟ ರವಿಚಂದ್ರನ್ 'ಆಂಕರ್ ಅನುಶ್ರೀ' ಯೂಟ್ಯೂಬ್ ಚಾನೆಲ್ನ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 'ಶಾಂತಿ-ಕ್ರಾಂತಿ' ಸಿನಿಮಾ ಪ್ರಾರಂಭ ಮಾಡಿದ ಕೆಲವೇ ದಿನಗಳಲ್ಲಿ ಸಿನಿಮಾ ತಾನು ಅಂದುಕೊಂಡಂತೆ ಬರುತ್ತಿಲ್ಲ ಎಂಬುದು ರವಿಚಂದ್ರನ್ ಅವರಿಗೆ ಗೊತ್ತಾಯಿತಂತೆ, ಸಿನಿಮಾ ನಿಲ್ಲಿಸುವ ಆಲೋಚನೆಯೂ ಬಂತಂತೆ, ಆದರೆ ಅವರ ತಂದೆ ವೀರಾಸ್ವಾಮಿ ಅದಕ್ಕೆ ಒಪ್ಪಲಿಲ್ಲವಂತೆ, 'ನಿನ್ನನ್ನು ನಂಬಿ ರಜನೀಕಾಂತ್, ನಾಗಾರ್ಜುನ ಡೇಟ್ಸ್ ಕೊಟ್ಟಿದ್ದಾರೆ. ನೀನು ಸಿನಿಮಾ ನಿಲ್ಲಿಸಿದರೆ ಗೌರವಕ್ಕೆ ಧಕ್ಕೆ ಬರುತ್ತದೆ, ಮುಂದೆ ಯಾರೂ ಈ ಸಾಹಸಕ್ಕೆ ಕೈ ಹಾಕುವುದಿಲ್ಲ. ಏನಾದರೂ ಆಗಲಿ ಸಿನಿಮಾ ಮುಗಿಸು'' ಎಂದರಂತೆ. ಬಳಿಕ ರವಿಚಂದ್ರನ್ ಸಿನಿಮಾ ಪೂರ್ಣಗೊಳಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರವಿಚಂದ್ರನ್ ಇಬ್ಬರೂ ಭಾಗವಹಿಸಿದ್ದ 'ಅಪೂರ್ವ ಸಂಗಮ' ಕಾರ್ಯಕ್ರಮದಲ್ಲಿ ಹಲವು ಆಸಕ್ತಿಕರ ವಿಷಯಗಳನ್ನು ಇಬ್ಬರು ಸ್ಟಾರ್ ನಟರು ಮಾತನಾಡಿದ್ದಾರೆ.